ಬೆಂಗಳೂರು: ದೆಹಲಿಯ ಗಡಿಯಲ್ಲಿ ಕಳೆದ 7-8 ತಿಂಗಳಿಂದ ನಡೆಯುತ್ತಿರುವ ರೈತರ ಹೋರಾಟ ಪ್ರಾಯೋಜಿತ ಹೋರಾಟ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೋಮವಾರ ಹೇಳಿದ್ದಾರೆ.
ಇಂದು ವಿಧಾನಸಭೆಯಲ್ಲಿ ನಿಯಮ 69ರ ಅಡಿ ಬೆಲೆ ಏರಿಕೆ ಕುರಿತಂತೆ ನಡೆದ ಸಾರ್ವಜನಿಕ ಮಹತ್ವದ ಚರ್ಚೆಗೆ ಉತ್ತರಿಸಿದ ಅವರು, ಹರಿಯಾಣ, ಪಂಜಾಬ್ ನ ಧನದಾಹಿ ದಲ್ಲಾಳಿಗಳು ಹಾಗೂ ಎಂಎಸ್ ಪಿ ಏಜೆಂಟರು ಇದರ ಹಿಂದಿನ ರೂವಾರಿಗಳು ಎಂದು ಆರೋಪಿಸಿದರು.
ಆಗ ಕಾಂಗ್ರೆಸ್ ನ ರಮೇಶ್ ಕುಮಾರ್, ಮಧ್ಯಪ್ರವೇಶಿಸಿ ಮುಖ್ಯಮಂತ್ರಿ ಹೇಳಿಕೆಗೆ ನಾನು ವಿರೋಧ ವ್ಯಕ್ತಪಡಿಸುವುದಿಲ್ಲ. ಪ್ರಾಯೋಜಕತ್ವದ ಹಿಂದಿನ ಶಕ್ತಿ ಯಾರು? ಯಾರ ಚಿತಾವಣೆ ಮೇರೆಗೆ ಪ್ರಾಯೋಜಕತ್ವ ಮಾಡಲಾಗಿದೆ. ಇದರಲ್ಲಿ ವಿದೇಶಿ ಕೈವಾಡವಿದೆಯೇ ಅಥವಾ ಸ್ವದೇಶಿ ಕೈವಾಡವೇ? ಎಂಬುದನ್ನು ಬಹಿರಂಗಪಡಿಸಬೇಕು ಎಂದು ಮುಖ್ಯಮಂತ್ರಿ ಅವರನ್ನು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ನಡುವೆ ಕೆಲಕಾಲ ಪರಸ್ಪರ ಆರೋಪ-ಪ್ರತ್ಯಾರೋಪದ ಮೂಲಕ ಮಾತಿನ ಚಕಮಕಿ ನಡೆಯಿತು.
ಉತ್ತರ ಮುಂದುವರಿಸಿದ ಮುಖ್ಯಮಂತ್ರಿಗಳು, ಯುಪಿಎ ಕಾಲದಲ್ಲಿ ಒಂದು ದಿನಕ್ಕೆ 12 ಕಿ.ಮೀ ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾಗುತಿತ್ತು. ಎನ್ ಡಿ ಎ ಕಾಲದಲ್ಲಿ ಪ್ರತಿ ದಿನ 34 ಕಿ.ಮಿ.ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಭತ್ತ,ಗೋಧಿ, ರಾಗಿ, ಜೋಳ, ದ್ವಿದಳ ಧಾನ್ಯಗಳ ಬೆಂಬಲ ಬೆಲೆಯನ್ನು ಮೂರು ಪಟ್ಟು ಹೆಚ್ಚು ಮಾಡಿ ದೊಡ್ಡ ಮಟ್ಟದಲ್ಲಿ ರೈತರ ನೆರವಿಗೆ ಮೋದಿ ಸರ್ಕಾರ ಧಾವಿಸಿದೆ. ಹೀಗಾಗಿ ಕೋವಿಡ್ ಸನ್ನಿವೇಶದಲ್ಲಿ ಜನಸಾಮಾನ್ಯರಿಗೆ ರೈತಾಪಿಗಳಿಗೆ ಹೆಚ್ಚು ತೊಂದರೆಯಾಗದಂತೆ ಹಸಿವಿನಿಂದ ಯಾರೋಬ್ಬರು ಸಾಯದಂತೆ ನೋಡಿಕೊಂಡಿದ್ದು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಅತಿದೊಡ್ಡ ಸಾಧನೆ ಎಂದು ಕೇಂದ್ರ ಸರ್ಕಾರದ ಕ್ರಮಗಳನ್ನು ಬೊಮ್ಮಾಯಿ ಬಲವಾಗಿ ಸರ್ಮರ್ಥಿಸಿಕೊಂಡರು.
Advertisement