ಚಿಕ್ಕಬಳ್ಳಾಪುರ: ನಕಲಿ ದಾಖಲೆ ಸೃಷ್ಚಿಸಿ 70 ವರ್ಷದ ಮಹಿಳೆಗೆ ಸೇರಿದ್ದ ಜಮೀನನನ್ನು ಮಾರಾಟ ಮಾಡಿರುವವರ ವಿರುದ್ಧ ಕ್ರಮಕೈಗೊಳ್ಳುವಂತೆ ಚಿಕ್ಕಬಳ್ಳಾಪುರ ಉಪನೋಂದಣಾಧಿಕಾರಿ ವಿ.ಗೀತಾ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಆವಲಗುರ್ಕಿ ಗ್ರಾಮದ ಸರ್ವೆ ನಂಬರ್ 185ರಲ್ಲಿ 3.06 ಎಕರೆ ಜಮೀನಿದ್ದು ಇದನ್ನು ನಕಲಿ ವ್ಯಕ್ತಿಗಳನ್ನು ಸೃಷ್ಟಿಸಿ ಅವರಿಗೆ ಮಾರಾಟ ಮಾಡಲಾಗಿದೆ. ಈ ಬಗ್ಗೆ ಕಾನೂನು ಪ್ರಕಾರ ಕ್ರಮವಹಿಸಬೇಕು ಎಂದು ಬೆಂಗಳೂರಿನಲ್ಲಿ ನೆಲೆಸಿರುವ ಶೋಭಾ ಕುಮಾರ್ ಎಂಬುವವರು ಚಿಕ್ಕಬಳ್ಳಾಪುರ ಉಪನೋಂದಣಾಧಿಕಾರಿಗೆ ದೂರು ಸಲ್ಲಿಸಿದ್ದರು. ಈ ಸಂಬಂಧ ದಾಖಲೆಗಳನ್ನು ಸಹ ಶೋಭಾ ಕುಮಾರ್ ಸಲ್ಲಿಸಿದ್ದರು.
2016ರಲ್ಲಿ ಜಮೀನು ಮಾರಾಟ ಸಂದರ್ಭದಲ್ಲಿ ಶೋಭಾ ಕುಮಾರ್ ನೀಡಿರುವ ಚುನಾವಣಾ ಗುರುತಿನ ಚೀಟಿಯ ಪ್ರತಿಯನ್ನು ಆನ್ಲೈನ್ನಲ್ಲಿ ಪರಿಶೀಲಿಸಿದಾಗ ಈ ಗುರುತಿನ ಚೀಟಿ ಚುನಾವಣಾ ಆಯೋಗದ ವೆಬ್ಸೈಟ್ನಲ್ಲಿ ಲಭ್ಯವಿಲ್ಲ. ಭಾವಚಿತ್ರದಲ್ಲಿಯೂ ವ್ಯತ್ಯಾಸ ಕಂಡು ಬಂದಿದೆ. ಸದರಿ ದಸ್ತಾವೇಜು ನಕಲಿ ವ್ಯಕ್ತಿ ಸೃಷ್ಟಿಸಿದ್ದು ಅವು ನಕಲಿ ಆಗಿರುವುದು ಮೇಲ್ನೋಟಕ್ಕೆ ಕಂಡು ಬಂದಿರುತ್ತದೆ. ನೋಂದಣಿ ಸಮಯದಲ್ಲಿ ವಾಸ್ತವಾಂಶಗಳನ್ನು ಮರೆ ಮಾಚಿ ಸುಳ್ಳು ಮಾಹಿತಿ ನೀಡಿ ನೋಂದಣಿ ಮಾಡಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ನಕಲಿ ಶೋಭಾ ಕುಮಾರ್ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಬೇಕು ಎಂದು ಉಪನೋಂದಣಾಧಿಕಾರಿಯು ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಆವಲಗುರ್ಕಿ ಗ್ರಾಮದ ಸರ್ವೆ ನಂ 185ರ ನನ್ನ ಸ್ವತ್ತಿಗೆ ಕಂದಾಯ ಪಾವತಿಸಲು ಬಂದಾಗ ಈ ಸರ್ವೆ ನಂಬರ್ ಸ್ವತ್ತು ನನ್ನ ಹೆಸರಿನಲ್ಲಿ ಖಾತೆ ಇಲ್ಲ ಎನ್ನುವುದು ತಿಳಿಯಿತು. ಈ ಬಗ್ಗೆ ದಾಖಲೆಗಳನ್ನು ಪರಿಶೀಲಿಸಿದಾಗ ನನ್ನ ಆಸ್ತಿ ಬೇರೆಯವರ ಹೆಸರಿಗೆ ನೋಂದಣಿಯಾಗಿದೆ ಎಂದು ತಿಳಿದು ಬಂದಿತು. ಈ ದಾಖಲೆಗಳನ್ನು ಪರಿಶೀಲಿಸಿದಾಗ ಇವು ನಕಲಿ ಆಗಿವೆ. ಈ ದಸ್ತಾವೇಜನ್ನು ನಾನು ಬರೆದುಕೊಟ್ಟಿಲ್ಲ. ದಸ್ತಾವೇಜಿನಲ್ಲಿರುವ ಭಾವಚಿತ್ರವೂ ನನ್ನದಲ್ಲ’ ಎಂದು ಶೋಭಾ ಕುಮಾರ್ ತಿಳಿಸಿದ್ದಾರೆ.
ನಾನು ಮತ್ತು ನನ್ನ ಕುಟುಂಬ ನಿಯಮಿತವಾಗಿ ನಮ್ಮ ಆಸ್ತಿಗೆ ಭೇಟಿ ನೀಡುತ್ತಿದ್ದೆವು, ಆದರೆ ಕೋವಿಡ್-19 ಸಾಂಕ್ರಾಮಿಕ ಲಾಕ್ಡೌನ್ಗಳಿಂದಾಗಿ, 2020 ರಿಂದ ನಾನು ಭೇಟಿ ನೀಡಲು ಸಾಧ್ಯವಾಗಲಿಲ್ಲ. ನನ್ನ ಪತಿ ಮತ್ತು ನಾನು ಹಿರಿಯ ನಾಗರಿಕರಾಗಿದ್ದು, ಈ ಸಮಯದಲ್ಲಿ ತಿರುಗಾಡದಂತೆ ಸೂಚಿಸಲಾಗಿತ್ತು ನಮ್ಮ ಮಗ ವಿದೇಶದಲ್ಲಿದ್ದಾನೆ ಮತ್ತು ಪ್ರಯಾಣದ ನಿರ್ಬಂಧಗಳಿಂದಾಗಿ ಭಾರತಕ್ಕೆ ಪ್ರಯಾಣಿಸಲು ಸಾಧ್ಯವಾಗಲಿಲ್ಲ.
2016ರಲ್ಲಿ ಮಹಿಳೆಯೊಬ್ಬರಿಗೆ ಜಮೀನು ಮಾರಾಟ ಮಾಡಿದ್ದು, ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿಯಾಗಿದೆ. ಮಹಿಳೆ 2018 ರಲ್ಲಿ ಇನ್ನೊಬ್ಬ ವ್ಯಕ್ತಿಯ ಪರವಾಗಿ ಮಾರಾಟ ಪತ್ರವನ್ನು ಕಾರ್ಯಗತಗೊಳಿಸಿದ್ದಾರೆ. ದಿನಾಂಕ 26.12.2016 ರ ಸೇಲ್ ಡೀಡ್ ಮಾಡಿಸಿರುವುದು ಮೂಲ ಮಾಲೀಕ ಶೋಬಾ ಕುಮಾರ್ ಮತ್ತು ಆಕೆಯ ಕುಟುಂಬದವರಿಗೆ ತಿಳಿದಿಲ್ಲ. ಸದರಿ ಸೇಲ್ ಡೀಡ್ನಲ್ಲಿ ಮೂಲ ಜಮೀನು ಮಾಲೀಕರಂತೆ ನಟಿಸಿರುವ ಅಪರಿಚಿತ ವ್ಯಕ್ತಿಗೆ ಅನುಸೂಚಿ ಆಸ್ತಿಯಲ್ಲಿ ಯಾವುದೇ ರೀತಿಯ ಹಕ್ಕಿಲ್ಲ ಎಂದು ಹೇಳಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್.ನಾಗೇಶ್ ತಿಳಿಸಿದ್ದಾರೆ.
Advertisement