ಮಡಿಕೇರಿ: ಕೊಡಗಿನಲ್ಲಿ ಧಾರಾಕಾರ ಮಳೆಯ ಪರಿಣಾಮ ಜುಲೈ ತಿಂಗಳಿನಿಂದ ಪ್ರವಾಹ ಉಂಟಾಗಿದ್ದು, ಹಲವು ಮನೆಗಳಿಗೆ ಭಾಗಶಃ ಹಾನಿಯುಂಟಾಗಿದೆ.
ಸಂಪಾಜೆ ವ್ಯಾಪ್ತಿಯ ಕೊಯನಾಡು ಪ್ರದೇಶದಲ್ಲಿ ಪ್ರವಾಹ ಎದುರಿಸುತ್ತಿರುವ ಮಂದಿಯ ಪೈಕಿ ಹಲವರು ಎಸ್ಟೇಟ್ ಕಾರ್ಮಿಕರಾಗಿದ್ದು, ತಮ್ಮ ಬೇಡಿಕೆಗಳು ಈಡೇರದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಕೊಯನಾಡು ಪ್ರದೇಶದ ಪಯಸ್ವಿನಿ ನದಿ ಹರಿವು ಜುಲೈ ತಿಂಗಳಲ್ಲಿ ಎಂದಿಗಿಂತ ನಾಲ್ಕು ಪಟ್ಟು ಹೆಚ್ಚಳವಾಗಿತ್ತು ಹಾಗೂ ಆಗಸ್ಟ್ ತಿಂಗಳಲ್ಲಿಯೂ ಇದು ಮುಂದುವರೆದಿತ್ತು.
ನದಿಯ ತಗ್ಗುಪ್ರದೇಶದಲ್ಲಿ ವಾಸಿಸುತ್ತಿರುವ 5 ಕ್ಕೂ ಹೆಚ್ಚು ಕುಟುಂಬಗಳು ತಮ್ಮ ಜೀವಮಾನದ ದುಡಿಮೆ- ಸಂಗ್ರಹವನ್ನು ಪ್ರವಾಹದ ಸಂದರ್ಭದಲ್ಲಿ ಕಳೆದುಕೊಂಡಿದ್ದು, ಇವರಿಗೆ ಮೂಲಭೂತ ಪರಿಹಾರ ಒದಗಿಸುವುದಾಗಿ ಭರವಸೆ ನೀಡಲಾಗಿತ್ತು.
ಆದರೆ ಪರಿಹಾರವನ್ನು ನಿರಾಕರಿಸುತ್ತಿರುವ ನಿವಾಸಿಗಳು, ಇದರ ಬದಲಿಗೆ ಪಯಸ್ವಿನಿ ನದಿಯಾದ್ಯಂತ ಕಟ್ಟಲಾಗಿರುವ ಚೆಕ್ ಡ್ಯಾಮ್ ನ್ನು ತೆರವುಗೊಳಿಸಬೇಕೆಂಬ ಬೇಡಿಕೆ ಮುಂದಿಟ್ಟಿದ್ದಾರೆ.
ನದಿಯ ಇತ್ತೀಚಿನ ಪ್ರವಾಹಕ್ಕೆ 8 ಕುಟುಂಬಗಳು ಸಂತ್ರಸ್ತ ಕುಟುಂಬಗಳಾಗಿವೆ, ನದಿಗೆ ಕಟ್ಟಲಾಗಿರುವ ಚೆಕ್ ಡ್ಯಾಮ್ ಸಹ ಪ್ರವಾಹಕ್ಕೆ ಒಂದು ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಈ ಡ್ಯಾಮ್ ನ್ನು ತೆರವುಗೊಳಿಸಿ ಇಲ್ಲದೇ ಇದ್ದಲ್ಲಿ ನಾವು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಕುಟುಂಬಗಳು ಆಗ್ರಹಿಸಿವೆ.
ಇತ್ತೀಚೆಗೆ ಪ್ರವಾಹ ಉಂಟಾದ ಪ್ರದೇಶಗಳಿಗೆ ಭೇಟಿ ನೀಡಿದ ಶಾಸಕ ಕೆಜಿ ಬೋಪಯ್ಯ ಎದುರು ಈ ಬೇಡಿಕೆ ಮುಂದಿಟ್ಟಿದ್ದು, ಗ್ರಾಮಸ್ಥರು ಈ ಚೆಕ್ ಡ್ಯಾಮ್ ನ್ನು ಅವೈಜ್ಞಾನಿಕ ಎಂದು ಆರೋಪಿಸಿದ್ದಾರೆ. ಆದರೆ ಎಂಎಲ್ಎ ಬೋಪಯ್ಯ, ಚೆಕ್ ಡ್ಯಾಮ್ ನಿಂದ ಈ ಪ್ರದೇಶದಲ್ಲಿ 30 ಕ್ಕೂ ಹೆಚ್ಚು ಮಂದಿಗೆ ಉಪಯೋಗವಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
Advertisement