ನಮ್ಮಂತಹವರು ಬಿಜೆಪಿಗೆ ಕಾಣೋಲ್ಲ, ರೌಡಿಗಳು, ದುಡ್ಡಿರುವವರು ಕಾಣುತ್ತಾರೆ: ಪ್ರಮೋದ್ ಮುತಾಲಿಕ್
ಗಂಗಾವತಿ: ಹಿಂದುತ್ವಕ್ಕಾಗಿ ದುಡಿದ ನಮ್ಮಂತಹವರು ಬಿಜೆಪಿಗೆ ಕಾಣುವುದಿಲ್ಲ, ರೌಡಿಗಳು, ದುಡ್ಡಿರುವವರು ಕಾಣುತ್ತಾರೆಂದು ಶ್ರೀರಾಮಸೇನೆಯ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅವರು ಸೋಮವಾರ ಹೇಳಿದ್ದಾರೆ.
ಹನುಮ ವ್ರತದ ಹಿನ್ನೆಲೆ ಅಂಜನಾದ್ರಿಗೆ ಲಕ್ಷಾಂತರ ಭಕ್ತರು ಮಾಲಾ ವಿರಮಣ ಹಮ್ಮಿಕೊಂಡ ಕಾರಣ ಅಂಜನಾದ್ರಿಗೆ ಭೇಟಿ ನೀಡಿ, ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಮುತಾಲಿಕ್ ಅವರು, ರೌಡಿಗಳ ಸೇರ್ಪಡೆ ವಿಚಾರ ಬಿಜೆಪಿ ಪಕ್ಷಕ್ಕೆ ಶೋಭೆ ತರುವುದಿಲ್ಲ. ಹಣ ಇದ್ದವರನ್ನು, ರೌಡಿಗಳನ್ನು, ಗೂಂಡಾಗಳನ್ನು ಪಕ್ಷದೊಳಗೆ ಸೇರಿಸಿಕೊಳ್ಳುತಿದ್ದಾರೆ. ತ್ಯಾಗ, ಬಲಿದಾನ ಮಾಡಿ ಶ್ರಮ ವಹಿಸಿ ದುಡಿದ ಹಿಂದೂ ಕಾರ್ಯಕರ್ತರು ಅವರಿಗೆ ಕಾಣುತ್ತಿಲ್ಲ ಎಂದು ಹೇಳಿದ್ದಾರೆ.
ನಮ್ಮ ಶ್ರೀರಾಮಸೇನೆಯ ಸಿದ್ಧಲಿಂಗ ಶ್ರೀ ಹಾಗೂ ನಾನು ರಾಜಕೀಯ ಪ್ರವೇಶಕ್ಕೆ ನಿರ್ಧಾರ ಮಾಡಿದರೆ ನಿಮಗೆ ಕಾಣುವುದಿಲ್ಲ. ಬದಲಾಗಿ ರೌಡಿಗಳು ಗೂಂಡಾಗಳು ಕಾಣುತ್ತಾರೆ. ಇಡೀ ಸಮಾಜದ ಸ್ವಾಸ್ಥ್ಯವನ್ನು, ನೈತಿಕತೆ ಕೆಡಿಸುತ್ತಿರೋದು ಸರಿಯಲ್ಲ ಎಂದು ಬಿಜೆಪಿ ವಿರುದ್ಧ ಗುಡುಗಿದರು.
ಇದಕ್ಕೆಲ್ಲ ಸೆಡ್ಡು ಹೊಡೆಯಲು ನಿರ್ಧರಿಸಲಾಗಿದ್ದು, ಹಿಂದೂ ಸಂಘಟನೆಗಳ ಒಕ್ಕೂಟದಿಂದ 25 ಪ್ರಖರ ಹಿಂದೂವಾದಿ ಅಭ್ಯರ್ಥಿಗಳನ್ನು ಈ ಬಾರಿಯ ಚುನಾವಣೆಯಲ್ಲಿ ಕಣಕ್ಕಿಸುತ್ತೇವೆ. ಇದರಲ್ಲಿ ಐದು ಜನ ಸ್ವಾಮೀಜಿಗಳು ಈಗಾಗಲೇ ತಯಾರಿ ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು.
ಇದೇ ವೇಳೆ ʻಅಂಜನಾದ್ರಿ ಕ್ಷೇತ್ರದ ಆವರಣದಲ್ಲಿ 500 ಮೀಟರ್ ಅಂತರದಲ್ಲಿ ಅನ್ಯ ಧರ್ಮಿಯರ ವ್ಯಾಪಾರ, ವ್ಯವಹಾರಕ್ಕೆ ಅವಕಾಶ ಕೊಡಬಾರದು. ಒಂದು ವೇಳೆ ಅವಕಾಶ ಕೊಟ್ಟರೆ ನಮ್ಮ ಹನುಮ ಭಕ್ತರು ಅದಕ್ಕೆ ಉತ್ತರ ಕೊಡುತ್ತಾರೆʼʼ ಎಂದು ಸವಾಲು ಹಾಕಿದರು.
ಚುನಾವಣೆಗಾಗಿ ಅದು ಮಾಡ್ತೀವಿ, ಇದು ಮಾಡ್ತೀವಿ ಅಂತ ಬೊಗಳೆ ಬಿಡಬೇಡಿ. ಪ್ರಾಮಾಣಿಕವಾಗಿ ಹನುಮ ಸ್ಥಳಕ್ಕೆ ಮಾನ್ಯತೆ ಕೊಡಬೇಕುʼʼ ಎಂದು ಆಗ್ರಹಿಸಿದರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ