ಬೆಂಗಳೂರು: ಬಸವನಗುಡಿಯ ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ವಂಚನೆಯ ಪ್ರಕರಣವನ್ನು ಸಿಬಿಐಗೆ ವಹಿಸಲು ಯಾವುದೇ ಅಭ್ಯಂತರವಿಲ್ಲ. ಈ ಸಂಬಂಧ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಅಧಿಕಾರಿಗಳೊಂದಿಗೆ ಚರ್ಚಿಸಿ, ತಜ್ಞರ ಸಮಿತಿ ರಚನೆಗೂ ಕ್ರಮ ಕೈಗೊಳ್ಳಲಾಗುವುದು’ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದರು.
ವಿಧಾನಪರಿಷತ್ತಿನಲ್ಲಿ ಕಾಂಗ್ರೆಸ್ನ ಯು.ಬಿ. ವೆಂಕಟೇಶ್ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ‘ಪ್ರಕರಣದ ಕುರಿತು ಈಗಾಗಲೇ ಸಿಐಡಿ ತನಿಖೆ ನಡೆಯುತ್ತಿದೆ. ಹೈಕೋರ್ಟ್ ಮತ್ತು ಆರ್ಬಿಐ ಮೇಲ್ವಿಚಾರಣೆ ನಡೆಸುತ್ತಿವೆ. ಬ್ಯಾಂಕಿನಲ್ಲಿ ಹಣ ದುರುಪಯೋಗಕ್ಕೆ ಕಾರಣರಾದ ಸಿಬ್ಬಂದಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ’ ಎಂದೂ ಮಾಹಿತಿ ನೀಡಿದರು.
2018–19ರವರೆಗೆ ಪುನರ್ ಲೆಕ್ಕಪರಿಶೋಧನಗೆ ಆದೇಶಿಸಲಾಗಿದೆ. 2019–20ನೇ ಸಾಲಿನ ಲೆಕ್ಕ ಪರಿಶೋಧನೆ ಪೂರ್ಣಗೊಂಡಿದ್ದು, ಬ್ಯಾಂಕ್ 1,923 ಕೋಟಿ ರು. ನಷ್ಟ ಹೊಂದಿದೆ. ಏಳು ವರ್ಷಗಳ ಪುನರ್ ಲೆಕ್ಕ ಪರಿಶೋಧನೆ ಕಾರ್ಯ ಪೂರ್ಣಗೊಂಡ ನಂತರ ವಾಸ್ತವಿಕ ಅಂಶಗಳು ಬೆಳಕಿಗೆ ಬರಲಿವೆ’ ಎಂದರು. ‘ಬ್ಯಾಂಕಿನ ಲೆಕ್ಕಪರಿಶೋಧಕರನ್ನು ಕಪ್ಪು ಪಟ್ಟಿಗೆ ಸೇರಿಸಿ, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ.
ತಪ್ಪಿತಸ್ಥ ಲೆಕ್ಕಪರಿಶೋಧಕರನ್ನು ಕೇವಲ ಕಪ್ಪು ಪಟ್ಟಿಗೆ ಸೇರಿಸಿ ಸುಮ್ಮನಾಗಿದ್ದಾರೆ. ಅವರನ್ನು ಈವರೆಗೆ ಏಕೆ ಬಂಧಿಸಿಲ್ಲ’ ಎಂದು ಪ್ರಶ್ನಿಸಿದರು. ‘ತನಿಖೆಯ ಪ್ರಗತಿ ಮತ್ತು ಬ್ಯಾಂಕಿನ ಸ್ಥಿತಿ–ಗತಿ ಕುರಿತು ಠೇವಣಿದಾರರಿಗೆ ನಿಯ ಮಿತವಾಗಿ ಮಾಹಿತಿ ನೀಡಬೇಕು, ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು’ ಎಂದೂ ಅವರು ಒತ್ತಾಯಿಸಿದರು.
ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ಗಳು ಆರ್ ಬಿಐ ಅಡಿ ಇರುತ್ತದೆ. 17 ಸಾವಿರ ಠೇವಣಿದಾರರಿಗೆ ಹಣ ವಾಪಸ್ ನೀಡಲಾಗುತ್ತಿದೆ. 1,923 ಕೋಟಿ ರೂ. ನಷ್ಟದ ಬಗ್ಗೆ ಸಿಐಡಿ ತನಿಖೆ ನಡೆಯುತ್ತಿದೆ. ಸಹಕಾರ ಇಲಾಖೆ ಬಹಳ ಗಂಭೀರವಾಗಿ ತೆಗೆದುಕೊಂಡಿದೆ. ಪ್ರತಿಯೊಂದನ್ನು ಹೈ ಕೋರ್ಟ್, ರಿಸರ್ವ್ ಬ್ಯಾಂಕ್ ಗಮನಿಸುತ್ತಿದೆ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಪರಿಷತ್ನಲ್ಲಿ ಯು ಬಿ ವೆಂಕಟೇಶ್ ಅವರ ಅನುಮಾನಕ್ಕೆ ಸ್ಪಷ್ಟನೆ ನೀಡಿದರು.
Advertisement