ಬೆಳಗಾವಿ: ಬಿಜೆಪಿ ಮುಖಂಡನ ಕಿರುಕುಳ, ಡೆತ್ ನೋಟ್ ಬರೆದಿಟ್ಟು ವ್ಯಕ್ತಿ ಆತ್ಮಹತ್ಯೆ!

ತಾಲೂಕಿನ ಮಚ್ಚೆಯಲ್ಲಿ ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದು, ತನ್ನ ಸಾವಿಗೆ ಬಿಜೆಪಿ ಮುಖಂಡ ಪೃಥ್ವಿ ಸಿಂಗ್‌ ಹಾಗೂ ಓರ್ವ ಪೊಲೀಸ್‌ ಅಧಿಕಾರಿ ಸೇರಿ ಇತರ ಕೆಲವರು ನೀಡಿರುವ ಕಿರುಕುಳ ಕಾರಣ ಎಂದು ಬರೆದಿರುವ ಡೆತ್‌ ನೋಟ್‌ ಲಭ್ಯವಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಳಗಾವಿ: ತಾಲೂಕಿನ ಮಚ್ಚೆಯಲ್ಲಿ ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದು, ತನ್ನ ಸಾವಿಗೆ ಬಿಜೆಪಿ ಮುಖಂಡ ಪೃಥ್ವಿ ಸಿಂಗ್‌ ಹಾಗೂ ಓರ್ವ ಪೊಲೀಸ್‌ ಅಧಿಕಾರಿ ಸೇರಿ ಇತರ ಕೆಲವರು ನೀಡಿರುವ ಕಿರುಕುಳ ಕಾರಣ ಎಂದು ಬರೆದಿರುವ ಡೆತ್‌ ನೋಟ್‌ ಲಭ್ಯವಾಗಿದೆ.

ಸಾವಿಯೋ ಪಿಳೈ(28) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ. ಕ್ಯಾಂಪ್ ಠಾಣೆಯ ಪಿಎಸ್‌ಐ, ಬಿಜೆಪಿ ಮುಖಂಡ ಪೃಥ್ವಿ ಸಿಂಗ್ ಕಿರುಕುಳ ನೀಡಿರುವುದಾಗಿ ಆರೋಪಿಸಲಾಗಿದೆ. ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಆಪ್ತ ವಲಯದಲ್ಲಿ ಪೃಥ್ವಿ ಸಿಂಗ್ ಗುರುತಿಸಿಕೊಂಡಿದ್ದಾರೆ.

ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸಾವಿಯೋ ಪಿಳ್ಳೈ ಓರ್ವ ವಿಧವೆಯೊಂದಿಗೆ ಸಂಬಂಧ ಹೊಂದಿದ್ದರು. ಅವರನ್ನು ವಿವಾಹವಾಗಲು ಸಾವಿಯೋ ನಿರಾಕರಿಸಿದ್ದರು. ಯುವತಿ ಹಣ ನೀಡುವಂತೆ ಕಿರುಕುಳ ನೀಡುತ್ತಿದ್ದರು. ಇಲ್ಲವಾದರೆ ಜೈಲಿಗೆ ಹಾಕುವುದಾಗಿ ಬೆದರಿಸುತ್ತಿದ್ದರು. ಈ ವಿಷಯ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು.

ಪೃಥ್ವಿ ಸಿಂಗ್‌ ಹಾಗೂ ಕ್ಯಾಂಪ್‌ ಠಾಣೆಯ ಓರ್ವ ಪೊಲೀಸ್‌ ಅಧಿಕಾರಿ ಸಾವಿಯೋಗೆ ಬೆದರಿಕೆ ಹಾಕಿ 1.50 ಲಕ್ಷ ರೂ.ಗೂ ಹೆಚ್ಚು ಹಣವನ್ನು ಈಗಾಗಲೇ ಪಡೆದುಕೊಂಡಿದ್ದಾರೆ. ಮತ್ತೆ ಹಣ ನೀಡುವಂತೆ ಒತ್ತಾಯಿಸುತ್ತಿದ್ದರು, ಇದರಿಂದ ಕಿರುಕುಳ ತಾಳಲಾಗದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ' ಎಂದು ಸಾವಿಯೋ ಬರೆದಿರುವ ಡೆತ್‌ ನೋಟ್‌ನಲ್ಲಿ ಉಲ್ಲೇಖಿಸಲಾಗಿದೆ. ವೈರಲ್ ಡೆತ್ ನೋಟ್ ಪೊಲೀಸರ ಕೈಗೆ ಇನ್ನೂ ಸಿಕ್ಕಿಲ್ಲ ಎಂದು ಗ್ರಾಮಾಂತರ ಎಸಿಪಿ ಗಿರೀಶ್ ಹೇಳಿದ್ದಾರೆ. ಪೊಲೀಸರು ಕೂಡ ಸಿಂಗ್‌ಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com