ಬೆಂಗಳೂರು: ಶಾಸಕ ರೇಣುಕಾಚಾರ್ಯ ಸಹೋದರ ಪುತ್ರ ಚಂದ್ರಶೇಖರ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ತಾಂತ್ರಿಕ ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದ್ದು, ಮರಣೋತ್ತರ ಪರೀಕ್ಷಾ ವರದಿ ಒಂದೆರೆಡು ದಿನಗಳಲ್ಲಿ ನಮ್ಮ ಕೈಸೇರಲಿದೆ, ನಂತರ ತನಿಖೆ ತೀವ್ರಗೊಳಿಸಲಾಗುವುದು ಎಂದು ಎಡಿಜಿಪಿ ಅಲೋಕ್ ಕುಮಾರ್ ಅವರು ಹೇಳಿದ್ದಾರೆ.
ಪ್ರಕರಣ ಸಂಬಂಧ ಹೊನ್ನಾಳಿಗೆ ಭೇಟಿ ನೀಡಿದ್ದ ಅಲೋಕ್ ಕುಮಾರ್ ಅವರು ಸುದ್ದಿಗಾರರೊಂದಿಗೆ ಮಾತನಾಡಿ ಮಾಹಿತಿ ನೀಡಿದರು.
ಭಾನುವಾರ ಮಧ್ಯರಾತ್ರಿ 12.06ಕ್ಕೆ ಚಂದ್ರಶೇಖರ್ ಅವರ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದ್ದು, ಭಾನುವಾರ ರಾತ್ರಿ 11.58ಕ್ಕೆ ಅವರ ಕಾರನ್ನು ಪತ್ತೆ ಹಚ್ಚಲಾಯಿತು. ಕಾರು ಗಂಟೆಗೆ 100 ಕಿ.ಮೀ ವೇಗದಲ್ಲಿ ಚಲಿಸಿರುವುದು ಕಂಡು ಬಂದಿದೆ. ಚಂದ್ರು ಮೊಬೈರ್ ದೂರವಾಣಿ ಕರೆಗಳ ವಿವರ ಕಲೆ ಹಾಕಲಾಗುತ್ತಿದೆ. ತನಿಖೆಯಲ್ಲಿ ದಾವಣಗೆರೆ ಹಾಗೂ ಶಿವಮೊಗ್ಗ ಎಸ್ಪಿಗಳು ಕೈಜೋಡಿಸಿದ್ದಾರೆ. ಚಂದ್ರು ಸಾವು ಸಂಶಯಾಸ್ಪದವಾಗಿದ್ದು, ಎಲ್ಲಾ ಆಯಾಮದಲ್ಲಿಯೂ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದರು.
ಡ್ರೋನ್ ಮೂಲಕ ಕಾಲುವೆ ಬಳಿ ಪರಿಶೀಲಿಸಿದಾಗ ಕಾರಿನ ಮುಂಭಾಗದಲ್ಲಿ ನೀರು ಕಂಡು ಬಂದಿತ್ತು. ಕಾರನ್ನು ಮೇಲಕ್ಕೆತ್ತಿದಾಗ ಅದರಲ್ಲಿ ಚಂದ್ರಶೇಖರ್ ಶವ ಪತ್ತೆಯಾಗಿತ್ತು. ಪ್ರಕರಣ ತನಿಖೆ ಹಂತದಲ್ಲಿದ್ದು, ಈಗಲೇ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ಶವ ಪತ್ತೆಯಾದ ಸ್ಥಳಕ್ಕೆ ಎಫ್ಎಸ್ಎಲ್ ತಂಡ ಭೇಟಿ
ಶವ ಪತ್ತೆಯಾದ ಹೊನ್ನಾಳಿ ಸಮೀಪದ ಅರಬಘಟ್ಟ-ನ್ಯಾಮತಿ ರಸ್ತೆಯ ತುಂಗಾ ಮೇಲ್ದಂಡೆ ಕಾಲುವೆಗೆ ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರು ಭೇಟಿ ನೀಡಿ, ಸಾಕ್ಷ್ಯೆಗಳನ್ನು ಕಲೆ ಹಾಕಿದ್ದಾರೆ.
Advertisement