ರಾಜ್ಯೋತ್ಸವ ಪ್ರಶಸ್ತಿ ನೀಡಲು ವಯೋಮಿತಿ ನಿರ್ಬಂಧ ಸಡಿಲಿಕೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಸಾಧನೆ ಮಾಡಿ ಪ್ರಶಸ್ತಿಗಾಗಿ ಪ್ರಯತ್ನ ಮಾಡದೇ ಇರುವವರಿಗೆ ಪ್ರಶಸ್ತಿ ದೊರೆಯುತ್ತದೆ. ಕೆಲವರು ಸಾಧನೆ ಮಾಡಿ ಪ್ರಶಸ್ತಿಗಾಗಿ ಸಾಕಷ್ಟು ಪ್ರಯತ್ನ‌ ಮಾಡುತ್ತಾರೆ.
ರಾಜ್ಯೋತ್ಸವ ಪ್ರಶಸ್ತಿ ನೀಡಲು ವಯೋಮಿತಿ ನಿರ್ಬಂಧ ಸಡಿಲಿಕೆ
ರಾಜ್ಯೋತ್ಸವ ಪ್ರಶಸ್ತಿ ನೀಡಲು ವಯೋಮಿತಿ ನಿರ್ಬಂಧ ಸಡಿಲಿಕೆ

ಬೆಂಗಳೂರು: ಸಾಧನೆ ಮಾಡಿ ಪ್ರಶಸ್ತಿಗಾಗಿ ಪ್ರಯತ್ನ ಮಾಡದೇ ಇರುವವರಿಗೆ ಪ್ರಶಸ್ತಿ ದೊರೆಯುತ್ತದೆ. ಕೆಲವರು ಸಾಧನೆ ಮಾಡಿ ಪ್ರಶಸ್ತಿಗಾಗಿ ಸಾಕಷ್ಟು ಪ್ರಯತ್ನ‌ ಮಾಡುತ್ತಾರೆ. ಕೆಲವರು ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿ ಸುಮ್ಮನಿರುತ್ತಾರೆ. ಅವರಿಗೆ ನೊಬೆಲ್ ಪ್ರಶಸ್ತಿ ಹುಡುಕಿಕೊಂಡು ಬರುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು. 

ಅವರು ಇಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ 67ನೇ ಕರ್ನಾಟಕ ರಾಜ್ಯೋತ್ಸವ ಸಮಾರಂಭ ಉದ್ಘಾಟಿಸಿ, ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.

ನಾನಾ ರೀತಿಯಲ್ಲಿ ಪ್ರಶಸ್ತಿ ಇದೆ. ನಾವು ಚಿಕ್ಕವಯಸ್ಸಿನವರಾಗಿದ್ದಾಗ ನಾವು ಮಾತು ಉಚ್ಛರಿಸಿದಾಗ ನಮ್ಮ ತಾಯಿ ಪ್ರೀತಿಯಿಂದ ಮುತ್ತಿನ ಪ್ರಶಸ್ತಿ ಕೊಟ್ಟಾಗ ಆ ಪ್ರಶಸ್ತಿಯನ್ನು ಎಂದೂ ಮರೆಯಲು ಆಗುವುದಿಲ್ಲ. ಶಾಲೆಯಲ್ಲಿ ಗುರುಗಳು ಮೆಚ್ಚುಗೆ ವ್ಯಕ್ತಪಡಿಸಿ ಬೆನ್ನು ತಟ್ಟಿದಾಗ, ಯೌವನದಲ್ಲಿ ಮಿತ್ರರು ನಮ್ಮ ಸಾಧನೆ ಹಾಗೂ ನಾಯಕತ್ವ ಮೆಚ್ಚಿ ಹೊಗಳಿದಾಗ ಅದೊಂದು ರೀತಿಯ ರೋಮಾಂಚಕ ಪ್ರಶಸ್ತಿ. ಬದುಕಿನ ಎಲ್ಲ ಸ್ಥರಗಳಲ್ಲಿ ಹಲವು ರೀತಿಯ ಪ್ರಶಸ್ತಿಗಳು ದೊರೆಯುತ್ತವೆ ಎಂದು ಸಿಎಂ ಹೇಳಿದರು.

ಡೈನಮೈಟ್ ತಯಾರಕ‌ ಆಲ್‌ಫ್ರೆಡ್‌ ನೊಬೆಲ್‌ ಸಾಕಷ್ಟು ಹಣ ಮಾಡಿದ್ದರು. ಅಕಸ್ಮಾತ್ ಆಗಿ ಒಂದು ದಿನ ಅವರು ಜೀವಂತವಾಗಿದ್ದಾಗಲೇ ಪತ್ರಿಕೆಯೊಂದರಲ್ಲಿ ಅವರ ಸಾವಿನ‌ಸುದ್ದಿ ಬಂತು. ಅವರ ವಿರುದ್ದ ಕೆಟ್ಟ ಹೆಡ್ಲೈನ್ ಬಂದಿದ್ದು ನೋಡಿ ದುಃಖದಿಂದ ನನ್ನ ಹೆಸರನ್ನು‌ ಜನರು‌ ಈ ರೀತಿ‌ ನೆನಪಿಡುತ್ತಾರಾ ಎಂದು ಬೇಸರ ಪಟ್ಟುಕೊಂಡು ಪರಿವರ್ತನೆಗೊಂಡು ಡೈನಮೆಟ್‌ ತಯಾರಿಸುವುದನ್ನು‌ ನಿಲ್ಲಿಸಿದ. ಅದರಿಂದ ಬಂದ ಅಪಾರ ಹಣ ಮತ್ತು ಆಸ್ತಿಯನ್ನು ಉತ್ತಮ ಸಾಧನೆ ಮಾಡಿದವರಿಗೆ ನೊಬೆಲ್‌ ಪ್ರಶಸ್ತಿ ಕೊಡಲು ಮಿಸಲಿಟ್ಟರು. ಇದು ಉತ್ತಮ ಬದಲಾವಣೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.

ಇಂದು ಇಲ್ಲಿ ಪ್ರಶಸ್ತಿ ಪಡೆದವರು ತಮ್ಮ ಜೀವನದುದ್ದಕ್ಕೂ ಪ್ರಶಸ್ತಿ ಪಡೆಯಲು ಪ್ರಯತ್ನ ಮಾಡಿಲ್ಲ. ತಮ್ಮ ಪಾಡಿಗೆ ಅವರು ಸಾಧನೆ ಮಾಡಿಕೊಂಡು ಬಂದಿದ್ದಾರೆ. ಇವರುಗಳನ್ನು ನಮ್ಮ ಆಯ್ಕೆ ಸಮಿತಿ ಗುರುತಿಸಿದ್ದಾರೆ. ಹೀಗೆ ಕೇಳದೇ ಪ್ರಶಸ್ತಿ ಪಡೆಯುವುದರಿಂದ ಆ ಪ್ರಶಸ್ತಿಗೆ ಮೆರುಗು ತಂದಿದೆ, ಗೌರವ ಬಂದಿದೆ. ಹಣ ಕೊಟ್ಟರೆ ಪ್ರಶಸ್ತಿ ಸಿಗುತ್ತದೆ. ಆದರೆ ಬದುಕಿನಲ್ಲಿ ಸಾಧಕರಾಗಿ ಯಶಸ್ವಿ ಜೀವನವನ್ನು ನಡೆಸುವುದೇ ದೊಡ್ಡ ಪ್ರಶಸ್ತಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಬದುಕು ದೊಡ್ಡ ಪರೀಕ್ಷೆ. ನಾವು ಅಂದುಕೊಂಡದ್ದು ಯಾವುದೂ ಆಗುವುದಿಲ್ಲ. ಬದುಕಿನಲ್ಲಿ ಮುಗ್ಧತೆ ಕಾಪಾಡಿಕೊಳ್ಳುವುದು ಕಷ್ಟ. ನಮ್ಮಲ್ಲಿರುವ ಕುತೂಹಲ ನಮ್ಮ ಮುಗ್ಧತೆಯನ್ನು ಕಡಿಮೆಗೊಳಿಸುತ್ತದೆ. ಜತೆಗೆ ನಮ್ಮ ಆತ್ಮಸಾಕ್ಷಿಗಾಗಿ ಬುದುಕುವುದೂ ಬಹಳ ಕಷ್ಟ. ಇವೆರಡರಲ್ಲೂ ಜಯಶಾಲಿಗಳಾಗುವರು ದೊಡ್ಡ ಸಾಧಕರಾಗುತ್ತಾರೆ. ಕೆಲವು ಕ್ಷೇತ್ರಗಳಲ್ಲಿ ಕೆಲವರು ಅಸಮಾನ್ಯ ಸಾಧನೆ ಮಾಡುತ್ತಾರೆ. ಅದು ಸಮಾಜಕ್ಕೆ ತಿಳಿದು, ಇತರರಿಗೆ ಪ್ರೇರಣೆ ಆಗಬೇಕು. ಅದಕ್ಕಾಗಿ ಸಂಸ್ಥೆಗಳು ಸರ್ಕಾರಗಳು ಪ್ರಶಸ್ತಿಯನ್ನು ಕೊಡುತ್ತದೆ. ಜತೆಗೆ ಪ್ರಶಸ್ತಿ ಪಡೆದ ವ್ಯಕ್ತಿ ಇನ್ನಷ್ಟು ಉತ್ತಮ ಕೆಲಸ ಮಾಡಲು ಪ್ರೇರಣೆಯಾಗುತ್ತದೆ. ಸಮಾಜದಲ್ಲಿ ಸರಿಯಾದವರನ್ನು ಗುರುತಿಸಿ ಪ್ರಶಸ್ತಿ ಕೊಟ್ಟಾಗ ಪ್ರಶಸ್ತಿಗೂ ಗೌರವ ಬರುತ್ತದೆ, ಪ್ರಶಸ್ತಿ ಪಡೆದವರಿಗೂ ಗೌರವ ಹೆಚ್ಚುತ್ತದೆ ಎಂದು ಸಿಎಂ ಬೊಮ್ಮಾಯಿ ಅವರು ಹೇಳಿದರು.

ಪುನೀತ್ ಗೆ ಪ್ರಶಸ್ತಿ ಕೊಟ್ಟದ್ದಕ್ಕೆ ಇಡೀ ಕರ್ನಾಟಕ ಸಂಭ್ರಮಿಸಿದೆ 

ಪುನೀತ್ ರಾಜ್‌ಕುಮಾರ್ ಸಣ್ಣ‌ ವಯಸ್ಸಿನಲ್ಲಿ ದೊಡ್ಡ ಸಾಧನೆ ಮಾಡಿದ್ದಾರೆ‌. ಎಲ್ಲಕ್ಕಿಂತ ಹೆಚ್ಚಾಗಿ ಎಲ್ಲರ ಮನದಾಳದಲ್ಲಿ ಸ್ಥಾನ ಪಡೆದಿದ್ದಾರೆ. ಎಲ್ಲೇ ಹೋದರೂ ಪುನೀತ್ ರಾಜ್ ಕುಮಾರ್ ಫೋಟೋ ಇಟ್ಟು ಪೂಜೆ ಮಾಡಿರುವುದನ್ನು ನಾವು ನೋಡ್ತೀವಿ. ಮಾನವೀಯತೆ ಇರುವ ವ್ಯಕ್ತಿ ಸಣ್ಣ ವಯಸ್ಸಿನಲ್ಲಿ ದೊಡ್ಡ ಸಾಧನೆ ಮಾಡಿದಾಗ ಅದರ ಪ್ರಭಾವ ಜನರ ಮೇಲೆ ಇರುತ್ತದೆ. ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಿದ್ದಕ್ಕೆ ಇಡೀ ಕರ್ನಾಟಕ ಸಂಭ್ರಮಿಸಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ಸಣ್ಣ ವಯಸ್ಸಿನ ಸಾಧಕರಿಗೂ ರಾಜ್ಯೋತ್ಸವ ಪ್ರಶಸ್ತಿ

ವಯಸ್ಸು ಮತ್ತು ಸಾಧನೆಗೆ ಸಂಬಂಧ ಇಲ್ಲ. ಯಾವುದೇ ವಯಸ್ಸಿನಲ್ಲೂ ಸಾಧನೆ ಮಾಡಬಹುದು. ಎಲ್ಲ ದೊಡ್ಡ ಸಾಧಕರೂ ಸಣ್ಣ ವಯಸ್ಸಲ್ಲೇ ಜಗತ್ತು ಬಿಟ್ಟು ಹೋಗಿದ್ದಾರೆ. 60 ವರ್ಷ ಮೀರಿರುವವರಿಗೆ ಮಾತ್ರ ಪ್ರಶಸ್ತಿ ಎನ್ನುವುದು ತಪ್ಪು ನಿರ್ಧಾರ. ಸಣ್ಣ ವಯಸ್ಸಿನ ಸಾಧಕರಿಗೂ ಪ್ರಶಸ್ತಿ ಕೊಟ್ಟರೆ ಅವರು ಮುಂದೆ ಇನ್ನೂ ದೊಡ್ಡ ಸಾಧನೆ ಮಾಡಬಹುದು. ಇದು ಇತರ ಯುವಕರಿಗೂ ಪ್ರೇರಣೆ ಆಗುತ್ತದೆ. ಮುಂದಿನ ವರ್ಷ ಈ ಬಗ್ಗೆ ಬದಲಾವಣೆ ಆಗುತ್ತದೆ. ವಯಸ್ಸಿನ ಗಡಿ ಇಲ್ಲದೇ ನಿಜವಾದ ಸಾಧಕರಿಗೆ ಪ್ರಶಸ್ತಿ ಕೊಡುವ ವ್ಯವಸ್ಥೆ ಆಗುತ್ತದೆ. ಈ ಬಗ್ಗೆ ಕೊರ್ಟ್‌ಗೆ ಅಫಿಡವಿಟ್‌ ನೀಡಿ ನಿಯಮ ಬದಲಾಯಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com