ತಳ್ಳುಗಾಡಿ ವ್ಯಾಪಾರಿಗಳ ಪರ ನಿಂತ ಸುರೇಶ್ ಕುಮಾರ್: ನಗರ ಪೊಲೀಸ್ ಆಯುಕ್ತರಿಗೆ ಪತ್ರ

ತರಕಾರಿ ಹಾಗೂ ಇನ್ನಿತರೆ ತಳ್ಳುಗಾಡಿ ವ್ಯಾಪಾರಿಗಳು ಧ್ವನಿವರ್ಧಕ ಬಳಸಬಾರದು ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಹೊರಡಿಸಿರುವ ಆದೇಶದ ಸಂಬಂಧ ಮಾಜಿ ಸಚಿವ ಎಸ್ ಸುರೇಶ್ ಕುಮಾರ್ ಪತ್ರ ಬರೆದಿದ್ದಾರೆ. 
ಸುರೇಶ್ ಕುಮಾರ್
ಸುರೇಶ್ ಕುಮಾರ್

ಬೆಂಗಳೂರು: ತರಕಾರಿ ಹಾಗೂ ಇನ್ನಿತರೆ ತಳ್ಳುಗಾಡಿ ವ್ಯಾಪಾರಿಗಳು ಧ್ವನಿವರ್ಧಕ ಬಳಸಬಾರದು ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಹೊರಡಿಸಿರುವ ಆದೇಶದ ಸಂಬಂಧ ಮಾಜಿ ಸಚಿವ ಎಸ್ ಸುರೇಶ್ ಕುಮಾರ್ ಪತ್ರ ಬರೆದಿದ್ದಾರೆ. 

ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿರುವ ಅವರು, ತಳ್ಳು ಗಾಡಿಯ ವ್ಯಾಪಾರಿಗಳಿಗೆ ಧ್ವನಿವರ್ಧಕ ನಿಯಂತ್ರಣ ಮಾಡುವ ಕುರಿತು ಜಾಗೃತಿ ಮೂಡಿಸುವ ಬದಲು, ಇಡೀ ದಿನ ಗಂಟಲು ಘೋಷಣೆ ಮಾಡಿಕೊಂಡೇ ವ್ಯಾಪಾರ ಮಾಡಿ ಅಂತ ಹೇಳುವುದು ಸರಿಯಲ್ಲ. ಇದು ಮಾನವೀಯ ನಡವಳಿಕೆ ಅಲ್ಲ ಅಂತ ಅಭಿಪ್ರಾಯಪಟ್ಟಿದ್ದಾರೆ.

ಬಿಸಿಲು, ಧೂಳು, ಮಳೆ ಲೆಕ್ಕಿಸದೆ ಪ್ರತಿ ದಿನ 10 ರಿಂದ 20 ಕಿಲೋಮೀಟರ್ ದೂರ ನಡೆದು ತಳ್ಳು ಗಾಡಿ ಮೂಲಕ ವ್ಯಾಪಾರ ಮಾಡುತ್ತಾರೆ. ಹೀಗೆ ನಡೆಸುವವರ ಬಗ್ಗೆ ಕನಿಕರ ಇರಬೇಕು. ಗಂಟೆಗಟ್ಟಲೆ ಕೂಗುತ್ತಾ ವ್ಯಾಪಾರ ಮಾಡುವುದಕ್ಕೆ ಆಗುತ್ತಾ? ಎಂದು ಪತ್ರದಲ್ಲಿ ಪ್ರಶ್ನಿಸದ ಶಾಸಕ ಸುರೇಶ್ ಕುಮಾರ್, ತಳ್ಳುವ ಗಾಡಿಯವರೆಲ್ಲಾ ನಮ್ಮವರೇ, ಬೆಂಗಳೂರಿನ ಸುತ್ತ ಮುತ್ತಲಿನ ಕುಟುಂಬದವರೇ ಜೊತೆಗೆ ಕನ್ನಡಿಗರೇ ಎಂಬುವುದನ್ನು ತಿಳಿಯಬೇಕೆಂದು ಹೇಳಿದ್ದಾರೆ.

ತಳ್ಳುವ ಗಾಡಿಗಳ ವ್ಯಾಪಾರಿಗಳಿಗೂ ಸರ್ಕಾರ ಕೆಲಸ ಕೊಡುವ ಸ್ಥಿತಿಯಲ್ಲಿಲ್ಲ. ಈಗಾಗಲೇ ಆನ್ಲೈನ್ ಮೂಲಕ ತರಕಾರಿ ಸೇರಿ ಅಗತ್ಯ ವಸ್ತುಗಳನ್ನು ಖರೀದಿಸುವ ವ್ಯವಸ್ಥೆ ಜೋರಾಗಿ ನಡೆಯುತ್ತಿದೆ. ಇದರಿಂದ ತಳ್ಳುವ ಗಾಡಿಗಳ ವ್ಯಾಪಾರಿಗಳಿಗೆ ಹೊಡೆತ ಬಿದ್ದಿದೆ. ಕೊರೊನಾದಿಂದ ಬಹಳಷ್ಟು ನಷ್ಟ ಅನುಭವಿಸಿದ್ದಾರೆ. ಈ ಬಗ್ಗೆ ಗಮನದಲ್ಲಿಟ್ಟುಕೊಂಡು ಪರಾಮರ್ಶೆ ಮಾಡಬೇಕು ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com