ವೀಸಾ ಅವಧಿ ಮುಗಿದರೂ ನೆಲೆಸಿರುವ ವಿದೇಶಿ ವಲಸಿಗರು, ದೇಶವಿರೋಧಿ ಕೃತ್ಯಗಳಲ್ಲಿ ತೊಡಗಿಸಿಕೊಳ್ಳುವ ಅಪಾಯ ಹೆಚ್ಚು: ಆರಗ ಜ್ಞಾನೇಂದ್ರ

ಅಕ್ರಮ ವಿದೇಶಿ ವಲಸಿಗರನ್ನು ಹಿಡಿದಿಡುವ ದಿಗ್ಬಂಧನ ಕೇಂದ್ರದ ಸಾಮರ್ಥ್ಯವನ್ನು ಇಮ್ಮಡಿಗೊಳಿಸಿ  ಅಗತ್ಯ ಕ್ರಮ ತೆಗೆದುಕೊಳ್ಳುವ ಕುರಿತು ಗೃಹ ಸಚಿವ ಆರಗ ಜ್ಞಾನೇಂದ್ರ ಉನ್ನತ ಮಟ್ಟದ ಜಂಟಿ ಸಭೆ ನಡೆಸಿದರು.
ಆರಗ ಜ್ಞಾನೇಂದ್ರ
ಆರಗ ಜ್ಞಾನೇಂದ್ರ

ಬೆಂಗಳೂರು:  ಅಕ್ರಮ ವಿದೇಶಿ ವಲಸಿಗರನ್ನು ಹಿಡಿದಿಡುವ ದಿಗ್ಬಂಧನ ಕೇಂದ್ರದ ಸಾಮರ್ಥ್ಯವನ್ನು ಇಮ್ಮಡಿಗೊಳಿಸಿ  ಅಗತ್ಯ ಕ್ರಮ ತೆಗೆದುಕೊಳ್ಳುವ ಕುರಿತು ಗೃಹ ಸಚಿವ ಆರಗ ಜ್ಞಾನೇಂದ್ರ ಉನ್ನತ ಮಟ್ಟದ ಜಂಟಿ ಸಭೆ ನಡೆಸಿದರು. ಸಮಾಜ ಕಲ್ಯಾಣ ಇಲಾಖೆ ಸಚಿವ ಶ್ರೀನಿವಾಸ ಪೂಜಾರಿ ಕೂಡ ಉಪಸ್ಛಿತರಿದ್ದರು.

ವೀಸಾ ಅವಧಿ ಮುಗಿದರೂ ದೇಶದಲ್ಲಿಯೇ ಉಳಿದುಕೊಳ್ಳುತ್ತಿರುವ ವಿದೇಶಿ ವಲಸಿಗರು, ದೇಶವಿರೋಧಿ ಕೃತ್ಯಗಳಲ್ಲಿ ತೊಡಗಿಸಿಕೊಳ್ಳುವ ಅಪಾಯ ಇದೆ. ಹೀಗಾಗಿ, ಅವರನ್ನು ಗಡಿಪಾರು ಮಾಡಲು ಅಗತ್ಯ ಕ್ರಮ ತೆಗೆದುಕೊಳ್ಳಬೇಕು’ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಸೂಚಿಸಿದರು.

ಸದ್ಯ ಇರುವ ಅಕ್ರಮ ವಿದೇಶಿ ವಲಸಿಗರಿಗೆ ತಾತ್ಕಾಲಿಕ ವಸತಿ ಕಲ್ಪಿಸುವ ‘ದಿಗ್ಬಂಧನ ಕೇಂದ್ರ’ವನ್ನು ವಿಸ್ತರಿಸಿ ಸಾಮರ್ಥ್ಯ ಹೆಚ್ಚಿಸುವ ಕುರಿತು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರು ಸಭೆಯಲ್ಲಿ ಪ್ರಸ್ತಾಪಿಸಿದರು.

‘ಅಕ್ರಮ ಬಾಂಗ್ಲಾದೇಶಿ ನಾಗರಿಕರೂ ಸೇರಿದಂತೆ ಇತರ ವಿದೇಶಗಳ ವಲಸಿಗರನ್ನು, ಕಾನೂನಿನಂತೆ ಬಂಧಿಸಿ, ಯಾವುದೇ ಕಾರಾಗೃಹಗಳಲ್ಲಿ ಇಡದೆ, ಅವರಿಗೆಂದೇ ಇರುವ ದಿಗ್ಬಂಧನ ಕೇಂದ್ರದಲ್ಲಿ ವಸತಿ ಕಲ್ಪಿಸಬೇಕಿದೆ. ಆದರೆ, ಬೆಂಗಳೂರಿನ ಸಮೀಪ ನೆಲಮಂಗಲದಲ್ಲಿ ಮಾತ್ರ ದಿಗ್ಬಂಧನ ಕೇಂದ್ರ ಕಾರ್ಯಾಚರಿಸುತ್ತಿದ್ದು, ಅಲ್ಲಿ ಸ್ಥಳಾವಕಾಶ ಕೊರತೆ ಇದೆ’ ಎಂದು ಸೂದ್‌ ಹೇಳಿದರು.

ಅದಕ್ಕೆ ಗೃಹ ಸಚಿವರು, ‘ಪ್ರಸ್ತುತ ದಿಗ್ಬಂಧನ ಕೇಂದ್ರದ ಸಾಮರ್ಥ್ಯ ವಿಸ್ತರಣೆಗೆ ಸಮಾಜ ಕಲ್ಯಾಣ ಇಲಾಖೆ ಅನುದಾನ ಒದಗಿಸಬೇಕು. ಅನುದಾನ ಬಿಡುಗಡೆ ವಿಳಂಬ ಆಗದಂತೆ ಕ್ರಮ ಕೈಗೊಳ್ಳಬೇಕು‘ ಎಂದು ಸಚಿವ ಕೋಟಾ ಬಳಿ ವಿನಂತಿಸಿದರು.

ಆಗ ಮಾತನಾಡಿದ ಕೋಟ, ಗೃಹ ಇಲಾಖೆ ಸಲ್ಲಿಸುವ ಪ್ರಸ್ತಾವನೆಯನ್ನು ಆದ್ಯತೆ ಮೇರೆಗೆ ಪರಿಗಣಿಸಲಾಗುವುದು ಎಂದು ಭರವಸೆ ನೀಡಿದರು. ಅಲ್ಲದೆ, ಸಭೆಯಲ್ಲಿದ್ದ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಈ ಬಗ್ಗೆ ನಿರ್ದೇಶನವನ್ನೂ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com