ಬಳ್ಳಾರಿ: ಸಿರಗುಪ್ಪದಲ್ಲಿ ಮಸೀದಿ ಮೇಲೆ ಚಪ್ಪಲಿ ಎಸೆತ; ನಾಲ್ವರು ಬಂಧನ

ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕೋಮು ಘರ್ಷಣೆ ಸೃಷ್ಟಿಸುವ ಉದ್ದೇಶದಿಂದ ಯುವಕರ ಗುಂಪೊಂದು ಮಸೀದಿಯ ಮೇಲೆ ಚಪ್ಪಲಿಗಳನ್ನು ಎಸೆದಿರುವ ಘಟನೆ ಬಳ್ಳಾರಿ ಜಿಲ್ಲೆಯ ಸಿರುಗುಪ್ಪದಲ್ಲಿ ಶನಿವಾರ ರಾತ್ರಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬಳ್ಳಾರಿ: ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕೋಮು ಘರ್ಷಣೆ ಸೃಷ್ಟಿಸುವ ಉದ್ದೇಶದಿಂದ ಯುವಕರ ಗುಂಪೊಂದು ಮಸೀದಿಯ ಮೇಲೆ ಚಪ್ಪಲಿಗಳನ್ನು ಎಸೆದಿರುವ ಘಟನೆ ಬಳ್ಳಾರಿ ಜಿಲ್ಲೆಯ ಸಿರುಗುಪ್ಪದಲ್ಲಿ ಶನಿವಾರ ರಾತ್ರಿ ನಡೆದಿದೆ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬೆನ್ನಲ್ಲೇ ಪೊಲೀಸರು ನಾಲ್ವರು ಯುವಕರನ್ನು ಬಂಧಿಸಿ ಸಿರುಗುಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಸಾಮಾಜಿಕ ಮಾಧ್ಯಮಗಳ ಮೇಲೆ ಕಟ್ಟುನಿಟ್ಟಿನ ನಿಗಾ ವಹಿಸಿದ್ದು, ಪ್ರಚೋದನಕಾರಿ ವೀಡಿಯೊಗಳನ್ನು ಹಂಚಿಕೊಳ್ಳದಂತೆ ಬಳಕೆದಾರರಲ್ಲಿ ಮನವಿ ಮಾಡಿದ್ದಾರೆ. 

ವೈರಲ್ ಆದ ವಿಡಿಯೋದಲ್ಲಿ, ನಿಧಾನವಾಗಿ ಮೆರವಣಿಗೆ ಸಾಗುತ್ತಿದ್ದು, ಮಸೀದಿ ಬಳಿ ಬಂದಾಗ ಗುಂಪನ್ನು ನಿಯಂತ್ರಿಸಲು ಪೊಲೀಸರು  ಸುತ್ತುವರಿದಿದ್ದಾರೆ. ಆದರೆ ಇದ್ದಕ್ಕಿದ್ದಂತೆ ಯುವಕನೊಬ್ಬ ಮಸೀದಿಯತ್ತ ಚಪ್ಪಲಿ ಎಸೆದಿದ್ದಾನೆ. ಕೆಲ ಸ್ಥಳೀಯರು ವಿಡಿಯೋ ರೆಕಾರ್ಡ್ ಮಾಡಿದ್ದಾರೆ.

ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಅಲೋಕ್ ಕುಮಾರ್ “ಆರೋಪಿಗಳನ್ನು ಬಂಧಿಸಲಾಗಿದ್ದು, ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ.  ಕೋಮು ಘರ್ಷಣೆ ಉಂಟು ಮಾಡುವ ಉದ್ದೇಶದಿಂದ ಯುವಕನೊಬ್ಬ ಚಪ್ಪಲಿ ಎಸೆದಿದ್ದಾನೆ ಎಂದು ಬಳ್ಳಾರಿ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅದಾವತ್ ತಿಳಿಸಿದ್ದಾರೆ.

ಈ ಸಂಬಂಧ ನಾಲ್ವರು ದುಷ್ಕರ್ಮಿಗಳನ್ನು ಬಂಧಿಸಲಾಗಿದ್ದು, ಚಪ್ಪಲಿ ಎಸೆದ ಪ್ರಮುಖ ಆರೋಪಿ ನಿತೇಶ್ ಕುಮಾರ್ (22) ಸಿಂಧನೂರು ಪಟ್ಟಣದವನು. ಆತನ ಕೃತ್ಯವನ್ನು ಬೆಂಬಲಿಸಿದ ಸಿರಗುಪ್ಪ ಪಟ್ಟಣದ ನಿವಾಸಿಗಳಾದ ಭೀಮಣ್ಣ (23), ಅಶೋಕ್ (22) ಮತ್ತು ಆಂಜನೇಯಲು (21) ಅವರನ್ನೂ ಬಂಧಿಸಲಾಗಿದೆ.

“ವೀಡಿಯೊ ದೃಶ್ಯಾವಳಿಗಳನ್ನು ಆಧರಿಸಿ ಸಿರುಗುಪ್ಪ ಪಟ್ಟಣ ಪೊಲೀಸರು ತಕ್ಷಣ ನಾಲ್ವರು ಯುವಕರನ್ನು ಬಂಧಿಸಿದ್ದಾರೆ. ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪರಿಸ್ಥಿತಿ ಸಂಪೂರ್ಣವಾಗಿ ನಿಯಂತ್ರಣದಲ್ಲಿದ್ದು,  ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳ ಮೇಲೆ ವಿಶೇಷ ಗಮನ ಹರಿಸಿದ್ದೇವೆ.  ಯಾವುದೇ ಹಿಂಸಾಚಾರ ಮತ್ತು ಕೋಮು ಘರ್ಷಣೆಗೆ ಸಂಬಂಧಿಸಿದ ಪೋಸ್ಟ್‌ಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡರೆ, ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಅವರು ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com