ಬೆಂಗಳೂರು: ಕೊರೋನಾ ಸೋಂಕಿತ ಕುಟುಂಬಕ್ಕೆ ನೆರೆಹೊರೆಯವರಿಂದ ಹಲ್ಲೆ, ಬೆದರಿಕೆ

ಕೊರೋನಾ ಸೋಂಕಿತ ತಮ್ಮ ಕುಟುಂಬಕ್ಕೆ ನೆರೆಹೊರೆಯವರು ಕಿರುಕುಳ ನೀಡಿ ಹಲ್ಲೆ ಮಾಡಿ ಬೆದರಿಸುತ್ತಿದ್ದಾರೆ ಎಂದು  20 ವರ್ಷದ ನರ್ಸಿಂಗ್ ವಿದ್ಯಾರ್ಥಿ ದೂರು ದಾಖಲಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕೊರೋನಾ ಸೋಂಕಿತ ತಮ್ಮ ಕುಟುಂಬಕ್ಕೆ ನೆರೆಹೊರೆಯವರು ಕಿರುಕುಳ ನೀಡಿ ಹಲ್ಲೆ ಮಾಡಿ ಬೆದರಿಸುತ್ತಿದ್ದಾರೆ ಎಂದು  20 ವರ್ಷದ ನರ್ಸಿಂಗ್ ವಿದ್ಯಾರ್ಥಿ ದೂರು ದಾಖಲಿಸಿದ್ದಾರೆ.

ಇಂದಿರಾನಗರ ಠಾಣೆ ವ್ಯಾಪ್ತಿಯಲ್ಲಿ ಕೊರೊನಾ ಸೋಂಕಿತರ ಕುಟುಂಬಕ್ಕೆ ಜೀವ ಬೆದರಿಕೆ ಹಾಕಿ, ಸದಸ್ಯರೊಬ್ಬರ ಮೇಲೆ ಚಾಕುವಿನಿಂದ ಹಲ್ಲೆ ಮಾಡಲಾಗಿದೆ.

 ಮೇ 14ರಂದು ರಾತ್ರಿ ಈ ಘಟನೆ ನಡೆದಿದೆ. ಪ್ರಿಯದರ್ಶಿನಿ ಎಂಬುವರು ದೂರು ನೀಡಿದ್ದಾರೆ. ಆರೋಪಿಗಳಾದ ಲಕ್ಷ್ಮಿಪುರದ ರಾಮ್, ಪ್ರಭು ಹಾಗೂ ಅರ್ಜುನ್ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ.

ಪ್ರಿಯದರ್ಶಿನಿ ಅವರು ತಂದೆ– ತಾಯಿ ಜೊತೆ ವಾಸವಿದ್ದಾರೆ. 2020ರ ಸೆಪ್ಟೆಂಬರ್‌ನಲ್ಲಿ ತಾಯಿಗೆ ಕೊರೊನಾ ಸೋಂಕು ತಗುಲಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಅವರು ಗುಣಮುಖರಾಗಿದ್ದರು. ಆದರೆ, ಅಕ್ಕ– ಪಕ್ಕದ ಕೆಲ ಮನೆಯವರು ಅವರಿಗೆ ಕಿರುಕುಳ ನೀಡಲಾರಂಭಿಸಿದ್ದರು. ‘ನಮಗೆ ಕೊರೊನಾ ಸೋಂಕು ತಂದು ಹಚ್ಚುತ್ತಿದ್ದಿರಾ’ ಎಂದು ಯಾವಾಗಲೂ ತೊಂದರೆ ಕೊಡುತ್ತಿದ್ದರು’ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಆರೋಪಿಗಳಾದ ರಾಮ್, ಪ್ರಭು ಹಾಗೂ ಅರ್ಜುನ್ ಸಹ ಪದೇ ಪದೇ ದೂರುದಾರ ಯುವತಿ ಮತ್ತು ಅವರ ಕುಟುಂಬದವರ ಜೊತೆ ಗಲಾಟೆ ಮಾಡುತ್ತಿದ್ದರು. ಇದೇ ಮೇ 14ರಂದು ಸಂಜೆ ಯುವತಿ ಮನೆ ಬಳಿ ಬಂದಿದ್ದ ಆರೋಪಿಗಳು, ಅವಾಚ್ಯ ಶಬ್ದಗಳಿಂದ ಬೈದಿದ್ದರು. ಅದನ್ನು ಪ್ರಶ್ನಿಸಿದ್ದಕ್ಕೆ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ್ದರು. 

ಇದೇ ಸಂದರ್ಭದಲ್ಲೇ ಚಾಕುವಿನಿಂದ ದೂರುದಾರ ಯುವತಿ ಕೈಗೂ ಆರೋಪಿಗಳು ಇರಿದಿದ್ದಾರೆ. ಮೂವರು ಆರೋಪಿಗಳು ಪರಾರಿಯಾಗಿದ್ದಾರೆ, ಪ್ರಕರಣ ದಾಖಲಿಸಿಕೊಂಡಿರುವ ಇಂದಿರಾನಗರ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com