ಹಾಸನ: ಹಳೆಯ ಮತ್ತು ಪರಿಷ್ಕೃತ ವಿಸ್ತೃತ ಯೋಜನಾ ವರದಿಯಲ್ಲಿ ಭಿನ್ನಾಭಿಪ್ರಾಯ ತಲೆದೋರಿದ ನಂತರ ದಶಕಗಳಷ್ಟು ಹಳೆಯದಾದ ಹಾಸನ ವಿಮಾನ ನಿಲ್ದಾಣ ಯೋಜನೆ ಭೂಮಿ ವಿವಾದಕ್ಕೆ ಸಿಲುಕಿದೆ. ಶಾಸಕ ಪ್ರೀತಂ ಜೆ ಗೌಡ ಮತ್ತು ಮಾಜಿ ಸಚಿವ ಹೆಚ್. ಡಿ. ರೇವಣ್ಣ ಈ ವಿಚಾರವನ್ನು ಪ್ರತಿಷ್ಠೆಯನ್ನಾಗಿ ತೆಗೆದುಕೊಂಡಿದ್ದು, ಹಳೆಯ ಮತ್ತು ಪರಿಷ್ಕೃತ ಯೋಜನೆ ವಿಚಾರದಲ್ಲಿ ಉಭಯ ನಾಯಕರು ಪರಸ್ಪರ ವಾಗ್ದಾಳಿ ನಡೆಸುತ್ತಿದ್ದಾರೆ.
2006ರಲ್ಲಿ ಸ್ವಾಧೀನಪಡಿಸಿಕೊಂಡ 960 ಎಕರೆ ಭೂಮಿಯಲ್ಲಿ ಜಿಲ್ಲಾಡಳಿತ ಮೀಸಲಿಟ್ಟ 540 ಎಕರೆಯ ಪರಿಷ್ಕೃತ ಯೋಜನೆಯಂತೆ ಯೋಜನೆ ಜಾರಿಯಾಗಬೇಕು ಎಂದು ಪ್ರೀತಂ ಬಯಸಿದ್ದರೆ, ಇತ್ತೀಚೆಗೆ ಸಿದ್ಧಪಡಿಸಲಾದ ಪರಿಷ್ಕೃತ ವಿಮಾನ ನಿಲ್ದಾಣ ಯೋಜನೆಗೆ ಎಚ್ಡಿ ರೇವಣ್ಣ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
2006ರಲ್ಲಿ ಸಿದ್ಧಪಡಿಸಲಾದ ವಿಸ್ತೃತಾ ಯೋಜನಾ ವರದಿಯಂತೆ ಯೋಜನೆ ಪೂರ್ಣಗೊಳಿಸಬೇಕು, ಜಿಲ್ಲಾಡಳಿತದಿಂದ 960 ಎಕರೆ ಭೂಮಿಯನ್ನು ಈಗಾಗಲೇ ಮೀಸಲಿಟ್ಟಿದ್ದು, ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡ ಅವರಿಗೆ ಸರ್ಕಾರ ಅವಮಾನಿಸಬಾರದು ಎಂದು ಹೆಚ್. ಡಿ. ರೇವಣ್ಣ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಒತ್ತಾಯಿಸಿದ್ದಾರೆ.
ಹಿಂದಿನ ಯೋಜನೆಯ ಪ್ರಸ್ತಾವನೆಗಳನ್ನು ಕೈಬಿಟ್ಟು ಪರಿಷ್ಕೃತ ಯೋಜನೆಯಂತೆ ಯೋಜನೆ ಕಾರ್ಯಗತಗೊಳಿಸಿ ಪೂರ್ಣಗೊಳಿಸಲಾಗುವುದು ಎಂದು ಪ್ರೀತಂ ಜೆ.ಗೌಡ ಸವಾಲು ಹಾಕಿದ್ದಾರೆ. ಯೋಜನೆ ಬದಲಾವಣೆಯಲ್ಲಿ ದೊಡ್ಡ ಕೈಗಳ ಕೈವಾಡವಿದೆ ಎಂದು ಶಂಕಿಸಿರುವ ಜೆಡಿಎಸ್ ಮುಖಂಡ ಎಚ್.ಡಿ.ರೇವಣ್ಣ, ಬುವನಹಳ್ಳಿ ಬಳಿ ವಿಮಾನ ನಿಲ್ದಾಣ ಸ್ಥಾಪಿಸುವ ಸಲುವಾಗಿ ಉದ್ದೇಶಪೂರ್ವಕವಾಗಿ ಯೋಜನೆಯನ್ನು ಪರಿಷ್ಕರಿಸಿದೆ ಎಂದು ಆರೋಪಿಸಿದ್ದಾರೆ.
ಹೊಸ ಯೋಜನೆಯ ಪ್ರಕಾರ 460 ಎಕರೆಯಲ್ಲಿ ಯೋಜನೆ ಬರಲಿದೆ. ಆದರೆ ಇದರಲ್ಲಿ ರನ್ವೇ ಮತ್ತು ಮಿನಿ ಫ್ಲೈಟ್ಗಳನ್ನು ಲ್ಯಾಂಡಿಂಗ್ ಮಾಡಲು ಜಾಗ ಸಾಕಾಗುವುದಿಲ್ಲ. ಜುಪಿಟರ್ ಏವಿಯೇಷನ್ನೊಂದಿಗೆ ಮಾಡಿಕೊಂಡಿರುವ ಒಪ್ಪಂದದಂತೆ ವಿಮಾನ ನಿಲ್ದಾಣ ಅಭಿವೃದ್ಧಿಪಡಿಸುವುದು ಉತ್ತಮ ಎಂದು ಅವರು ಹೇಳಿದ್ದಾರೆ.
ವಿಮಾನಯಾನ ತರಬೇತಿ ಕೇಂದ್ರ, ನಿರ್ವಹಣೆ, ದುರಸ್ತಿ ಮತ್ತು ಕೂಲಂಕುಷ ಪರೀಕ್ಷೆ, ಒಳನಾಡಿನ ಕಂಟೈನರ್ ಕೇಂದ್ರ, ಗಾಲ್ಫ್ ಕೋರ್ಸ್, ಹಾಸ್ಪಿಟಾಲಿಟಿ ಮತ್ತು ಕಲ್ಯಾಣ ಕೇಂದ್ರ, ತಂತ್ರಜ್ಞಾನ ಪಾರ್ಕ್ ಮತ್ತು ಸಂಪರ್ಕ ರಸ್ತೆಗಳನ್ನು ಒಳಗೊಂಡಿರುವ ಯೋಜನೆಯು ಅನುಷ್ಠಾನಗೊಂಡ ನಂತರ ಹಾಸನದಂತಹ ಸಣ್ಣ ಜಿಲ್ಲೆಗಳ ಸನ್ನಿವೇಶವು ಬದಲಾಗಲಿದೆ ಎಂದು ಅವರು ಹೇಳಿದರು.
ಉದ್ದೇಶಿತ ಹಾಸನ ವಿಮಾನ ನಿಲ್ದಾಣ ಯೋಜನೆ ಬದಲಾವಣೆಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಹೆಚ್. ಡಿ. ರೇವಣ್ಣ, ಇದರ ಬಗ್ಗೆ ಸರ್ಕಾರ ತನಿಖೆಗೆ ಆದೇಶಿಸಬೇಕು. ಇದರ ಹಿಂದಿನ ಕಾರಣವನ್ನು ಹೊರತೆಗೆಯಬೇಕು ಎಂದು ಒತ್ತಾಯಿಸಿದ್ದಾರೆ. ಜಿಲ್ಲೆಯ ಹಿತದೃಷ್ಟಿಯಿಂದ ಹಿಂದಿನ ಯೋಜನೆಯಂತೆ ವಿಮಾನ ನಿಲ್ದಾಣ ಯೋಜನೆ ಅನುಷ್ಠಾನಗೊಳಿಸಬೇಕು. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ಯೋಜನೆಗೆ ಶಂಕುಸ್ಥಾಪನೆ ಮಾಡಿದ್ದು, ಸಚಿವ ಸಂಪುಟದ ನಿರ್ಧಾರದ ನಂತರ ಜುಪಿಟರ್ ಏವಿಯೇಷನ್ ಬಿಲ್ಡ್ ಆಪರೇಟ್ ಮತ್ತು ವರ್ಗಾವಣೆಯ ಷರತ್ತಿನ ಅಡಿಯಲ್ಲಿ ಟೆಂಡರ್ ತೆಗೆದುಕೊಂಡಿದೆ ಎಂದು ಅವರು ಹೇಳಿದರು.
ಈ ಯೋಜನೆಗೆ ಅಂದಿನ ಸರ್ಕಾರ 200 ಕೋಟಿ ರೂಪಾಯಿ ಮಂಜೂರು ಮಾಡಿದ್ದಾಗಿ ತಿಳಿಸಿದ ರೇವಣ್ಣ, ರಾಜಕಾರಣಿಯೊಬ್ಬರಿಗೆ 5 ಕೋಟಿ ರೂಪಾಯಿ ಲಂಚ ನೀಡಲಾಗಿದೆ ಎಂದು ಆರೋಪಿಸಿದರು. ಆ ರಾಜಕಾರಣಿ ಹೆಸರನ್ನು ಸೂಕ್ತ ಸಮಯದಲ್ಲಿ ಅವರ ಹೆಸರನ್ನು ಬಹಿರಂಗಪಡಿಸುವುದಾಗಿ ಹೇಳಿದರು. ಹಿಂದಿನ ಯೋಜನೆಯಂತೆ ಯೋಜನೆಯನ್ನು ಕಾರ್ಯಗತಗೊಳಿಸಲು ಸರ್ಕಾರ ವಿಫಲವಾದಲ್ಲಿ ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ಚರ್ಚಿಸಿದ ನಂತರ ಮುಂದಿನ ಕ್ರಮವನ್ನು ಪಕ್ಷ ನಿರ್ಧರಿಸುತ್ತದೆ ಎಂದು ಪ್ರಶ್ನೆಯೊಂದಕ್ಕೆ ಅವರು ಹೇಳಿದರು.
ಜಿಲ್ಲೆಯ ಹಿತದೃಷ್ಟಿಯಿಂದ ರಾಜಕೀಯ ಮುಖಂಡರು ಭಿನ್ನಾಭಿಪ್ರಾಯ ಬದಿಗಿಡಬೇಕು ಎಂದು ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘದ ಉಪಾಧ್ಯಕ್ಷ ಕಿರಣ್ ಹೇಳಿದ್ದಾರೆ. 2006ರಲ್ಲಿ ಸಿದ್ಧಪಡಿಸಿದ ಡಿಪಿಆರ್ನಂತೆ ಯೋಜನೆ ಪೂರ್ಣಗೊಳಿಸುವುದು ಉತ್ತಮ ಎಂದರು.
Advertisement