ಬಿಬಿಎಂಪಿಯ ಅಕ್ರಮ ಒತ್ತುವರಿ ತೆರವು ಕಾರ್ಯಕ್ಕೆ ಬ್ರೇಕ್: ನ್ಯಾಯಾಲಯದಿಂದ ತಡೆಯಾಜ್ಞೆ ಪಡೆಯಲು ಮಾಲೀಕರಿಗೆ ಅನುಕೂಲ!
ಬೆಂಗಳೂರು: ವಾರಾಂತ್ಯಗಳಲ್ಲಿ ಅಕ್ರಮ ಒತ್ತುವರಿ ತೆರವು ಕಾರ್ಯಾಚರಣೆಯಲ್ಲಿ ಬಿಬಿಎಂಪಿಗೆ ಹಿನ್ನಡೆಯಾಗಿದೆ. ಮಾಲೀಕರು ನ್ಯಾಯಾಲಯದಿಂದ ತಡೆಯಾಜ್ಞೆ ಪಡೆಯುವುದನ್ನು ತಪ್ಪಿಸಲು ವಾರಾಂತ್ಯದಲ್ಲಿ ಮಳೆನೀರು ಚರಂಡಿ ಒತ್ತುವರಿ ತೆರವು ಮಾಡಲು ಯೋಜನೆ ರೂಪಿಸಿದ್ದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ತನ್ನ ಕಾರ್ಯವಿಳಂಬದಿಂದ ಅದರ ಕಾರ್ಯತಂತ್ರ ವಿಫಲವಾಗಿದೆ. ಗುರುರಾಜ ಲೇಔಟ್ ಮತ್ತು ಫೆರ್ನ್ನಲ್ಲಿ ಮಾಲೀಕರು ನ್ಯಾಯಾಲಯದಿಂದ ತಮ್ಮ ಆಸ್ತಿಗಳ ಒತ್ತುವರಿ ತೆರವು ಕಾರ್ಯಕ್ಕೆ ತಡೆಯಾಜ್ಞೆ ತರಿಸಿಕೊಂಡಿದ್ದಾರೆ.
ಮೊನ್ನೆ ಶನಿವಾರ ಮಹಾದೇವಪುರ ವಲಯದ ದೊಡ್ಡನೆಕುಂದಿಯಲ್ಲಿ ಮಳೆನೀರು ಚರಂಡಿ ಒತ್ತುವರಿ ತೆರವುಗೊಳಿಸಲು ಪಾಲಿಕೆ ಅಧಿಕಾರಿಗಳು ಬುಲ್ಡೋಜರ್ಗಳೊಂದಿಗೆ ಫರ್ನ್ಸಿಟಿ ಮತ್ತು ಗುರುರಾಜ ಲೇಔಟ್ಗೆ ಆಗಮಿಸಿದಾಗ, ಮಾಲೀಕರು ತಡೆಯಾಜ್ಞೆಯೊಂದಿಗೆ ಸಿದ್ಧರಾಗಿದ್ದರಿಂದ ಅಧಿಕಾರಿಗಳು ಗೋಡೆಗಳಿಗೆ ನೊಟೀಸ್ ಹಚ್ಚಿ ಹೋಗಿದ್ದಾರೆ ಎಂದು ಒಳಚರಂಡಿ ಕಾರ್ಯಕಾರಿ ಎಂಜಿನಿಯರ್ ಆರ್ ಮಾಲತಿ ತಿಳಿಸಿದ್ದಾರೆ.
ಚಲ್ಲಘಟ್ಟದಲ್ಲಿರುವ ಕಾಂಗ್ರೆಸ್ ಮುಖಂಡ ಎನ್ಎ ಹ್ಯಾರಿಸ್ ಒಡೆತನದ ನಲಪಾಡ್ ಅಕಾಡೆಮಿಯ ವಿಚಾರಣೆಗೆ ಸಂಬಂಧಿಸಿದಂತೆ ಬಿಬಿಎಂಪಿ ಅಧಿಕಾರಿಗಳು, ಮತ್ತೊಂದು ಪ್ರಕರಣದಲ್ಲಿ ಬೆಂಗಳೂರು ಪೂರ್ವ ತಹಶೀಲ್ದಾರ್ ಕಚೇರಿಯಿಂದ ಸೂಚನೆಗಾಗಿ ಕಾಯುತ್ತಿದ್ದಾರೆ.
ಬಿಬಿಎಂಪಿ ಪ್ರಭಾವಿ ಮಾಲೀಕರನ್ನು ಒತ್ತುವರಿ ತೆರವು ಕಾರ್ಯಾಚರಣೆಯಿಂದ ಬಚಾವ್ ಮಾಡುತ್ತಿದ್ದಾರೆ ಎಂಬ ಆರೋಪವಿದೆ. ಮಾಲೀಕರಿಗೆ ಒತ್ತುವರಿ ತೆರವು ಕಾರ್ಯ ವಿಳಂಬ ಮಾಡಲು ಅಧಿಕಾರಿಗಳು ಸಹಾಯ ಮಾಡುತ್ತಿರುವುದಲ್ಲದೆ ಕೋರ್ಟ್ ಗೆ ಯಾವ ರೀತಿ ಮೊರೆ ಹೋಗಬೇಕು ಎಂದು ಸಹ ಹೇಳಿಕೊಡುತ್ತಿದ್ದಾರೆ ಎಂದು ವರ್ತೂರು ರೈಸಿಂಗ್ ನಿವಾಸಿ ಜಗದೀಶ್ ರೆಡ್ಡಿ ಹೇಳುತ್ತಾರೆ.
ಇದಕ್ಕೆ ದನಿಗೂಡಿಸಿರುವ ಆಪ್ ಮಹದೇವಪುರ ಘಟಕದ ಅಧ್ಯಕ್ಷ ಅಶೋಕ್ ಮೃತ್ಯುಂಜಯ್, ಪ್ರಭಾವಿ ಮಾಲೀಕರು ಕೋರ್ಟ್ ನಿಂದ ತಡೆಯಾಜ್ಞೆ ತರಲಿ ಎಂದು ಬಿಬಿಎಂಪಿ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ಒತ್ತುವರಿ ತೆರವು ಕಾರ್ಯ ವಿಳಂಬ ಮಾಡುತ್ತಿದ್ದಾರೆ. ಈ ಒತ್ತುವರಿ ತೆರವು ಕಾರ್ಯಾಚರಣೆಯೆಲ್ಲ ಕೇವಲ ಕಣ್ಣೊರೆಸುವ ತಂತ್ರವಷ್ಟೆ. ಬಡವರು, ಸಣ್ಣ ಮಟ್ಟಿನ ಒತ್ತುವರಿದಾರರ ಮೇಲೆ ಮಾತ್ರ ಬಿಬಿಎಂಪಿ ತನ್ನ ಪ್ರತಾಪ ತೋರಿಸುತ್ತಿದೆ ಎಂದು ಆರೋಪಿಸುತ್ತಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ