ಕಲಬುರಗಿ: ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತರಾಗಿರುವ ಐಎಎಸ್ ಅಧಿಕಾರಿ ಸ್ನೇಹಲ್ ಲೋಖಂಡೆ ವಿರುದ್ಧ ಆರೋಪವೊಂದು ಕೇಳಿಬರುತ್ತಿದೆ. ಮದುವೆಯಾಗಿ ನಂಬಿಸಿ ಐಎಎಸ್ ಅಧಿಕಾರಿ ಸ್ನೇಹಲ್ ಲೋಖಂಡೆ ವಂಚಿಸಿದ್ದಾರೆ ಎಂದು ದೆಹಲಿ ಮೂಲದ ಯುವತಿಯೊಬ್ಬರು ಆರೋಪ ಮಾಡಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಅವರು, ದೆಹಲಿಯಲ್ಲಿ ಸ್ನೇಹಲ್ ಲೋಖಂಡೆ ಅವರನ್ನು ಪರಿಚಯವಾಗಿದ್ದು, ನಂತರ ಅದು ಸ್ನೇಹಕ್ಕೆ ತಿರುಗಿ ಸಂಬಂಧದವರೆಗೆ ತಲುಪಿತ್ತು. ತಮ್ಮ ಜೊತೆ ಹೊಟೇಲ್ ಗಳಲ್ಲಿ ಅಧಿಕಾರಿ ಕಾಲ ಕಳೆದಿದ್ದಲ್ಲದೆ ಸಾಕಷ್ಟು ಬಾರಿ ನಾವಿಬ್ಬರೂ ಹೊರಗೆ ಹೋಗಿ ಸಮಯ ಕಳೆದಿದ್ದೇವೆ. ಈ ಮಧ್ಯೆ ಮದುವೆಯಾಗುವುದಾಗಿ ಮಾತು ಕೊಟ್ಟಿದ್ದ ಸ್ನೇಹಲ್ ಲೋಖಂಡೆ ಇದೀಗ ವಂಚಿಸಿದ್ದಾರೆ ಎಂದು ಯುವತಿ ಆರೋಪ ಮಾಡಿದ್ದಾರೆ.
ತಮ್ಮ ಮತ್ತು ಸ್ನೇಹಲ್ ಮಧ್ಯೆ ಸಂಬಂಧವಿದೆ ಎಂದು ತೋರಿಸಲು ವಾಟ್ಸಾಪ್ ಚಾಟ್ ಗಳನ್ನು ತೋರಿಸಿದ್ದಾರೆ. ಅದರಲ್ಲಿ ದಿನಾಂಕ, ಸ್ಥಳಗಳ ಮಾಹಿತಿಯನ್ನು ಕೂಡ ನೀಡಿದ್ದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅದಷ್ಟೇ ಅಲ್ಲದೆ ಪ್ರಕರಣವನ್ನು ದೇಶಮಟ್ಟದಲ್ಲಿ ಮತ್ತು ಸರ್ಕಾರದ ಮಟ್ಟದಲ್ಲಿ ಗಮನ ಸೆಳೆದು ಐಎಎಸ್ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ತಮ್ಮ ಮತ್ತು ಸ್ನೇಹಲ್ ಮಧ್ಯೆ ನಡೆದಿತ್ತು ಎನ್ನಲಾದ ವಾಟ್ಸಾಪ್ ಚಾಟ್ ಗಳ ವಿವರಗಳನ್ನು ಟ್ವಿಟ್ಟರ್ ನಲ್ಲಿ ಲಗತ್ತಿಸಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಮುರುಗೇಶ್ ನಿರಾಣಿ ಅವರನ್ನು ಟ್ಯಾಗ್ ಮಾಡಿದ್ದಾರೆ.
ಮದುವೆಯಾಗುವುದಾಗಿ ನಂಬಿಸಿ ತಮ್ಮನ್ನು ವಂಚಿಸಿದ್ದು ಐಎಎಸ್ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿದ್ದಾರೆ. ಇನ್ನು ತಮ್ಮ ದೂರನ್ನು ಪುಷ್ಠೀಕರಿಸಿ ಯುವತಿ ಪತ್ರ ಬರೆದಿದ್ದು ಅದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆದರೆ ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಅಧಿಕೃತ ದೂರು ದಾಖಲಾಗಿಲ್ಲ.
Advertisement