ಉಡುಪಿ: ಹಾವಿನ ವಿಷ ಚುಚ್ಚಿ ಪತ್ನಿ ಹತ್ಯೆ ಪ್ರಕರಣ; ಸೂಕ್ತ ಸಾಕ್ಷ್ಯ ಒದಗಿಸಲು ವಿಫಲ, ಪತಿ ಸಹಿತ 7 ಆರೋಪಿಗಳ ಖುಲಾಸೆ

ಹೆಬ್ರಿ ತಾಲೂಕಿನ ಬೆಳಂಜೆ ತೆಂಕೋಲದಲ್ಲಿ ಕಳೆದ 12 ವರ್ಷಗಳ ಹಿಂದೆ ಹಾವಿನ ವಿಷವನ್ನು ಚುಚ್ಚಿಸಿ ಪತ್ನಿಯನ್ನು ಹತ್ಯೆ ಮಾಡಿದ ಪ್ರಕರಣದ ಆರೋಪ ಸಾಬೀತು ಪಡಿಸಲು ಪ್ರಾಸಿಕ್ಯೂಷನ್ ವಿಫಲವಾದ ಹಿನ್ನೆಲೆಯಲ್ಲಿ ಸುರೇಶ್ ಪ್ರಭು ಮತ್ತು ಇತರ ಆರೋಪಿಗಳನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಉಡುಪಿ: ಹೆಬ್ರಿ ತಾಲೂಕಿನ ಬೆಳಂಜೆ ತೆಂಕೋಲದಲ್ಲಿ ಕಳೆದ 12 ವರ್ಷಗಳ ಹಿಂದೆ ಹಾವಿನ ವಿಷವನ್ನು ಚುಚ್ಚಿಸಿ ಪತ್ನಿಯನ್ನು ಹತ್ಯೆ ಮಾಡಿದ ಪ್ರಕರಣದ ಆರೋಪ ಸಾಬೀತು ಪಡಿಸಲು ಪ್ರಾಸಿಕ್ಯೂಷನ್ ವಿಫಲವಾದ ಹಿನ್ನೆಲೆಯಲ್ಲಿ ಪ್ರಮುಖ ಆರೋಪಿ ಪತಿ ಸುರೇಶ್ ಪ್ರಭು ಸಹಿತ ಇತರರನ್ನು ಉಡುಪಿ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ದಿನೇಶ್ ಹೆಗ್ಡೆ ಖುಲಾಸೆಗೊಳಿಸಿ ಆದೇಶ ನೀಡಿದ್ದಾರೆ.

ಹೊಸನಗರ ತಾಲೂಕು ಹಿಲಕುಂಜಿಯ ಭಾಗೀರಥಿ ಅವರು ಹಾಸನ ಸರಕಾರಿ ವೈದ್ಯಕೀಯ ಕಾಲೇಜಿನ ಅಸೋಸಿಯೇಟ್ ಪ್ರೊಪೆಸರ್ ಆಗಿದ್ದ ಡಾ.ಸುರೇಶ್ ಪ್ರಭು ಅವರನ್ನು ವಿವಾಹವಾಗಿದ್ದರು, ಅವರು 2010ರ ಜ.6ರಂದು ಹೆಬ್ರಿಯಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದರು. ಪತ್ನಿ ವಿಷದ ಹಾವು ಕಚ್ಚಿ ಸಾವನ್ನಪ್ಪಿದ್ದಾರೆಂದು ಡಾ.ಪ್ರಭು ಹೆಬ್ರಿ ಠಾಣೆಗೆ ದೂರು ನೀಡಿದ್ದರು

ಅದರಂತೆ ತನಿಖೆ ನಡೆಸಿದ ಹೆಗ್ಡೆ ಅವರು ಸುರೇಶ್ ಪ್ರಭು ಹಾಗೂ ಇತರ 6 ಮಂದಿಯ ವಿರುದ್ದ ಪ್ರಕರಣ ದಾಖಲಿಸಿ 57 ಸಾಕ್ಷಿಗಳನ್ನು ಹೊಂದಿರುವ ಚಾರ್ಜ್‌ಶೀಟ್‌ನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಅದರಲ್ಲಿ ಉಲ್ಲೇಖಿಸಿದಂತೆ ಹಾಸನದ ವೈದ್ಯ ಡಾ ಸುರೇಶ್ ಪ್ರಭು ಹಾಗೂ ಮೃತ ಭಾಗೀರಥಿ ಪತಿ-ಪತ್ನಿಯಾಗಿದ್ದು, ದಾಂಪತ್ಯದಲ್ಲಿ ಹೊಂದಾಣಿಕೆ ಇಲ್ಲದೇ ಆಕೆಗೆ ವಿಚ್ಚೇದನ ನೀಡಲು ಬಯಸಿದ್ದ.

ಆದರೆ ಭಾಗೀರಥಿ ಇದಕ್ಕೆ ಒಪ್ಪದಿದ್ದರಿಂದ ಅಸಮಾಧಾನಗೊಂಡ ಆರೋಪಿ, ಭಾಗೀರಥಿಯನ್ನು ಸಾಯಿಸಲು ನಿರ್ಧರಿಸಿದ್ದ. ತನ್ನ ಸ್ನೇಹಿತ ಆರನೇ ಆರೋಪಿ ಮಂಜ ಯಾನೆ ಮಂಜುನಾಥ್ ನೆರವಿನಿಂದ ಭಾಗೀರಥಿಗೆ ನಾಗರಹಾವಿನ ವಿಷವನ್ನು ಇಂಜೆಕ್ಷನ್ ಮೂಲಕ ಚುಚ್ಚಿ ಕೊಲೆ ಮಾಡುವ ಯೋಜನೆ ರೂಪಿಸಿ ಇತರರ ನೆರವಿನಿಂದ ಅದನ್ನು ಕಾರ್ಯರೂಪಕ್ಕೆ ತಂದಿದ್ದ ಎಂದು ಮೃತ ಭಾಗೀರಥಿ ಸಹೋದರ ಎನ್ ವಿ ಕುಮಾರ್ ಆರೋಪಿಸಿದ್ದರು.

ಆದರೆ ಸೂಕ್ತ ಸಾಕ್ಷ್ಯಗಳನ್ನು  ಸಲ್ಲಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾದ ಪರಿಣಾಮ ಸುರೇಶ್ ಪ್ರಭು ಮತ್ತು ಇತರ ಆರೋಪಿಗಳನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com