ಅತ್ಯಾಚಾರ, ಬ್ಲ್ಯಾಕ್‌ಮೇಲ್ ಮತ್ತು ಕೊಲೆ: ಬೆಂಗಳೂರಿನಲ್ಲಿ ಗುಟ್ಖಾ ಮಾರಾಟಗಾರನನ್ನು ಕೊಂದ ದಂಪತಿ!

23 ವರ್ಷದ ವಿವಾಹಿತ ಮಹಿಳೆ ಮೇಲೆ ಅತ್ಯಾಚಾರ ಎಸಗಿ, ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಗುಟ್ಕಾ ಮಾರಾಟಗಾರನನ್ನು ಮಹಿಳೆ ತನ್ನ ಪತಿ ಜೊತೆ ಸೇರಿ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ವೈಟ್‌ಫೀಲ್ಡ್ ನಲ್ಲಿ ನಡೆದಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: 23 ವರ್ಷದ ವಿವಾಹಿತ ಮಹಿಳೆ ಮೇಲೆ ಅತ್ಯಾಚಾರ ಎಸಗಿ, ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಗುಟ್ಕಾ ಮಾರಾಟಗಾರನನ್ನು ಮಹಿಳೆ ತನ್ನ ಪತಿ ಜೊತೆ ಸೇರಿ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ವೈಟ್‌ಫೀಲ್ಡ್ ನಲ್ಲಿ ನಡೆದಿದೆ. 

ದಂಪತಿಗಳು ಗುಟ್ಖಾ ಮಾರಾಟಗಾರನನ್ನು ಕೊಂದು, ಶವವನ್ನು ಸಿಮೆಂಟ್ ಚೀಲದಲ್ಲಿ ಸುತ್ತಿ ಕಸದ ತೊಟ್ಟಿಯ ಬಳಿ ಎಸೆದಿದ್ದಾರೆ. ಕೊಲೆಯನ್ನು ಕಣ್ಣಾರೆ ಕಂಡರೂ ಪೊಲೀಸರಿಗೆ ಮಾಹಿತಿ ನೀಡದ ಆರೋಪದ ಮೇಲೆ ಮೃತನ ಪತ್ನಿಯನ್ನು ಬಂಧಿಸಲಾಗಿದೆ. ಆರೋಪಿ ದಂಪತಿ ಮತ್ತು ಕೊಲೆಯಾದ ವ್ಯಕ್ತಿ ಕುಟುಂಬ ಉತ್ತರ ಭಾರತದವರು.

ಕೊಲೆಯಾದ ವ್ಯಕ್ತಿ ಬಿಹಾರ ಮೂಲದ ಓಂನಾಥ್ ಸಿಂಗ್(48) ಎಂದು ಗುರುತಿಸಲಾಗಿದ್ದು, ಜುಲೈ 5 ರಂದು ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳತ್ತೂರಿನ ಕಸದ ತೊಟ್ಟಿಯ ಬಳಿ ಅವರ ಶವ ಪತ್ತೆಯಾಗಿತ್ತು. ಆರೋಪಿಗಳು ಓಂನಾಥ್ ಸಿಂಗ್ ರನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಓಂನಾಥ್ ಸಿಂಗ್ ರಸ್ತೆ ಬದಿಯ ಅಂಗಡಿಗಳಿಗೆ ಗುಟ್ಕಾ ಪೂರೈಕೆ ಮಾಡುತ್ತಿದ್ದರು.

ಆರೋಪಿಗಳನ್ನು ಉತ್ತರ ಪ್ರದೇಶ ಮೂಲದ ವಿಶಾಲ್ ಪ್ರಜಾಪತಿ(24) ಮತ್ತು ಆತನ ಪತ್ನಿ ಎಂದು ಗುರುತಿಸಲಾಗಿದೆ. ಆರೋಪಿಗಳು ಮತ್ತು ಕೊಲೆಯಾದ ವ್ಯಕ್ತಿಯ ಕುಟುಂಬ ಬೆಳತ್ತೂರಿನಲ್ಲಿ ನೆರೆಹೊರೆಯವರಾಗಿದ್ದರು. 

ಓಂನಾಥ್ ಸಿಂಗ್ ಪ್ರಜಾಪತಿಯ ಪತ್ನಿಯ ಮನವೊಲಿಸಿ ಅತ್ಯಾಚಾರ ಎಸಗಿದ್ದು, ಈ ಕೃತ್ಯವನ್ನು ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದ. ಬಳಿಕ ಆ ವಿಡಿಯೋ ಬಳಸಿಕೊಂಡು ಆಕೆಗೆ ಬ್ಲಾಕ್‌ಮೇಲ್ ಮಾಡಿ ಪದೇ ಪದೇ ಅತ್ಯಾಚಾರವೆಸಗಿದ್ದಾನೆ. ಅತ್ಯಾಚಾರ ಸಂತ್ರಸ್ತೆ ಈ ಸಂಬಂಧ ಪೊಲೀಸರಿಗೆ ದೂರು ನೀಡಿಲ್ಲ. ಆದರೆ ವಿಷಯವನ್ನು ತನ್ನ ಪತಿಗೆ ತಿಳಿಸಿದ್ದಾಳೆ. ನಂತರ ದಂಪತಿ ಆತನನ್ನು ಕೊಲ್ಲಲು ಸಂಚು ರೂಪಿಸಿದ್ದರು. ದಂಪತಿಯನ್ನು ಮಂಗಳೂರಿನಲ್ಲಿ ಬಂಧಿಸಲಾಗಿದೆ ಎಂದು ತನಿಖೆಯ ಭಾಗವಾಗಿರುವ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಜಾಪತಿ ಸಿಂಗ್ ಅವರಿಂದ 6 ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಹಣ ವಾಪಸ್ ಕೊಡಲು ವಿಳಂಬವಾದ ಕಾರಣ ಇಬ್ಬರ ನಡುವೆ ಜಗಳವಾಗಿತ್ತು. ಈ  ಸಂಬಂಧ ಕಾಡುಗೋಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com