
ಧಾರವಾಡ: ಮಂಗಳೂರು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆಟೊರಿಕ್ಷಾದಲ್ಲಿ ಭಾರತೀಯ ರೈಲ್ವೆ ನೌಕರ ರಾಜ್ ಹಿಟಗಿ ಅವರ ಆಧಾರ್ ಕಾರ್ಡ್ ಪತ್ತೆಯಾಗಿದ ಹಿನ್ನೆಲೆಯಲ್ಲಿ ಹುಬ್ಬಳ್ಳಿ ಪೊಲೀಸರು ಮಧುರಾ ಕಾಲೋನಿಯಲ್ಲಿ ಪ್ರೇಮರಾಜ್ ಹುಟಗಿ ಅವರನ್ನು ಭಾನುವಾರ ವಿಚಾರಣೆಗೊಳಪಡಿಸಿದರು.
ಆಟೋದಲ್ಲಿ ಸಿಕ್ಕ ಆಧಾರ್ ಕಾರ್ಡ್ನಲ್ಲಿ ತುಮಕೂರು ಬಳಿ ಗೇಟ್ಮ್ಯಾನ್ ಆಗಿ ಕೆಲಸ ಮಾಡುವ ಹುಬ್ಬಳ್ಳಿಯ ಪ್ರೇಮರಾಜ್ ಅವರ ವಿಳಾಸವಿರುವುದು ಕಂಡು ಬಂದಿತ್ತು. ಹುಬ್ಬಳ್ಳಿ ನಿವಾಸಿ ಪ್ರೇಮರಾಜ್ ಸುಮಾರು ಆರು ತಿಂಗಳ ಹಿಂದೆ ಆಧಾರ್ ಕಾರ್ಡ್ ಕಳೆದು ಹೋಗಿದ್ದು, ಆಧಾರ್ ಕಾರ್ಡ್ ಕಳೆದು ಹೋಗಿದ್ದರೂ ತಲೆ ಕೆಡಿಸಿಕೊಂಡಿರಲಿಲ್ಲ ಎಂಬುದು ತನಿಖೆ ವೇಳೆ ತಿಳಿದುಬಂದಿದೆ.
ಈ ನಡುವೆ ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿರುವ ಪ್ರೇಮ್ ರಾಜ್ ನಾನು ಮಂಗಳೂರಿಗೆ ಪ್ರಯಾಣಿಸಿಲ್ಲ. ಆದರೆ ದುಷ್ಕರ್ಮಿ ಬಳಿ ನನ್ನ ಆಧಾರ್ ಕಾರ್ಡ್ ಇರುವುದು ಆಘಾತವನ್ನು ತಂದಿದೆ ಎಂದು ಹೇಳಿದ್ದಾರೆ.
ಪ್ರೇಮ್ ರಾಜ್ ಅವರ ಪೋಷಕರು ಮಾತನಾಡಿ, ಸ್ಫೋಟಕ್ಕೂ ನಮಗೂ ಸಂಬಂಧವಿಲ್ಲ. ಪೊಲೀಸರು ವಿಚಾರಣೆ ಆರಂಭಿಸುವವರೆಗೂ ನಮಗೆ ಏನೆಂದು ತಿಳಿದೇ ಇರಲಿಲ್ಲ ಎಂದು ತಿಳಿಸಿದ್ದಾರೆ.
ಅಲೋಕ್ ಕುಮಾರ್ ಅವರ ಸೂಚನೆ ಮೇರೆಗೆ ಭಾನುವಾರ ತುಮಕೂರು ಎಸ್ಪಿ ರಾಹುಲ್ ಕುಮಾರ್ ಶಹಾಪುರವಾಡ್ ಅವರನ್ನು ಭೇಟಿ ಮಾಡಿದ ಪ್ರೇಮರಾಜ್ ಹುಟಗಿ, ನನಗೂ ಪ್ರಕರಣಕ್ಕೂ ಯಾವುದೇ ರೀತಿಯಲ್ಲಿ ಸಂಬಂಧವಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
ಕಳೆದ ಮೂರು ವರ್ಷದಿಂದ ತುಮಕೂರಿನಲ್ಲಿ ರೈಲ್ವೆ ಇಲಾಖೆಯಲ್ಲಿ ಪ್ರೇಮ್ ರಾಜ್ ಕೆಲಸ ಮಾಡುತ್ತಿದ್ದಾರೆ. ತುಮಕೂರಿನ ಹಿರೇಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ಬೆಳಗ್ಗೆ ಪ್ರೇಮ್ ರಾಜ್ಗೆ ಕರೆ ಮಾಡಿರುವ ಎಡಿಜಿಪಿ ಅಲೋಕ್ ಕುಮಾರ್ ಅವರು ತುಮಕೂರು ಎಸ್ಪಿ ಭೇಟಿ ಮಾಡುವಂತೆ ಸೂಚನೆ ನೀಡಿದ್ದರು. ಅಲೋಕ್ ಕುಮಾರ್ ಸೂಚನೆಯಂತೆ ತುಮಕೂರು ಎಸ್ಪಿ ರಾಹುಲ್ ಕುಮಾರ್ ಭೇಟಿ ಮಾಡಿ ವಿಚಾರಣೆಗೆ ಒಳಗಾಗಿದ್ದಾರೆ.
Advertisement