ಪ್ರವೀಣ್ ನೆಟ್ಟಾರು ಹಂತಕರ ಬಂಧನಕ್ಕೆ ಕೇರಳ ಪೊಲೀಸರ ನೆರವು, 15 ಜನರನ್ನು ವಶಕ್ಕೆ ಪಡೆದು ವಿಚಾರಣೆ: ಆರಗ ಜ್ಞಾನೇಂದ್ರ

ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ 15 ಜನರನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಆರಗ ಜ್ಞಾನೇಂದ್ರ ಪ್ರವೀಣ್ ನೆಟ್ಟಾರು(ಸಂಗ್ರಹ ಚಿತ್ರ)
ಆರಗ ಜ್ಞಾನೇಂದ್ರ ಪ್ರವೀಣ್ ನೆಟ್ಟಾರು(ಸಂಗ್ರಹ ಚಿತ್ರ)

ಬೆಂಗಳೂರು: ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ 15 ಜನರನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ಬೆಂಗಳೂರಿನಲ್ಲಿಂದು ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಹತ್ಯೆ ಮಾಡಿದವರು ಬೈಕ್ ನಲ್ಲಿ ಬಂದು ಕುಕೃತ್ಯ ಎಸಗಿದ್ದಾರೆ ಎಂದು ಹೇಳಲಾಗುತ್ತಿದ್ದು ಬೈಕ್ ನಲ್ಲಿ ಕೇರಳದ ಕಾಸರಗೋಡಿನ ದಾಖಲಾತಿ ನಂಬರ್ ಇರುವುದರಿಂದ ಕೇರಳ ಪೊಲೀಸರ ಜೊತೆ ಚರ್ಚೆ ನಡೆಸಲಾಗುತ್ತಿದೆ. ಕೇರಳ ಪೊಲೀಸರ ಜೊತೆ ಜಂಟಿ ಕಾರ್ಯಾಚರಣೆ ನಡೆಸಿದರೆ ಹತ್ಯೆ ಎಸಗಿದವರನ್ನು ಮಟ್ಟ ಹಾಕಲು ಸುಲಭವಾಗುತ್ತದೆ ಎಂದಿದ್ದಾರೆ.

ನಾವು ಅಸಹಾಕರಲ್ಲ, ನಮ್ಮ ಸರ್ಕಾರ ಅಸಹಾಯಕವಾಗಿಲ್ಲ, ನಾವು ಎಲ್ಲಾ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಆಕ್ರೋಶ ಇದ್ದಿದ್ದಕ್ಕೆ ಅನೇಕ ಬಿಜೆಪಿ ಕಾರ್ಯಕರ್ತರು ರಾಜೀನಾಮೆ ನೀಡುತ್ತಿದ್ದಾರೆ. ಅನೇಕ ಮತಾಂಧ ಸಂಘಟನೆಗಳ ಮೇಲೆ ಅನುಮಾನವಿದೆ ಎಂದು ಹೇಳಿದರು.

ಮತಾಂಧ ಸಂಘಟನೆಗಳ ಮೇಲೆ ನಮಗೆ ಅನುಮಾನವಿದೆ, ಹಂತಕರ ಬಂಧನಕ್ಕೆ ಕೇರಳ ಪೊಲೀಸರ ನೆರವು ಕೇಳಿದ್ದೇವೆ, ಕರಾವಳಿಯ ಗಡಿಭಾಗ ಕೇರಳದಿಂದ ಬಂದು ಕೊಲೆಗಡುಕರು ಕುಕೃತ್ಯ ಎಸಗುವ ಘಟನೆ ಹಲವು ಬಾರಿ ನಡೆದಿದೆ. ಜಂಟಿ ಕಾರ್ಯಾಚರಣೆಯಿಂದ ಮಟ್ಟಹಾಕಲು ಸಾಧ್ಯವಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ಎಸ್‌ಡಿಪಿಐ ಮತ್ತು ಪಿಎಫ್‌ಐ ಸಂಘಟನೆಗಳನ್ನು ನಿಷೇಧಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಚಿಂತನೆ ನಡೆಸಿವೆ. ಆದರೆ, ಒಂದೇ ಒಂದು ಘಟನೆಯನ್ನು ಆಧರಿಸಿ ನಿಷೇಧಿಸಲು ಸಾಧ್ಯವಿಲ್ಲ. ಇತರ ರಾಜ್ಯಗಳಲ್ಲಿ ಗುಂಪುಗಳನ್ನು ನಿಷೇಧಿಸಿದ್ದರೂ, ನಿಷೇಧದ ವಿರುದ್ಧ ನ್ಯಾಯಾಲಯಗಳಿಂದ ತಡೆ ಬಂದಿದೆ ಎಂದರು. 

ತನಿಖೆ ಮುಂದುವರಿದಿದ್ದು, ಹಲವರನ್ನು ಬಂಧಿಸಲಾಗಿದೆ. ನಮಗೆ PFI ಮತ್ತು SDPI ಮೇಲೆ ಅನುಮಾನವಿದೆ. ಆದರೆ ಈಗಲೇ ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ. ಪೊಲೀಸರು ಶೀಘ್ರವೇ ಪತ್ತೆಹಚ್ಚುತ್ತಾರೆ ಎಂದರು.

ಸದ್ಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪರಿಸ್ಥಿತಿ ಶಾಂತವಾಗಿದೆ. ಸೂತಕದ ಛಾಯೆಯಲ್ಲಿ ಬಿಜೆಪಿ ಸರ್ಕಾರದ ಜನೋತ್ಸವ ಕಾರ್ಯಕ್ರಮ ಮಾಡುವುದು ಸರಿಯಲ್ಲ ಎಂದು ಸಿಎಂ ಬೊಮ್ಮಾಯಿ ಜನೋತ್ಸವ ಕಾರ್ಯಕ್ರಮ ರದ್ದುಮಾಡುವ ತೀರ್ಮಾನ ಮಾಡಿರುವುದು ಪ್ರಶಂಸನೀಯ ಎಂದು ಕೂಡ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com