ಬೆಂಗಳೂರು: ಮಾಹಿತಿ ತಂತ್ರಜ್ಞಾನ ವಲಯದಲ್ಲಿ ವಾರ್ಷಿಕ 10 ಸಾವಿರ ಕೋಟಿ ರುಪಾಯಿಗೂ ಹೆಚ್ಚಿನ ಮೊತ್ತದ ರಫ್ತು ವಹಿವಾಟು ನಡೆಸುತ್ತಿರುವ ಇನ್ಫೊಸಿಸ್ ಮತ್ತು ಇಂಟೆಲ್ ಕಂಪನಿಗಳಿಗೆ ಭಾರತೀಯ ಸಾಫ್ಟ್ವೇರ್ ಪಾರ್ಕ್ಗಳ ಒಕ್ಕೂಟದ ಪ್ರತಿಷ್ಠಿತ 'ಕರ್ನಾಟಕ ಐಟಿ ರತ್ನ' ಪ್ರಶಸ್ತಿಯನ್ನು ‘ಬೆಂಗಳೂರು ಟೆಕ್ ಸಮ್ಮಿಟ್’ನಲ್ಲಿ ಗುರುವಾರ ಪ್ರದಾನ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಐಟಿ-ಬಿಟಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು, ವಾರ್ಷಿಕ ಕನಿಷ್ಠ 2 ಸಾವಿರ ಕೋಟಿಗಳಿಂದ ಗರಿಷ್ಠ 10 ಸಾವಿರ ಕೋಟಿವರೆಗೆ ರಫ್ತು ವಹಿವಾಟು ನಡೆಸಿರುವ ಟಿಸಿಎಸ್, ಬಾಷ್, ಮೈಂಡ್ಟ್ರೀ ಸೇರಿ 21 ಕಂಪನಿಗಳಿಗೆ 'ಐಟಿ ಪ್ರೈಡ್ ಆಫ್ ಕರ್ನಾಟಕ' ಪ್ರಶಸ್ತಿಯನ್ನು ನೀಡಿ, ಗೌರವಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, 'ರಾಜ್ಯದಿಂದ ಈಗ ವರ್ಷಕ್ಕೆ ಐಟಿ ವಲಯವು 6 ಲಕ್ಷ ಕೋಟಿ ಮೊತ್ತದ ರಫ್ತು ವಹಿವಾಟು ನಡೆಸುತ್ತಿದೆ. ಮುಂದಿನ ಮೂರು ವರ್ಷಗಳಲ್ಲಿ ಇದನ್ನು ಇನ್ನೂ ಹೆಚ್ಚಿಸಬೇಕು' ಎಂದರು. ರಾಜ್ಯದಿಂದ ಇಷ್ಟೆಲ್ಲ ಐಟಿ ರಫ್ತು ವಹಿವಾಟು ನಡೆಯುತ್ತಿದ್ದರೂ ಚಾಲ್ತಿ ಖಾತೆಯಲ್ಲಿ ಶೇಕಡ 40ರಷ್ಟು ವಿತ್ತೀಯ ಕೊರತೆ ಇರುವುದು ಕಳವಳಕಾರಿ ಸಂಗತಿಯಾಗಿದೆ. ನಮ್ಮ ಉದ್ಯಮಿಗಳು ಆಮದನ್ನು ಕಡಿಮೆ ಮಾಡಿಕೊಂಡು, ರಫ್ತನ್ನು ಹೆಚ್ಚಿಸಬೇಕು. ಇಲ್ಲದಿದ್ದರೆ, ಕನಿಷ್ಠಪಕ್ಷ ಎರಡರ ನಡುವೆ ಆರೋಗ್ಯಕರ ಸಮತೋಲನವನ್ನಾದರೂ ಸಾಧಿಸಬೇಕು. ಐಟಿ ವಲಯದ ಬೆಳವಣಿಗೆಗೆ ಸರಕಾರವು ಸಂಪೂರ್ಣ ಸಹಕಾರ ಕೊಡಲಿದೆ ಎಂದು ಅವರು ಭರವಸೆ ನೀಡಿದರು.
‘ಐಟಿ ಪ್ರೈಡ್ ಆಫ್ ಕರ್ನಾಟಕ’ ಕಂಪನಿಗಳು: ಆಕ್ಸೆಂಚರ್, ಅಮೆಜಾನ್ ಡೆವಲಪ್ಮೆಂಟ್ ಸೆಂಟರ್, ಡೆಲ್, ಇಐಟಿ ಸರ್ವೀಸಸ್, ಗೋಲ್ಡ್ಮ್ಯಾನ್ ಸ್ಯಾಕ್ಸ್, ಎಚ್ಎಸ್ಬಿಸಿ, ಐಬಿಎಂ, ಜೆ.ಪಿ. ಮಾರ್ಗನ್, ಜೂನಿಪರ್ ನೆಟ್ವರ್ಕ್, ಮರ್ಸಿಡೀಸ್ ಬೆಂಜ್, ಮೈಕ್ರೋಸಾಫ್ಟ್, ಕ್ವಾಲ್ಕಾಂ, ಸ್ಯಾಮ್ಸಂಗ್, ಎಸ್ಎಪಿ ಲ್ಯಾಬ್ಸ್, ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕ್, ವಿಎಂ ವೇರ್ ಮತ್ತು ವಿಪ್ರೋ.
Advertisement