ಬೆಂಗಳೂರು: ದೇಶದ 2ನೇ ಬಹುಸಂಖ್ಯಾತ ಸಮುದಾಯವೆಂದು ಚಿಂತಿಸಲು ಆರಂಭಿಸಿ ಎಂದು ಮುಸ್ಲಿಮರಿಗೆ ಕಾಂಗ್ರೆಸ್ ಹಿರಿಯ ನಾಯಕ ಕೆ.ರೆಹಮಾನ್ ಖಾನ್ ಅವರು ಸಲಹೆ ನೀಡಿದ್ದಾರೆ.
ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ಆಯೋಜಿಸಿದ್ದ ಸೇವಾ ಸಮ್ಮಾನ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿರುವ ಅವರು, ಬಹುಸಂಖ್ಯಾತ ಸಮುದಾಯವೆಂಬ ಮನೋಭಾವನೆಯನ್ನು ಅಳವಡಿಸಿಕೊಳ್ಳುವುದರಿಂದ ಸಮುದಾಯವು ತನ್ನನ್ನು ತಾನು ಬಲಪಡಿಸಿಕೊಳ್ಳಲು ಮತ್ತು ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡಲು ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ.
ಎಲ್ಲಾ ಸಮುದಾಯಗಳು ಒಗ್ಗೂಡಿದಾಗೇ ಪ್ರಜಾಪ್ರಭುತ್ವ ಯಶಸ್ವಿಯಾಗುತ್ತದೆ. ಮುಸ್ಲಿಮರೂ ಕೂಡ ತಾವು ಬಹುಸಂಖ್ಯಾತ ಸಮುದಾಯದವರು ಎಂಬ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ.
ಇದೇ ವೇಳೆ ಕಾಂಗ್ರೆಸ್ ಮುಸ್ಲಿಮರಿಗೆ ಬೆಂಬಲಿಸುತ್ತದೆ ಎಂಬ ಹೇಳಿಕೆ ಹಾಗೂ ಟೀಕೆಗಳಿಗೆ ಸ್ಪಷ್ಟನೆ ನೀಡಿದ ಅವರು, ಸಂವಿಧಾನದಲ್ಲಿ ಪ್ರತಿಪಾದಿಸಲಾದ ಜಾತ್ಯತೀತತೆಯ ನೀತಿಯನ್ನು ಅನುಸರಿಸುವ ಪಕ್ಷವನ್ನು ನಮ್ಮ ಸಮುದಾಯವು ಬೆಂಬಲಿಸುತ್ತದೆ. ನಾವು ಕಾಂಗ್ರೆಸ್ ಅನ್ನು ಬೆಂಬಲಿಸುತ್ತೇವೆ. ಇದಕ್ಕೆ ಕಾರಣ ಅವರು ತಂದ ಕಲ್ಯಾಣ ಯೋಜನೆಗಳಲ್ಲ. ಅದರ ಜಾತ್ಯತೀತ ಮತ್ತು ಅಂತರ್ಗತ ಸಿದ್ಧಾಂತಕ್ಕೆ ಬೆಂಬಲ ನೀಡಿದ್ದೇವೆಂದಿದ್ದಾರೆ.
ಮುಸ್ಲಿಮರ ಸಾಮಾಜಿಕ-ಆರ್ಥಿಕ ಪರಿಸ್ಥಿತಿಯ ಕುರಿತು ಸಾಚಾರ್ ಸಮಿತಿಯ ವರದಿಯ ಶಿಫಾರಸುಗಳ ಅನುಷ್ಠಾನದ ಕುರಿತು ಮಾತನಾಡಿರುವ ಅವರು, ಅಲ್ಪಸಂಖ್ಯಾತ ವ್ಯವಹಾರಗಳ ಸಚಿವರಾಗಿ ರಚಿಸಿದ್ದ ಕುಂದು ಸಮಿತಿಯು ಕೇಂದ್ರದಲ್ಲಿ ಯುಪಿಎ-2 ಅಧಿಕಾರದಲ್ಲಿದ್ದರವರೆಗೆ ನಿಗದಿತ ಗುರಿಯ ಶೇಕಡಾ 45 ರಷ್ಟು ಮಾತ್ರ ತಲುಪಿದೆ ಎಂದು ಬಹಿರಂಗಪಡಿಸಿದೆ ಎಂದು ಹೇಳಿದರು.
ಉಪಚುನಾವಣೆಯಲ್ಲಿ ಬಿಜೆಪಿಗೆ ಜೆಡಿಎಸ್ ಬೆಂಬಲ
ಬಿಜೆಪಿಗೆ ಸಹಾಯ ಮಾಡಲು ಜೆಡಿಎಸ್ ಮುಸ್ಲಿಂ ಮತಗಳನ್ನು ವಿಭಜಿಸಲು ಅಕ್ಟೋಬರ್ 30 ರ ಉಪಚುನಾವಣೆಗೆ ಜೆಡಿಎಸ್ ಹಾನಗಲ್ ಮತ್ತು ಸಿಂದಗಿಯಲ್ಲಿ ಮುಸ್ಲಿಮರನ್ನು ಕಣಕ್ಕಿಳಿಸಿದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಖಾನ್ ಆರೋಪಿಸಿದ್ದಾರೆ.
ಹಳೆಯ ಮೈಸೂರು ಪ್ರದೇಶದ ಐದು ಜಿಲ್ಲೆಗಳಲ್ಲಿ ಜೆಡಿಎಸ್ ತನ್ನ ನೆಲೆಯನ್ನು ಹೊಂದಿರಬಹುದು, ಆದರೆ ಇಡೀ ಕರ್ನಾಟಕದಲ್ಲಿ ಹೊಂದಿಲ್ಲ. ಮುಸ್ಲಿಂ ಅಭ್ಯರ್ಥಿಗಳು ಇಲ್ಲದಿದ್ದರೆ ಜೆಡಿಎಸ್ ಪಕ್ಷಕ್ಕೆ 500 ಮತಗಳೂ ಕೂಡ ಬರುತ್ತಿರಲಿಲ್ಲ ಎಂದಿದ್ದಾರೆ.
Advertisement