ಬೆಂಗಳೂರು: ಕರ್ನಾಟಕದ ಬಹುತೇಕ ಭಾಗಗಳಲ್ಲಿ ಮತ್ತು ಹಲವು ಜಿಲ್ಲೆಗಳಲ್ಲಿ 10 ಡಿಗ್ರಿ ಸೆಲ್ಸಿಯಸ್ಗಿಂತ ಕಡಿಮೆ ತಾಪಮಾನ ದಾಖಲಾಗುತ್ತಿದ್ದು, ತಾಪಮಾನ ಮತ್ತಷ್ಟು ಕುಸಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಅಧಿಕಾರಿಗಳು ಎಚ್ಚರಿಸಿದ್ದಾರೆ.
ಹವಮಾನ ಇಲಾಖೆಯ ದತ್ತಾಂಶಗಳ ಪ್ರಕಾರ ಈ ಬಾರಿಯ ಚಳಿಗಾಲ ಅತ್ಯಂತ ಕನಿಷ್ಠ ತಾಪಮಾನಕ್ಕೆ ಸಾಕ್ಷಿಯಾಗಲಿದ್ದು, ಶನಿವಾರ ಬೆಳಗ್ಗೆ ಐದು ಜಿಲ್ಲೆಗಳಲ್ಲಿ ಕನಿಷ್ಠ 11 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಪ್ರಮುಖವಾಗಿ ಬಾಗಲಕೋಟೆಯಲ್ಲಿ ಅತ್ಯಂತ ಕನಿಷ್ಠ ಅಂದರೆ 9.8 ಡಿಗ್ರಿ ಸೆಲ್ಸಿಯಸ್ (ಕನಿಷ್ಠ ತಾಪಮಾನ) ತಾಪಮಾನ ದಾಖಲಾಗಿದೆ ಎಂದು ಐಎಂಡಿ ಅಂಕಿಅಂಶಗಳು ತೋರಿಸಿವೆ.
ಚಿಕ್ಕನಹಳ್ಳಿ ಮತ್ತು ಮಡಿಕೇರಿಯಲ್ಲಿ ಕನಿಷ್ಠ ತಾಪಮಾನ 11.3 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಚಿಂತಾಮಣಿಯಲ್ಲಿ 11.8, ವಿಜಯಪುರದಲ್ಲಿ 11.5 ಮತ್ತು ಗದಗದಲ್ಲಿ 11 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ನವೆಂಬರ್ 17 ರವರೆಗೆ ಬೀದರ್ 10.7 ಡಿಗ್ರಿ ಸೆಲ್ಸಿಯಸ್, ವಿಜಯಪುರ 10.5, ಬಾಗಲಕೋಟೆ 10.2 ಮತ್ತು ಗದಗ 11.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು.
ಇದು ಚಳಿಗಾಲದ ಪೂರ್ವ ಋತುವಾಗಿದ್ದು, ಈಶಾನ್ಯ ಮಾನ್ಸೂನ್ ಉತ್ತುಂಗದಲ್ಲಿದೆ ಎಂದು ಐಎಂಡಿ ಬೆಂಗಳೂರು ಅಧಿಕಾರಿಗಳು ತಿಳಿಸಿದ್ದಾರೆ. ಉತ್ತರ ದಿಕ್ಕಿನ ಮಾರುತಗಳು ಬೀಸುತ್ತಿರುವುದು, ಮೋಡದ ಹೊದಿಕೆ ಕೊರತೆ ಮತ್ತು ದಿನನಿತ್ಯದ ವ್ಯತ್ಯಾಸದ ಪರಿಣಾಮದಿಂದಾಗಿ ನಾಗರಿಕರು ಚಳಿಯನ್ನು ಅನುಭವಿಸುತ್ತಿದ್ದಾರೆ. ಅಲ್ಲದೆ ನವಂಬರ್ 23 ರಂದು ವಾಯುಭಾರ ಕುಸಿತದಿಂದಾಗಿ ದಕ್ಷಿಣ ಒಳನಾಡಿನ ಕೆಲವು ಭಾಗಗಳಲ್ಲಿ ಲಘುವಾಗಿ ಸಾಧಾರಣ ಮಳೆಯಾಗುವ ಮುನ್ಸೂಚನೆಯನ್ನೂ ಅಧಿಕಾರಿಗಳು ನೀಡಿದ್ದಾರೆ.
Advertisement