ಬೆಂಗಳೂರು: ಆಜಾದಿಯ ಅಮೃತ ಮಹೋತ್ಸವ ಆಚರಣೆಯ ಹಿನ್ನೆಲೆಯಲ್ಲಿ ಹರ್ ಘರ್ ತಿರಂಗಾ ಅಭಿಯಾನ ನಡೆಸಲಾಗುತ್ತಿದ್ದು, ಇದರ ಭಾಗವಾಗಿ ರಾಜ್ಯ ಅಂಚೆ ಇಲಾಖೆ 12 ಲಕ್ಷ ರಾಷ್ಟ್ರ ಧ್ವಜಗಳನ್ನು ಮಾರಾಟ ಮಾಡುವ ಯೋಜನೆ ಹೊಂದಿದೆ.
ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ರಾಜೇಂದ್ರ ಕುಮಾರ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನೊಂದಿಗೆ ಮಾತನಾಡಿದ್ದು, "ರಾಜ್ಯದ ಪ್ರತಿ ಪ್ರಧಾನ ಅಂಚೆ ಕಚೇರಿಯ ಎದುರು ಸೆಲ್ಫಿ ಪಾಯಿಂಟ್ ನ್ನು ಸ್ಥಾಪಿಸಲಾಗುತ್ತದೆ. ರಾಷ್ಟ್ರಧ್ವಜದೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಜನತೆ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಬಹುದಾಗಿದೆ. ಇನ್ನು ಹರ್ ಘರ್ ತಿರಂಗಾ ಗೀತೆಯ ಮೂಲಕ ಪ್ರಧಾನ ಅಂಚೆ ಕಚೇರಿಗಳಲ್ಲಿ ಅಭಿಯಾನದ ವಿಡಿಯೋಗಳನ್ನು ಪ್ರಸಾರ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಕೇಂದ್ರ ಸರ್ಕಾರ ದೇಶಾದ್ಯಂತ 2 ಕೋಟಿ ಧ್ವಜ ಮಾರಾಟ ಮಾಡುವುದನ್ನು ಕಡ್ಡಾಯಗೊಳಿಸಿದೆ. ರಾಜ್ಯದಲ್ಲಿ ಎಲ್ಲಾ ಅಂಚೆ ಕಚೇರಿಗಳ ಮೂಲಕ ಆ.1 ರಿಂದ 12 ಲಕ್ಷ ಧ್ವಜಗಳನ್ನು ಮಾರಾಟ ಮಾಡುವ ಉದ್ದೇಶ ಹೊಂದಲಾಗಿದೆ ಎಂದು ಸಿಪಿಎಂಜಿ ಹೇಳಿದೆ.
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಮೂರು ದಿನಗಳ ಕಾಲ ಧ್ವಜಾರೋಣ ಮಾಡುವುದಕ್ಕಾಗಿ ಜನತೆಗೆ ಉತ್ತೇಜನ ನೀಡಲಾಗುವುದು, ಜನತೆಯಲ್ಲಿ ದೇಶಭಕ್ತಿ ಮೂಡಿಸುವುದು ಹಾಗೂ ಆ ಮೂಲಕ ದೇಶ ಕಟ್ಟಲು ಶ್ರಮಿಸಿದವರ ಕೊಡುಗೆಗಳನ್ನು ನೆನೆಯುವಂತೆ ಮಾಡುವುದು ಈ ಅಭಿಯಾನದ ಹಿಂದಿನ ಉದ್ದೇಶವಾಗಿದೆ ಎಂದು ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ರಾಜೇಂದ್ರ ಕುಮಾರ್ ಹೇಳಿದ್ದಾರೆ.
Advertisement