ಮಳೆಗಾಲದಲ್ಲಿ ರಸ್ತೆಯ ಹೊರೆ ತಗ್ಗಿಸಲು ಶಿರಾಡಿ ಘಾಟ್ ನಲ್ಲಿ ಸದ್ಯಕ್ಕೆ ಏಕಮುಖ ಸಂಚಾರ: ಸಚಿವ ಸಿ ಸಿ ಪಾಟೀಲ್

ಭಾರಿ ಮಳೆಯಿಂದಾಗಿ ಪದೇ ಪದೇ ಭೂಕುಸಿತಕ್ಕೆ ಒಳಗಾಗುತ್ತಿರುವ ಬೆಂಗಳೂರು-ಮಂಗಳೂರು ಮಾರ್ಗದ ಶಿರಾಡಿ ಘಾಟ್ ಮಾರ್ಗದ ಮೇಲಿನ ಹೊರೆ ಕಡಿಮೆ ಮಾಡಲು ರಾಜ್ಯ ಸರ್ಕಾರ ಸದ್ಯಕ್ಕೆ ಬೆಂಗಳೂರು ಕಡೆಗೆ ಬರುವ ವಾಹನಗಳಿಗೆ ಪರ್ಯಾಯ ಏಕಮುಖ ಮಾರ್ಗ ನಿರ್ಮಿಸಲು ಮುಂದಾಗಿದೆ ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ತಿಳಿಸಿದ್ದಾರೆ.
ಶಿರಾಡಿ ಘಾಟ್ ರಸ್ತೆ
ಶಿರಾಡಿ ಘಾಟ್ ರಸ್ತೆ
Updated on

ಬೆಂಗಳೂರು: ಭಾರಿ ಮಳೆಯಿಂದಾಗಿ ಪದೇ ಪದೇ ಭೂಕುಸಿತಕ್ಕೆ ಒಳಗಾಗುತ್ತಿರುವ ಬೆಂಗಳೂರು-ಮಂಗಳೂರು ಮಾರ್ಗದ ಶಿರಾಡಿ ಘಾಟ್ ಮಾರ್ಗದ ಮೇಲಿನ ಹೊರೆ ಕಡಿಮೆ ಮಾಡಲು ರಾಜ್ಯ ಸರ್ಕಾರ ಸದ್ಯಕ್ಕೆ ಬೆಂಗಳೂರು ಕಡೆಗೆ ಬರುವ ವಾಹನಗಳಿಗೆ ಪರ್ಯಾಯ ಏಕಮುಖ ಮಾರ್ಗ ನಿರ್ಮಿಸಲು ಮುಂದಾಗಿದೆ ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ತಿಳಿಸಿದ್ದಾರೆ.

ಇನ್ನೊಂದು ವಾರದಲ್ಲಿ ರಸ್ತೆ ಸಿದ್ಧಗೊಳ್ಳುವ ನಿರೀಕ್ಷೆಯಿದೆ, ಆ ಬಳಿಕ ಈ ರಸ್ತೆಯಲ್ಲಿ ಭಾರಿ ವಾಹನಗಳ ಸಂಚಾರಕ್ಕೆ ವಿಧಿಸಿರುವ ನಿರ್ಬಂಧಗಳನ್ನು ಸರ್ಕಾರ ತೆಗೆದುಹಾಕುತ್ತದೆ ಎಂದು ಹೇಳಿದರು. ಬೆಂಗಳೂರಿನಿಂದ ಮಂಗಳೂರಿಗೆ ಹೋಗುವ ವಾಹನಗಳು ಈಗಿರುವ ಶಿರಾಡಿ ಘಾಟ್ ಮಾರ್ಗವಾಗಿ ಸಾಗಿದರೆ, ಮಂಗಳೂರಿನಿಂದ ಬರುವವರು ಹಾಸನದ ಸಕಲೇಶಪುರಕ್ಕೆ ಸಮೀಪವಿರುವ ದೋಣಿಗಲ್ ಬಳಿಯ ಕಪ್ಪಳ್ಳಿ ಮತ್ತು ಕೆಸಗಾನಹಳ್ಳಿ ಗ್ರಾಮಗಳ ಮೂಲಕ ಹೋಗುತ್ತವೆ.

ಈ ಮಾರ್ಗಗಳಲ್ಲಿ ಏಕಮುಖ ಸಂಚಾರಕ್ಕೆ ಆದೇಶ ಹೊರಡಿಸುವಂತೆ ಹಾಸನ ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದರು. ಇದು ತಾತ್ಕಾಲಿಕ ಕ್ರಮವಾಗಿದ್ದು, ಕೂಡಲೇ ಹಣ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆದೇಶಿಸಿದ್ದಾರೆ. ಈಗ ಪದೇ ಪದೇ ಭೂಕುಸಿತವಾಗುತ್ತಿರುವ ಕಾರಣ ಲಘು ಮೋಟಾರು ವಾಹನಗಳಿಗೆ ಮಾತ್ರ ಅನುಮತಿ ನೀಡಲಾಗಿದೆ ಎಂದರು. 

ಭಾರೀ ಮಳೆಯಿಂದಾಗಿ, ಈ ವರ್ಷ ಸಂಪಾಜೆ, ಅರಬೈಲ್, ಆಗುಂಬೆ ಮತ್ತು ಗೇರುಸೊಪ್ಪ ಘಾಟ್‌ಗಳು ಮತ್ತು ಇತರೆಡೆ 63 ಭೂಕುಸಿತಗಳಾಗಿವೆ. ಶಿರಾಡಿ ಘಾಟ್‌ನಲ್ಲಿ ಮೈಕ್ರೊ ಪೈಲಿಂಗ್ ಮತ್ತು ಸಾಯಿಲ್ ನೇಯ್ಲಿಂಗ್ ಮಾಡುವ ಕೆಲಸಗಳು ನಡೆಯುತ್ತಿದ್ದು, ಇವುಗಳಿಂದ ಶಾಶ್ವತ ಪರಿಹಾರ ಕಂಡುಕೊಳ್ಳುವ ಉದ್ದೇಶವಿದೆ ಎಂದರು.

ಮುಂದಿನ ವರ್ಷ ಮಾರ್ಚ್ ಅಂತ್ಯದೊಳಗೆ ಶಿರಾಡಿ ಘಾಟ್ ರಸ್ತೆಯ 35 ಕಿಲೋ ಮೀಟರ್ ಕಾಮಗಾರಿಯನ್ನು ಪೂರ್ಣಗೊಳಿಸುವ ಗಡುವನ್ನು ಪೂರೈಸಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು. ಮುಂದಿನ ಮಳೆಗಾಲದ ವೇಳೆಗೆ ಇಂತಹ ಸಮಸ್ಯೆಗಳು ಎದುರಾಗಬಾರದು. 39 ಕಿಲೋ ಮೀಟರ್ ವ್ಯಾಪ್ತಿಯಲ್ಲಿ 20 ಕಿಲೋ ಮೀಟರ್ ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಗೆ ಬರುತ್ತಿದ್ದು, ಅದು ಸುಸ್ಥಿತಿಯಲ್ಲಿದೆ. ಉಳಿದ 19 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಕಾಮಗಾರಿ ನಡೆಯುತ್ತಿದೆ. ಮುಂಗಾರು ಮಳೆಯಿಂದಾಗಿ ಕಾಮಗಾರಿ ವಿಳಂಬವಾಗಿದೆ. ಅಗತ್ಯಬಿದ್ದರೆ ಕಾಮಗಾರಿಗೆ ವೇಗ ನೀಡಲು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರೊಂದಿಗೆ ಚರ್ಚಿಸುವುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com