ತುಮಕೂರು: ಹಾಲಿ, ಮಾಜಿ ಶಾಸಕರಿಂದ ಪರಸ್ಪರ ಜೀವ ಬೆದರಿಕೆ ಆರೋಪ!
ತುಮಕೂರು: ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ತುಮಕೂರು ಗ್ರಾಮಾಂತರ ಜೆಡಿಎಸ್ ಶಾಸಕ ಡಿ.ಸಿ.ಗೌರಿಶಂಕರ್ ಹಾಗೂ ಮಾಜಿ ಶಾಸಕ ಬಿ.ಸುರೇಶ್ ಗೌಡ ನಡುವಿನ ವೈಮನಸ್ಸು ತಾರಕ್ಕೇರಿದ್ದು, ಇದಕ್ಕೆ ನಿದರ್ಶನ ಎಂಬಂತೆ ಇಬ್ಬರೂ ಪರಸ್ಪರ ಜೀವ ಬೆದರಿಕೆಯೊಡ್ಡಿರುವ ಗಂಭೀರ ಆರೋಪ ಮಾಡಿದ್ದಾರೆ, ಈ ಸಂಬಂಧ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದಾರೆ.
ಮೂರು ವರ್ಷಗಳ ಹಿಂದೆ ತುಮಕೂರು ಮಾಜಿ ಮೇಯರ್ ರವಿ ಅವರನ್ನು ಕಡಿದು ಹತ್ಯೆ ಮಾಡಿದ ಆರೋಪದ ಮೇಲೆ ಇದೀಗ ಪರಪ್ಪನ ಅಗ್ರಹಾರದಲ್ಲಿರುವ ಕುಖ್ಯಾತ ಇತಿಹಾಸ ಶೀಟರ್ಗೆ ಗೌರಿಶಂಕರ್ ಸುಪಾರಿ ನೀಡಿದ್ದಾರೆ ಎಂದು ಸುರೇಶ್ ಗೌಡ ಆರೋಪಿಸಿರುವ ವಿಡಿಯೋ ಭಾರೀ ಸಂಚಲನ ಮೂಡಿಸಿದೆ.
"ಹೌದು, ಶಾಸಕರಿಂದ ನನಗೆ ಜೀವ ಬೆದರಿಕೆ ಇದೆ ಮತ್ತು ಇದನ್ನು ಪೊಲೀಸರ ಗಮನಕ್ಕೆ ತರಲಾಗಿದೆ ಎಂದು ಸುರೇಶ್ ಗೌಡ ಅವರು ಹೇಳಿದ್ದಾರೆ.
ಗೌಡರ ಟೀಕೆಗೆ ಉತ್ತರಿಸಿದ ಗೌರಿಶಂಕರ್, ತನಗೂ ಮೊದಲಿನಿಂದಲೂ ಜೀವ ಬೆದರಿಕೆ ಇದೆ ಮತ್ತು ಎಸ್ಪಿ ರಾಹುಲ್ ಕುಮಾರ್ ಶಹಾಪುರವಾಡ್ ಅವರಿಗೆ ಎರಡು ಪುಟಗಳ ಪತ್ರವನ್ನು ಬರೆದು ಮಾಹಿತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಡಿಸೆಂಬರ್ 19 ರಿಂದ ಡಿಸೆಂಬರ್ 30 ರ ನಡುವೆ ಬೆಳಗಾವಿಯಲ್ಲಿ ನಡೆಯಲಿರುವ ಜಂಟಿ ಶಾಸಕಾಂಗದ ಚಳಿಗಾಲದ ಅಧಿವೇಶನದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಲಾಗುವುದು ಎಂದಿದ್ದಾರೆ.
“ಬಿಜೆಪಿ ಕೇಂದ್ರ ಮತ್ತು ರಾಜ್ಯ ಎರಡರಲ್ಲೂ ಅಧಿಕಾರದಲ್ಲಿದೆ. ಅವರು ಸಿಬಿಐ ತನಿಖೆಗೆ ಆದೇಶಿಸಲಿ. ಕ್ಷೇತ್ರದಲ್ಲಿ ಅಶಾಂತಿ ಸೃಷ್ಟಿಸಿ ನನ್ನನ್ನು ಕೊಲ್ಲಲು ಸುರೇಶ್ ಗೌಡ ಯೋಜನೆ ರೂಪಿಸಿರುವ ಸಾಧ್ಯತೆ ಇದೆ ಎಂದು ಆರೋಪಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ