ಬೆಂಗಳೂರು: ಬೆಂಗಳೂರಿಗೆ ಆಗಮಿಸಿರುವ ದಕ್ಷಿಣ ಆಫ್ರಿಕನ್ನರಲ್ಲಿ ಕೋವಿಡ್-19 ಸೋಂಕು ದೃಢಪಟ್ಟಿದ್ದು, ರಾಜ್ಯದ ಆರೋಗ್ಯ ಅಧಿಕಾರಿಗಳಲ್ಲಿ "ಓಮಿಕ್ರಾನ್" ರೂಪಾಂತರಿಯ ಭೀತಿ ಎದುರಾಗಿದೆ.
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಈ ಇಬ್ಬರೂ ವ್ಯಕ್ತಿಗಳನ್ನು ಐಸೊಲೇಷನ್ ಗೆ ಒಳಪಡಿಸಲಾಗಿದ್ದು, ಅವರಿಗೆ ದೃಢಪಟ್ಟಿರುವ ಸೋಂಕು ಓಮಿಕ್ರಾನ್ ರೂಪಾಂತರಿಯೇ ಅಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳುವುದಕ್ಕೆ ಮಾದರಿಗಳನ್ನು ಜಿನೋಮ್ ಸೀಕ್ವೆನ್ಸಿಂಗ್ ಗೆ ಒಳಪಡಿಸಲಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕೆ ಶ್ರೀನಿವಾಸ್, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಂತಾರಾಷ್ಟ್ರೀಯ ಪ್ರಯಾಣಿಕರನ್ನು ತಪಾಸಣೆ ಮಾಡಲಾಗುತ್ತಿದೆ. ದಕ್ಷಿಣ ಆಫ್ರಿಕಾದಿಂದ ಬಂದಿದ್ದ ಇಬ್ಬರಲ್ಲಿ ಕೋವಿಡ್-19 ಸೋಂಕು ದೃಢಪಟ್ಟಿದೆ ಎಂದು ತಿಳಿಸಿದ್ದಾರೆ.
"ಇಬ್ಬರೂ ವ್ಯಕ್ತಿಗಳಿಂದ ಸ್ಯಾಂಪಲ್ ಗಳನ್ನು ಸಂಗ್ರಹಿಸಲಾಗಿದ್ದು, ಜಿನೋಮ್ ಸೀಕ್ವೆನ್ಸಿಂಗ್ ಗೆ ಕಳಿಸಲಾಗಿದೆ. 48 ಗಂಟೆಗಳ ನಂತರ ವರದಿಗಳು ಬರಲಿವೆ. ಈ ಇಬ್ಬರೂ ವ್ಯಕ್ತಿಗಳಿಗೆ ತಗುಲಿರುವುದು ಒಮಿಕ್ರಾನ್ ರೂಪಾಂತರಿ ಸೋಂಕು ಹೌದೇ? ಎಂಬುದನ್ನು ಖಚಿತಪಡಿಸಿಕೊಳ್ಳಬೇಕಿದೆ" ಎಂದು ತಿಳಿಸಿದ್ದಾರೆ.
ಪರೀಕ್ಷೆ ಫಲಿತಾಂಶ ಬರುವವರೆಗೂ ಅವರನ್ನು ಪ್ರತ್ಯೇಕವಾಗಿ ಇರಿಸಲಾಗಿದೆ. ಹೆಚ್ಚು ಅಪಾಯಕಾರಿ ದೇಶಗಳೆಂದು ಗುರುತಿಸಲಾಗಿರುವ 10 ರಾಷ್ಟ್ರಗಳಿಂದ ಬೆಂಗಳೂರಿಗೆ 584 ಮಂದಿ ಆಗಮಿಸಿದ್ದಾರೆ. ದಕ್ಷಿಣ ಆಫ್ರಿಕಾ ಒಂದರಿಂದಲೇ 94 ಮಂದಿ ಆಗಮಿಸಿದ್ದಾರೆ. ಓಮಿಕ್ರಾನ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಅಂತಾರಾಷ್ಟ್ರೀಯ ವಿಮಾನದಲ್ಲಿ ಕಟ್ಟುನಿಟ್ಟಿನ ತಪಾಸಣೆ ನಡೆಸುತ್ತಿದ್ದಾರೆ. ಡಬ್ಲ್ಯುಹೆಚ್ಒ ಓಮಿಕ್ರಾನ್ ರೂಪಾಂತರಿಯನ್ನು "ಆತಂಕಕಾರಿ ರೂಪಾಂತರಿ ತಳಿ" ವಿಭಾಗಕ್ಕೆ ಸೇರಿಸಿದೆ.
Advertisement