ಕುಂದಾಪುರದಲ್ಲಿ ಜಿಎಐಎಲ್ ನಿಂದ ಆಮ್ಲಜನಕ ಘಟಕ ನಿರ್ಮಾಣ
ವೈದ್ಯಕೀಯ ಆಮ್ಲಜನಕ ಲಭ್ಯತೆ ಹೆಚ್ಚಿಸುವ ನಿಟ್ಟಿನಲ್ಲಿ ಜಿಲ್ಲೆಯ ಕುಂದಾಪುರ ತಾಲ್ಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಹಾಗೂ ದೇಶದ ಇತರ 9 ಸ್ಥಳಗಳಲ್ಲಿ ಆಮ್ಲಜನಕ ಘಟಕಗಳನ್ನು ನಿರ್ಮಿಸಲಾಗುವುದು ಎಂದು ಭಾರತೀಯ ಅನಿಲ ಪ್ರಾಧಿಕಾರ (ಜಿಎಐಎಲ್) ತಿಳಿಸಿದೆ.
Published: 16th May 2021 01:23 PM | Last Updated: 16th May 2021 01:23 PM | A+A A-

ಆಕ್ಸಿಜನ್ ಪೂರೈಕೆ ವ್ಯವಸ್ಥೆ
ಉಡುಪಿ: ವೈದ್ಯಕೀಯ ಆಮ್ಲಜನಕ ಲಭ್ಯತೆ ಹೆಚ್ಚಿಸುವ ನಿಟ್ಟಿನಲ್ಲಿ ಜಿಲ್ಲೆಯ ಕುಂದಾಪುರ ತಾಲ್ಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಹಾಗೂ ದೇಶದ ಇತರ 9 ಸ್ಥಳಗಳಲ್ಲಿ ಆಮ್ಲಜನಕ ಘಟಕಗಳನ್ನು ನಿರ್ಮಿಸಲಾಗುವುದು ಎಂದು ಭಾರತೀಯ ಅನಿಲ ಪ್ರಾಧಿಕಾರ (ಜಿಎಐಎಲ್) ತಿಳಿಸಿದೆ.
ಪ್ರೆಷರ್ ಸ್ವಿಂಗ್ ಅಡ್ಸಾರ್ಬ್ ಷನ್ (ಪಿಎಸ್ಎ) ವೈದ್ಯಕೀಯ ಆಮ್ಲಜನಕ ಸ್ಥಾವರ ನಿರ್ಮಾಣದ ಕಾಮಗಾರಿ ಶೀಘ್ರವೇ ಆರಂಭವಾಗಲಿದೆ. ಘಟಕಕ್ಕೆ ಜಮೀನು ಗುರುತಿಸಲಾಗಿದೆ. ಜೂನ್ ಅಂತ್ಯ ಇಲ್ಲವೇ ಜುಲೈನಲ್ಲಿ ಘಟಕ ಕಾರ್ಯಾರಂಭ ಮಾಡಲಿದೆ ಎಂದು ತಾಲ್ಲೂಕು ಸರ್ಕಾರಿ ಆಸ್ಪತ್ರೆಯ ಕೋವಿಡ್ ನೋಡಲ್ ಅಧಿಕಾರಿ ಡಾ ನಾಗೇಶ್ ಕುಂದಾಪುರ ತಿಳಿಸಿದ್ದಾರೆ.
ಈ ಘಟಕ ಪ್ರತಿ ನಿಮಿಷಕ್ಕೆ 500 ಲೀಟರ್ ಆಮ್ಲಜನಕ ಉತ್ಪಾದಿಸಲಿದ್ದು, ದಿನಕ್ಕೆ 100 ಬೃಹತ್ ಸಿಲಿಂಡರ್ ಗಳನ್ನು ತುಂಬುವ ಸಾಮರ್ಥ್ಯ ಹೊಂದಲಿದೆ. ಒಂದು ಬೃಹತ್ ಸಿಲಿಂಡರ್ ನಲ್ಲಿ 7,000 ಲೀಟರ್ ಆಮ್ಲಜನಕವನ್ನು ತುಂಬಬಹುದಾಗಿದೆ. ಆದ್ದರಿಂದ ಮುಂದಿನ ತಿಂಗಳಿನಿಂದ ತಾಲ್ಲೂಕಿನಲ್ಲಿ ಅಗತ್ಯ ಆಮ್ಲಜನಕ ಲಭ್ಯವಿರಲಿದೆ ಎಂದು ಅವರು ಹೇಳಿದ್ದಾರೆ.
ಈ ಹಿಂದೆ ಇದೇ ವಿಚಾರವಾಗಿ ಮಾತನಾಡಿದ್ದ ಸಂಸದೆ ಶೋಭಾ ಕರಂದ್ಲಾಜೆ ಅವರು, ರಾಜ್ಯದ 28 ಜಿಲ್ಲೆಗಳಲ್ಲಿ ಆಮ್ಲಜನಕ ಉತ್ಪಾದನಾ ಘಟಕಗಳನ್ನು ತೆರೆಯಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದ್ದು, ಈ ಎಲ್ಲಾ ಘಟಕಗಳು ಕೇಂದ್ರ ಪೆಟ್ರೋಲಿಯಂ ಸಚಿವಾಲಯದ ಸಹಯೋಗದಲ್ಲಿ ನಿರ್ಮಾಣವಾಗಲಿವೆ.
ಉಡುಪಿಯ ಜಿಲ್ಲೆಯಲ್ಲಿ ಕುಂದಾಪುರ ತಾಲ್ಲೂಕು ಆಸ್ಪತ್ರೆ ಆವರಣದಲ್ಲಿ ಆಮ್ಲಜನಕ ಉತ್ಪಾದನಾ ಘಟಕವನ್ನು ಜಿಎಐಎಲ್ ಸಂಸ್ಥೆಯು ನಿರ್ಮಿಸಲಿದೆ. ಚಿಕ್ಕಮಗಳೂರಿನ ಜಿಲ್ಲಾಆಸ್ಪತ್ರೆಯ ಆವರಣದಲ್ಲಿ ಸಿಪಿಸಿಎಲ್ (ಚೆನ್ನೈ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್) ಸಂಸ್ಥೆಯು ಆಮ್ಲಜನಕ ಘಟಕ ನಿರ್ಮಿಸಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದರು.