ಬೆಳಗಾವಿ: ಮಹಾರಾಷ್ಟ್ರ - ಕರ್ನಾಟಕ ಗಡಿ ವಿವಾದ ತೀವ್ರ ಸ್ವರೂಪ ಪಡೆಯುತ್ತಿದ್ದು, ಬೆಳಗಾವಿ ಜಿಲ್ಲೆಯ ಗಡಿಭಾಗದ ಪ್ರದೇಶಗಳಲ್ಲಿ ಕೆಲವು ಬಸ್ಸುಗಳು ವಿರೂಪಗೊಂಡು, ಹಾನಿಗೊಳಗಾದ ನಂತರ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ(NWKRTC) ಮಹಾರಾಷ್ಟ್ರಕ್ಕೆ ತನ್ನ ಸೇವೆಯನ್ನು ಬುಧವಾರ ಸ್ಥಗಿತಗೊಳಿಸಿದೆ.
"ಇಂದು ಬೆಳಗ್ಗೆಯಿಂದಲೂ ಉದ್ವಿಗ್ನ ಪರಿಸ್ಥಿತಿ ಇರುವುದರಿಂದ ನಾವು ನಿಪ್ಪಾಣಿ(ಬೆಳಗಾವಿ ಜಿಲ್ಲೆ) ವರೆಗೆ ಮಾತ್ರ ನಮ್ಮ ಬಸ್ಗಳು ಕಾರ್ಯ ನಿರ್ವಹಿಸುತ್ತಿವೆ" ಎಂದು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
ಮಹಾರಾಷ್ಟ್ರದಿಂದ ರಾಣೆಬೆನ್ನೂರಿಗೆ ಬರುತ್ತಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಕೂಡ ಜಖಂಗೊಂಡಿದೆ. ಬಸ್ನ ಗ್ಲಾಸ್ಗಳಿಗೆ ಹಾನಿಯಾಗಿದೆ. ಈ ಘಟನೆ ಹೊರತುಪಡಿಸಿ, ಕೆಲವು ಬಸ್ಗಳಿಗೆ ಮಸಿ ಬಳಿದು ವಿರೂಪಗೊಳಿಸಲಾಗಿದೆ" ಎಂದು ಅಧಿಕಾರಿ ಹೇಳಿದ್ದಾರೆ.
ಈ ಮಧ್ಯೆ, ರಾಜ್ಯದ ಬಸ್ಸುಗಳನ್ನು ವಿರೂಪಗೊಳಿಸಿದ ಹಿನ್ನೆಲೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಗಡಿ ಭಾಗದಲ್ಲಿ ಮತ್ತೆ ಪ್ರತಿಭಟನೆ ನಡೆಸಿತು.
ನಮ್ಮ ರಾಜ್ಯದ ಬಸ್ ಗಳ ಮೇಲೆ ದಾಳಿ ನಡೆಸಿದರೆ ತಾವೂ ಕೂಡ ಇದೇ ರೀತಿ ಪ್ರತಿದಾಳಿ ನಡೆಸುತ್ತೇವೆ ಎಂದು ಕರವೇ ಕಾರ್ಯಕರ್ತರು ಮಹಾರಾಷ್ಟ್ರಕ್ಕೆ ಎಚ್ಚರಿಕೆ ನೀಡಿದರು.
ಗಡಿ ಭಾಗದಲ್ಲಿ ಮತ್ತೆ ಉದ್ವಿಗ್ನತೆ ಉಂಟಾಗಿರುವ ಹಿನ್ನೆಲೆಯಲ್ಲಿ ಎರಡೂ ರಾಜ್ಯಗಳ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ.
ವಾಹನಗಳು ಮತ್ತು ಪ್ರಯಾಣಿಕರನ್ನು ರಕ್ಷಿಸಲು ಬಸ್ಗಳಿಗೆ ಹೆಚ್ಚಿನ ಭದ್ರತೆ ಒದಗಿಸಲಾಗಿದೆ.
Advertisement