ಪುನೀತ್ ರಾಜ್ ಕುಮಾರ್ ಗೆ ಕರ್ನಾಟಕ ರತ್ನ ಪ್ರಶಸ್ತಿ; ಅಪ್ಪು ದೇವರ ಮಗ-ರಜನಿ, ನಗುವಿನಿಂದಲೇ ರಾಜ್ಯ ಗೆದ್ದ ರಾಜ ಪುನೀತ್- ಜ್ಯೂ.ಎನ್ ಟಿಆರ್
ಸಹಸ್ರಾರು ಅಭಿಮಾನಿಗಳ ಸಮ್ಮುಖದಲ್ಲಿ, ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ, ಗಣ್ಯರ ಸಮ್ಮುಖದಲ್ಲಿ ದಿ.ಪುನೀತ್ ರಾಜ್ ಕುಮಾರ್ ಅವರಿಗೆ ನ.1 ರಂದು ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.
Published: 01st November 2022 05:45 PM | Last Updated: 01st November 2022 05:56 PM | A+A A-

ಪುನೀತ್ ರಾಜ್ ಕುಮಾರ್ ಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ
ಬೆಂಗಳೂರು: ಸಹಸ್ರಾರು ಅಭಿಮಾನಿಗಳ ಸಮ್ಮುಖದಲ್ಲಿ, ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ, ಗಣ್ಯರ ಸಮ್ಮುಖದಲ್ಲಿ ದಿ.ಪುನೀತ್ ರಾಜ್ ಕುಮಾರ್ ಅವರಿಗೆ ನ.1 ರಂದು ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಮಳೆಯನ್ನೂ ಲೆಕ್ಕಿಸದೇ ಸಹಸ್ರಾರು ಮಂದಿ ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಿದ್ದನ್ನು ಕಣ್ತುಂಬಿಕೊಂಡರು. ಕಾರ್ಯರ್ಕಮದಲ್ಲಿ ಡಾ.ಸುಧಾಮೂರ್ತಿ ಪುನೀತ್ ರಾಜ್ ಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರಿಗೆ ಪ್ರಶಸ್ತಿ ನೀಡುವ ಮಾಡುವ ಮೂಲಕ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಿದರು.
ಮುಖ್ಯ ಅಥಿತಿಯಾಗಿ ಆಗಮಿಸಿ ಅಭಿಮಾನಿಗಳನ್ನುದ್ದೇಶಿಸಿ ಮಾತನಾಡಿದ ನಟ ರಜನಿಕಾಂತ್, ಅಪ್ಪು ಸಾಧಾರಣ ವ್ಯಕ್ತಿಯಲ್ಲ, ಆತ ಅಪಾರವಾದದ್ದನ್ನು ಸಾಧಿಸಿದ್ದಾರೆ. ಕಲಿಯುಗಕ್ಕೆ ಪುನೀತ್ ದೇವರ ಮಗು, ನಚಿಕೆತ, ಮಾರ್ಕಾಂಡೇಯರ ಸಾಲಿಗೆ ಸೇರುವವರು ಅವರು. ಎನ್ ಟಿಅರ್, ಎಂಜಿಆರ್, ಶಿವಾಜಿಗಣೇಶನ್, ರಾಜ್ ಕುಮಾರ್ ಅವರು 50 ವರ್ಷದಲ್ಲಿ ಸಾಧಿಸಿದ್ದನ್ನು ಅಪ್ಪು 20 ವರ್ಷಗಳಲ್ಲಿ ಸಾಧಿಸಿದ್ದರು. ಅಪ್ಪು ಯಾವಾಗಲೂ ನಮ್ಮೊಂದಿಗೇ ಇರ್ತಾರೆ. ಕೇವಲ ನಟನೆಯಿಂದಷ್ಟೇ ಜನರನ್ನು ಗೆಲ್ಲಲು ಸಾಧ್ಯವಿಲ್ಲ. ಆದರ್ಶಗಳ ಮೂಲಕ ಗೆಲ್ಲಬಹುದು ಅದು ನಮ್ಮ ಅಪ್ಪು ಮಾಡಿದ್ದಾರೆ ಎಂದು ಬಣ್ಣಿಸಿದ್ದಾರೆ. ಇದೇ ವೇಳೆ 1979 ರಲ್ಲಿ ಶಬರಿ ಮಲೆ ಯಾತ್ರೆ ವೇಳೆ ತಾವು ಪುನೀತ್ ರಾಜ್ ಕುಮಾರ್ ಅವರನ್ನು ಮೊದಲ ಬಾರಿ ನೋಡಿದ್ದನ್ನು ರಜನಿಕಾಂತ್ ಸ್ಮರಿಸಿಕೊಂಡರು,
ಇದನ್ನೂ ಓದಿ: ಪುನೀತ್ ಗೆ ಕರ್ನಾಟಕ ರತ್ನ ಪ್ರದಾನ: ಬೆಂಗಳೂರಿಗೆ ಆಗಮಿಸಿದ ಜೂ.ಎನ್ ಟಿಆರ್
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜ್ಯೂ. ಎನ್ ಟಿಆರ್, ಒಬ್ಬ ವ್ಯಕ್ತಿಗೆ ಉಪನಾಮ ಎಂಬುದು ಪರಂಪರೆಯಿಂದ ಬರುತ್ತದೆ ಆದರೆ ವ್ಯಕ್ತಿತ್ವ ಸ್ವಂತ ಸಂಪಾದನೆಯಾಗಿರುತ್ತದೆ. ಸ್ವಂತ ವ್ಯಕ್ತಿತ್ವದಿಂದ ನಗುವಿನಿಂದಲೇ ಒಂದು ರಾಜ್ಯ ಗೆದ್ದ ರಾಜ ಪುನೀತ್ ರಾಜ್ ಕುಮಾರ್, ಅವರು ಎಲ್ಲಕ್ಕೂ ಮಿಗಿಲಾಗಿ ಶ್ರೇಷ್ಠ ವ್ಯಕ್ತಿತ್ವದವರಾಗಿದ್ದರು. ಪುನೀತ್ ನಗುವಿನ ಒಡೆಯ
ಅವರ ವ್ಯಕ್ತಿತ್ವದಿಂದ ಅಭಿಮಾನಿಗಳನ್ನು ಪಡೆದಿದ್ದರು, ಕರ್ನಾಟಕ ರತ್ನದ ಅರ್ಥವೇ ಪುನೀತ್ ರಾಜ್ ಕುಮಾರ್ ಅವರಾಗಿದ್ದಾರೆ. ಈ ಕಾರ್ಯಕ್ರಮದಲ್ಲಿ ಹೆಮ್ಮೆಯ ಗೆಳೆಯನಾಗಿ ನಿಂತಿದ್ದೇನೆ, ಈ ಅವಕಾಶ ನೀಡಿದ್ದಕ್ಕೆ ಸರ್ಕಾರಕ್ಕೆ, ಡಾ. ರಾಜ್ ಕುಟುಂಬಕ್ಕೆ ಧನ್ಯವಾದ ತಿಳಿಸುತ್ತೇನೆ ಎಂದು ಹೇಳಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ಪುನೀತ್ ಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡುತ್ತಿರುವುದು "ನನ್ನ ಪುಣ್ಯ ಭಾಗ್ಯ, ಸರ್ಕಾರದ ಪುಣ್ಯಭಾಗ್ಯ, ಸೌಭಾಗ್ಯ ಸಿಕ್ಕಿದೆ ಎಂದು ಹೇಳಿದರು.