ಚಿತ್ರದುರ್ಗ: ಮುರುಘಾ ಮಠದ ಶ್ರೀಗಳಿಗೆ ತೀವ್ರ ಹೃದಯ ಸಮಸ್ಯೆಯಿದ್ದು ಅವರಿಗೆ ಹೆಚ್ಚಿನ ಚಿಕಿತ್ಸೆ ಅಗತ್ಯವಿದೆ, ಹೀಗಾಗಿ ಅವರನ್ನು ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಗೆ ವರ್ಗಾಯಿಸಲಾಗುವುದು ಎಂದು ಚಿತ್ರದುರ್ಗ ಜಿಲ್ಲಾ ಆರೋಗ್ಯಾಧಿಕಾರಿ(DHO) ಡಾ ಬಸವರಾಜ್ ಹೇಳಿದ್ದಾರೆ.
ಇಂದು ಚಿತ್ರದುರ್ಗ ಜಿಲ್ಲಾಸ್ಪತ್ರೆ ಹೊರಗೆ ಡಾ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗಳನ್ನು ತಪಾಸಣೆ ನಡೆಸಿ ತೀವ್ರ ನಿಗಾ ಘಟಕಕ್ಕೆ ವರ್ಗಾಯಿಸಿ ತುರ್ತು ಚಿಕಿತ್ಸೆ ನೀಡಿದ ಬಳಿಕ ಮಾಧ್ಯಮ ಪ್ರತಿನಿಧಿಗಳಿಗೆ ಅವರ ಆರೋಗ್ಯ ಸ್ಥಿತಿಗತಿ ಬಗ್ಗೆ ಮಾಹಿತಿ ನೀಡಿದರು.
ಇಂದು ಬೆಳಗ್ಗೆ ದಾವಣಗೆರೆಯಿಂದ ಇಬ್ಬರು ತಜ್ಞ ವೈದ್ಯರು ಹಾಗೂ ನಮ್ಮ ಆಸ್ಪತ್ರೆಯ ವೈದ್ಯರು ಇಸಿಜಿ ಮಾಡಿದಾಗ ಶ್ರೀಗಳಿಗೆ ತೀವ್ರವಾದ ಹೃದಯಾಘಾತವಾಗಿರುವುದು ಕಂಡುಬಂದಿದೆ. ಹೀಗಾಗಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಬಿಗಿ ಭದ್ರತೆಯಲ್ಲಿ ಆಂಬ್ಯುಲೆನ್ಸ್ ಮೂಲಕ ಕರೆದೊಯ್ಯಲಾಗುತ್ತದೆ ಎಂದರು.
ಇದಕ್ಕೂ ಮುನ್ನ ಪ್ರತಿಕ್ರಿಯೆ ನೀಡಿದ ಮತ್ತೊಬ್ಬ ಚಿತ್ರದುರ್ಗ ಡಿಎಚ್ ಒ ಡಾ ರಂಗನಾಥ್, ಮುರುಘಾ ಶರಣರಿಗೆ 60 ವರ್ಷ ವಯಸ್ಸಾಗಿದ್ದು, ಹೃದಯ ತುಂಬಾ ಸೂಕ್ಷ್ಮವಾಗಿದೆ. ಹೀಗಾಗಿ ಈ ರೀತಿಯ ಪ್ರಾಬ್ಲಂ ಬರೋದು ಸಹಜ ಎಂದರು. ಜಿಲ್ಲಾಧಿಕಾರಿ ಆದೇಶದ ಮೇರೆಗೆ ದಾವಣಗೆರೆಯ ಕಾರ್ಡಿಯಾಲಾಜಿಸ್ಟ್ ಡಾ.ಮಲ್ಲೇಶ್, ಡಾ.ಶ್ರೀನಿವಾಸ ತಂಡ ಜಿಲ್ಲಾಸ್ಪತ್ರೆಗೆ ಆಗಮಿಸಿತ್ತು. ಅವರು ಶ್ರೀಗಳ ಆರೋಗ್ಯ ತಪಾಸಣೆ ಮಾಡಿ ಸೆಕೆಂಡ್ ಒಪೀನಿಯನ್ ನೀಡಿದ ಬಳಿಕ ಬೆಂಗಳೂರಿಗೆ ವರ್ಗಾಯಿಸಲು ತೀರ್ಮಾನಿಸಲಾಗಿದೆ.
Advertisement