ಬಾಬಾಬುಡನ್‌ಗಿರಿ: ಧಾರ್ಮಿಕ ವಿಧಿ ವಿಧಾನಗಳ ಮೇಲ್ವಿಚಾರಣೆಗೆ 'ವ್ಯವಸ್ಥಾಪಕ ಸಮಿತಿ' ರಚನೆ

ಕರ್ನಾಟಕ ರಾಜ್ಯ ದತ್ತಿ ಇಲಾಖೆಯು ಚಿಕ್ಕಮಗಳೂರಿನ ಗುರು ದತ್ತಾತ್ರೇಯ ಬಾಬಾಬುಡನ್ ದೇಗುಲದಲ್ಲಿ ನಡೆಯುವ ಧಾರ್ಮಿಕ ವಿಧಿ ವಿಧಾನಗಳ ಮೇಲ್ವಿಚಾರಣೆಗಾಗಿ ವ್ಯವಸ್ಥಾಪನಾ ಸಮಿತಿಯನ್ನು ರಚಿಸಿದೆ.
ಬಾಬಾಬುಡನ್‌ಗಿರಿ
ಬಾಬಾಬುಡನ್‌ಗಿರಿ

ಬೆಂಗಳೂರು: ಕರ್ನಾಟಕ ರಾಜ್ಯ ದತ್ತಿ ಇಲಾಖೆಯು ಚಿಕ್ಕಮಗಳೂರಿನ ಗುರು ದತ್ತಾತ್ರೇಯ ಬಾಬಾಬುಡನ್ ದೇಗುಲದಲ್ಲಿ ನಡೆಯುವ ಧಾರ್ಮಿಕ ವಿಧಿ ವಿಧಾನಗಳ ಮೇಲ್ವಿಚಾರಣೆಗಾಗಿ ವ್ಯವಸ್ಥಾಪನಾ ಸಮಿತಿಯನ್ನು ರಚಿಸಿದೆ.

ದತ್ತಾತ್ರೇಯ ಬಾಬಾಬುಡನ್‌ ಸ್ವಾಮಿ ದರ್ಗಾದ ಆಡಳಿತ ನಿರ್ವಹಣೆಗೆ ಅಲ್ಲಿನ ಎಸ್‌.ಎಂ. ಬಾಷಾ ಸೇರಿದಂತೆ ಎಂಟು ಸದಸ್ಯರ ವ್ಯವಸ್ಥಾಪನಾ ಸಮಿತಿ ಯನ್ನು ನೇಮಿಸಲಾಗಿದ್ದು, ಸಮಿತಿಯಲ್ಲಿ ಹಿಂದೂ ಮತ್ತು ಮುಸ್ಲಿಂ ಸಮುದಾಯದ ಸದಸ್ಯರಿದ್ದಾರೆ.

ಮೂರನೇ ರಾಜ್ಯ ಧಾರ್ಮಿಕ ಪರಿಷತ್ ಸಭೆಯಲ್ಲಿ ಸಮಿತಿ ರಚಿಸುವ ಪ್ರಸ್ತಾವನೆಯನ್ನು ಮಂಡಿಸಲಾಗಿದ್ದು, ಚಿಕ್ಕಮಗಳೂರು ಡಿಸಿ ಮತ್ತು ಎಸ್ಪಿ ಅವರಿಂದ ಸದಸ್ಯತ್ವಕ್ಕಾಗಿ ಬಂದ 42 ಅರ್ಜಿಗಳನ್ನು ಪರಿಶೀಲಿಸಲಾಯಿತು.

ಇಲಾಖೆಯು ತನ್ನ ಸಭೆಯಲ್ಲಿ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ದತ್ತಿ (ತಿದ್ದುಪಡಿ) ಕಾಯಿದೆ, 2011 ರ ಸೆಕ್ಷನ್ 25 ರ ಅಡಿಯಲ್ಲಿ ಸಮಿತಿಯನ್ನು ರಚಿಸಲು ನಿರ್ಧರಿಸಿತು. ಇದರಂತೆ ಸಮಿತಿ ರಚಿಸಲಾಗಿದೆ.

8 ಮಂದಿಯ ಪೈಕಿ ಏಳು ಮಂದಿ ಹಿಂದೂ ಧರ್ಮೀಯರು. ಅವರಲ್ಲಿ ಇಬ್ಬರು ಮಹಿಳೆಯರು ಮತ್ತು ಪರಿಶಿಷ್ಟ ಜಾತಿ/ ಪಂಗಡಗಳಿಗೆ ಸೇರಿದ ಒಬ್ಬರು ಇದ್ದಾರೆ. ಮೂರು ವರ್ಷಗಳ ಅವಧಿಗೆ ಈ ಸಮಿತಿಯು ಕಾರ್ಯನಿರ್ವಹಿಸಲಿದೆ.

ಚಿಕ್ಕಮಗಳೂರು ತಾಲ್ಲೂಕು ಅತ್ತಿಗುಂಡಿಯ ಸತೀಶ್‌ ಕೆ., ಕೈಮರ ಬಾಗಡೇಹಳ್ಳಿಯ ಲೀಲಾ ಸಿ.ಜಿ., ಯರೇಹಳ್ಳಿ ಸಮೀಪದ ಅರೇ ಹಳ್ಳಿಯ ಶೀಲಾ, ಚಿಕ್ಕಮಗಳೂರಿನ ವಿಜಯಪುರದ ತಿಲಕ್‌ ಪಾರ್ಕ್ ರಸ್ತೆಯ ಸುಮಂತ್‌ ಎನ್‌.ಎಸ್‌., ರಾಮನ ಹಳ್ಳಿಯ ಹನುಮಂತನಗರದ ಕೆ.ಎಸ್‌. ಗುರುವೇಶ್‌, ರತ್ನಗಿರಿ ಬಡಾವಣೆಯ ಜಿ.ಎಚ್‌. ಹೇಮಂತ್‌ ಕುಮಾರ್‌ ಮತ್ತು ನರಿಗುಡ್ಡೇನಹಳ್ಳಿಯ ಜ್ಯೋತಿನಗರದ ಸಿ.ಎಸ್‌. ಚೇತನ ವ್ಯವಸ್ಥಾಪನಾ ಸಮಿತಿಯ ಇತರ ಸದಸ್ಯರು.

‘ಹೈಕೋರ್ಟ್‌ನಲ್ಲಿ ದಾಖಲಾಗಿರುವ ರಿಟ್‌ ಅರ್ಜಿ ಸಂಖ್ಯೆ 1110/2022ಕ್ಕೆ ಸಂಬಂಧಿಸಿದ ಅಂತಿಮ ಆದೇಶಕ್ಕೆ ಒಳಪಟ್ಟು ಈ ನೇಮಕಾತಿ ಆದೇಶ ಹೊರಡಿಸಲಾಗಿದೆ. ಈ ಸದಸ್ಯರು ಯಾವುದೇ ರಾಜಕೀಯ ಪಕ್ಷದ ಪದಾಧಿಕಾರಿ ಆಗಿರುವುದು ಕಂಡುಬಂದಲ್ಲಿ ಅಂಥವರ ಸದಸ್ಯತ್ವವು ಸಹಜವಾಗಿಯೇ ರದ್ದಾಗುವುದು’ ಎಂದು ರಾಜ್ಯ ಧಾರ್ಮಿಕ ಪರಿಷತ್ತಿನ ಸದಸ್ಯ ಕಾರ್ಯದರ್ಶಿಯೂ ಆಗಿರುವ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ ಆಯುಕ್ತೆ ರೋಹಿಣಿ ಸಿಂಧೂರಿ ಆದೇಶದಲ್ಲಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com