ಶಿವಮೊಗ್ಗ: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಕಾಲಿಕ ನಿಧನ ಹಿನ್ನೆಲೆ ಅರಣ್ಯ ಇಲಾಖೆ ವಿಶೇಷ ರೀತಿಯಲ್ಲಿ ಗೌರವ ಸಲ್ಲಿಸಿದ್ದು, ಸಕ್ರೆಬೈಲು ಮರಿಯಾನೆಯೊಂದಕ್ಕೆ ಪುನೀತ್ ಅವರ ಹೆಸರನ್ನೇ ಇಟ್ಟಿದ್ದಾರೆ.
ಶಿವಮೊಗ್ಗದ ಗಾಜನೂರು ಸಮೀಪದ ಸಕ್ರೆಬೈಲು ಆನೆ ಬಿಡಾರದ ನೇತ್ರಾ ಆನೆ ಕಳೆದ ಎರಡು ವರ್ಷದ ಹಿಂದೆ ಗಂಡು ಮರಿಯಾನೆ ಜನ್ಮ ನೀಡಿತ್ತು.
ಪುನೀತ್ ರಾಜ್ಕುಮಾರ್ ಅವರು ಅರಣ್ಯ ಹಾಗೂ ವನ್ಯಜೀವಿಗಳ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದರು. ವನ್ಯಜೀವಿ ಸಂಬಂಧಿತ ಸಾಕ್ಷ್ಯಚಿತ್ರದ ಚಿತ್ರೀಕರಣಕ್ಕೆ ಸಕ್ರೆಬೈಲಿಗೆ ಪುನೀತ್ ರಾಜ್ಕುಮಾರ್ ಆಗಮಿಸಿದ್ದರು. ಕೆಲ ತಿಂಗಳ ಹಿಂದೆಯಷ್ಟೇ ಸಕ್ರೆಬೈಲು ಆನೆ ಬಿಡಾರಕ್ಕೆ ಭೇಟಿ ನೀಡಿ ಮರಿಯಾನೆಯನ್ನು ಕಂಡು ಪ್ರೀತಿಯಿಂದ ಮುದ್ದಾಡಿದ್ದರು.
ಸದ್ಯ ನೇತ್ರಾ ತಾಯಿ ಆನೆಯಿಂದ ಮರಿಯಾನೆಯನ್ನು ಬೇರ್ಪಡಿಸುವ ಪ್ರಕ್ರಿಯೆಯನ್ನು ಬಿಡಾರದ ಸಿಬ್ಬಂದಿ ಮಾಡುತ್ತಿದ್ದು, ಇದನ್ನು ವೀನಿಂಗ್ ಪ್ರಕ್ರಿಯೆ ಎಂದು ಕರೆಯುತ್ತಾರೆ. ಈ ವೇಳೆ ಮರಿಯಾನೆಗೆ ಹೆಸರು ಇಡೋ ಸಾಂಪ್ರದಾಯವಿದೆ.
ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಸಾರ್ವಜನಿಕರಿಂದ ಆನೆಗೆ ಹೆಸರು ಸೂಚಿಸಲು ತಿಳಿಸಿದ್ದರು. ಒಂದು ವಾರದಿಂದ ಪ್ರಚಾರ ನಡೆಸಿದ ಬಳಿಕ ಎಲ್ಲರೂ ಪುನೀತ್ ರಾಜ್ಕುಮಾರ್ ಅವರ ಹೆಸರನ್ನು ಇಡುವಂತೆ ಸಲಹೆ ನೀಡಿದ್ದರು.
ಏಕೆಂದರೆ ಕಳೆದ ತಿಂಗಳು ಕ್ಯಾಪ್ಗೆ ಪುನೀತ್ ಅವರು ಬಂದಿದ್ದರು. ಆಗ ಅವರನ್ನು ನೋಡಲು 10-15 ಸಾವಿರ ಸಾರ್ವಜನಿಕರು ಆಗಮಿಸಿದ್ದರು. ಈಗ ಅವರು ನಮ್ಮೊಂದಿಗೆ ಇಲ್ಲ. ಆದ್ದರಿಂದ ಅವರ ನೆನಪಿಗಾಗಿ ಪುನೀತ್ ರಾಜ್ಕುಮಾರ್ ಹೆಸರನ್ನೇ ಇಟ್ಟು, ಸಿಹಿ ಹಂಚಿಕೆ ಮಾಡಿದ್ದಾರೆ.
ನಮ್ಮ ಶಿಬಿರದಲ್ಲಿ ಮರಿ ಆನೆಗೆ ಎರಡು ವರ್ಷ ತುಂಬಿದ ನಂತರ ಅದನ್ನು ತಾಯಿಯಿಂದ ಬೇರ್ಪಡಿಸುವ ಸಂಪ್ರದಾಯವಿದೆ. ಆದರೆ, ಈ ಬಾರಿ ಮಳೆಗಾಲ ಅಕ್ಟೋಬರ್ ವರೆಗೆ ವಿಸ್ತರಣೆಗೊಂಡಿದ್ದರಿಂದ ಪ್ರಕ್ರಿಯೆ ಮೂರು ತಿಂಗಳು ವಿಳಂಬವಾಯಿತು. ತಾಯಿಯಿಂದ ಶೀಘ್ರಗತಿಯಲ್ಲಿ ಬೇರ್ಪಡಿಸದೇ ಹೋದಲ್ಲಿ ಆನೆಗಳನ್ನು ಪಳಗಿಸುವುದು ಕಷ್ಟಕರವಾಗುತ್ತದೆ. ಹೀಗಾಗಿ ಮರಿ ಆನೆಗೆ ಎರಡು ವರ್ಷ ಪೂರ್ಣಗೊಂಡ ಬಳಿಕ ತಾಯಿಯಿಂದ ಆನೆಯನ್ನು ಬೇರ್ಪಡಿಸಲಾಗುತ್ತದೆ ಎಂದು ಡಿಸಿಎಫ್ ನಾಗರಾಜ್ ಅವರು ಹೇಳಿದ್ದಾರೆ,
ಈ ಶಿಬಿರದಲ್ಲಿ ಆನೆ ಮರಿ ಹಾಕಿದ ನಂತರ ಅದಕ್ಕೆ ಆ ಮರಿಗೆ ಹೆಸರಿಡುವುದು ಸಂಪ್ರದಾಯ. ಪುನೀತ್ ಅವರು ನಿಧನಕ್ಕೂ ಮುನ್ನ ಶಿಬಿರಕ್ಕೆ ಭೇಟಿ ನೀಡಿದ್ದರು. ಹೀಗಾಗಿ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ಆನೆ ಮರಿಗೆ ಅಪ್ಪು ಎಂದು ಹೆಸರಿಡಲಾಗಿದೆ. ಮಾವುತರು, ಕಾವಾಡಿಗಳು ಮತ್ತು ಸ್ಥಳೀಯ ಗ್ರಾಮಸ್ಥರು ಸೇರಿದಂತೆ ಎಲ್ಲಾ ಅರಣ್ಯ ಇಲಾಖೆ ಅಧಿಕಾರಿಗಳು ಆನೆಗೆ 'ಅಪ್ಪು' ಎಂದು ನಾಮಕರಣ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
Advertisement