ತಂದೆಯಂತೆ ಅಂತ್ಯ ಕಂಡ ಪುತ್ರ: 'ಕತ್ತಿ ತಂದೆಗೆ ಅಸೆಂಬ್ಲಿಯಲ್ಲಿ ಹಾರ್ಟ್ ಅಟ್ಯಾಕ್ ಆಗಿತ್ತು' ಎಂದು ನೆನಪಿಸಿಕೊಂಡ ಸಿದ್ದರಾಮಯ್ಯ

ತಮ್ಮ ತಂದೆಯಂತೆ ಸಾವನ್ನು ಕಂಡ ಸಚಿವ ಉಮೇಶ್ ಕತ್ತಿಯವರ ಕೊನೆಗಳಿಗೆ ಕಾಕತಾಳೀಯ ಎನ್ನಬಹುದು. ಬೆಂಗಳೂರಿನ ಡಾಲರ್ಸ್ ಕಾಲೊನಿಯಲ್ಲಿರುವ ತಮ್ಮ ನಿವಾಸದಲ್ಲಿ ಕಳೆದ ರಾತ್ರಿ ಬಾತ್ ರೂಂಗೆ ಹೋಗಿದ್ದ ಸಚಿವ ಉಮೇಶ್ ಕತ್ತಿ ಅಲ್ಲಿಯೇ ಕುಸಿದು ಬಿದ್ದಿದ್ದರು.
ಸಚಿವ ಉಮೇಶ್ ಕತ್ತಿ(ಸಂಗ್ರಹ ಚಿತ್ರ)
ಸಚಿವ ಉಮೇಶ್ ಕತ್ತಿ(ಸಂಗ್ರಹ ಚಿತ್ರ)

ಬೆಂಗಳೂರು: ತಮ್ಮ ತಂದೆಯಂತೆ ಸಾವನ್ನು ಕಂಡ ಸಚಿವ ಉಮೇಶ್ ಕತ್ತಿಯವರ ಕೊನೆಗಳಿಗೆ ಕಾಕತಾಳೀಯ ಎನ್ನಬಹುದು. ಬೆಂಗಳೂರಿನ ಡಾಲರ್ಸ್ ಕಾಲೊನಿಯಲ್ಲಿರುವ ತಮ್ಮ ನಿವಾಸದಲ್ಲಿ ಕಳೆದ ರಾತ್ರಿ ಬಾತ್ ರೂಂಗೆ ಹೋಗಿದ್ದ ಸಚಿವ ಉಮೇಶ್ ಕತ್ತಿ ಅಲ್ಲಿಯೇ ಕುಸಿದು ಬಿದ್ದಿದ್ದರು.

ಎಷ್ಟು ಹೊತ್ತಾದರೂ ಬಾರದಿದ್ದಾಗ ಮನೆಯವರು ಬಾಗಿಲು ತೆರೆದು ನೋಡಿದಾಗ ಕುಸಿದು ಬಿದ್ದಿರುವುದು ಕಂಡುಬಂದು. ಹೃದಯ ಸ್ತಂಭನಕ್ಕೀಡಾಗಿದ್ದ ಅವರನ್ನು ತಕ್ಷಣವೇ ಎಂ ಎಸ್ ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಪ್ರಯೋಜನವಾಗಲಿಲ್ಲ.

ತಮ್ಮ ತಂದೆಯಂತೆಯೇ ಸಾವನ್ನು ಕಂಡಿದ್ದಾರೆ ಸಚಿವ ಉಮೇಶ್ ಕತ್ತಿ. ಅವರ ತಂದೆ ವಿಶ್ವನಾಥ್ ಕತ್ತಿ(Vishwanath Katti) ಶಾಸಕರಾಗಿದ್ದರು. ಅವರು ಸಹ ಹೃದಯಾಘಾತದಿಂದ ನಿಧನಹೊಂದಿದ್ದರು. ಅದು ಕರ್ನಾಟಕ ವಿಧಾನಸಭೆಯಲ್ಲಿಯೇ ಅನ್ನುವುದು ವಿಶೇಷ.

ಹಿಂದೆ ರಾಮಕೃಷ್ಣ ಹೆಗಡೆ (Ramakrishna Hegde) ಅವರು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಸಚಿವ ಉಮೇಶ್ ಕತ್ತಿ ಅವರ ತಂದೆ ವಿಶ್ವನಾಥ್ ಕತ್ತಿ ಅವರು ಜನತಾ ಪಕ್ಷದ ಶಾಸಕರಾಗಿದ್ದರು. 1984ರ ಸಮಯದಲ್ಲಿ ಶಾಸಕರಾಗಿದ್ದ ವಿಶ್ವನಾಥ್ ಕತ್ತಿ ಅವರು ವಿಧಾನಸಭೆ ಅಧಿವೇಶನ ನಡೆಯುತ್ತಿದ್ದಾಗ ಸದನದಲ್ಲೇ ಹೃದಯಾಘಾತದಿಂದ ನಿಧನರಾಗಿದ್ದರು.

ಸದನದೊಳಗೆ ಹೃದಯಾಘಾತ ಆಗುತ್ತಿದ್ದಂತೆ ವಿಶ್ವನಾಥ್ ಕತ್ತಿ ಅಲ್ಲೇ ಕುಸಿದು ಬಿದ್ದಿದ್ದರು. ತಕ್ಷಣ ಅಂದು ಸಚಿವರಾಗಿದ್ದ ಡಾ. ಜೀವರಾಜ ಆಳ್ವ ಸದನದೊಳಗೆ ಪ್ರಾಥಮಿಕ ಚಿಕಿತ್ಸೆ ನೀಡಿದರೂ ಫಲಕಾರಿಯಾಗಿರಲಿಲ್ಲ. ಸದನದ ಇತಿಹಾಸದಲ್ಲೇ ಶಾಸಕರಾದವರು ಸದನದಲ್ಲಿದ್ದಾಗ ಮೃತಪಟ್ಟದ್ದು ಅದೇ ಮೊದಲು. 

ಇಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆ ಗಳಿಗೆಯನ್ನು ನೆನಪಿಸಿಕೊಂಡರು. ಮಾಧ್ಯಮಗಳ ಜೊತೆ ಇಂದು ಮಾತನಾಡಿದ ಸಿದ್ದರಾಮಯ್ಯ, ಉಮೇಶ್ ಕತ್ತಿಯವರ ತಂದೆ ಕೂಡ ಶಾಸಕರಾಗಿದ್ದಾಗ ಅಸೆಂಬ್ಲಿಯಲ್ಲಿ ಹಾರ್ಟ್ ಅಟ್ಯಾಕ್ ಆಗಿತ್ತು. ನಾವೆಲ್ಲ ಆಗ ಶಾಸಕರಾಗಿದ್ದೆವು. ತಂದೆಯವರ ಬಳಿಕ ಮಗ ಉಮೇಶ್ ಕತ್ತಿಯವರು ಹುಕ್ಕೇರಿಯಿಂದ ನಿಂತು ಶಾಸಕರಾಗಿ ಗೆದ್ದು ಬಂದರು. 

ಸಚಿವ ಸಂಪುಟದ ಸಚಿವರು ತೀರಿಹೋದ್ದರಿಂದ ಬಿಜೆಪಿ ಜನೋತ್ಸವ ಯಾತ್ರೆಯನ್ನು ಮುಂದೂಡಿದ್ದರೆ ಒಳ್ಳೆಯದಿತ್ತು ಎಂದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com