'ಮಹಿಳೆ ಖಾತೆಗೆ 6.4 ಲಕ್ಷ ರೂ. ಮರು ಜಮಾ ಮಾಡಿ': ಕೆನರಾ ಬ್ಯಾಂಕ್‌ಗೆ ಹೈಕೋರ್ಟ್ ಸೂಚನೆ

73 ವರ್ಷದ ವೃದ್ಧ ಮಹಿಳೆಯೊಬ್ಬರ ನೆರವಿಗೆ ಧಾವಿಸಿದ ರಾಜ್ಯ ಹೈಕೋರ್ಟ್ ರೂ.6.40ಲಕ್ಷ ಹಣವನ್ನು ಮಹಿಳೆಯ ಖಾತೆಗೆ ಮರು ಜಮಾ ಮಾಡುವಂತೆ ಕೆನರಾ ಬ್ಯಾಂಕ್'ಗೆ ಸೂಚನೆ ನೀಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: 73 ವರ್ಷದ ವೃದ್ಧ ಮಹಿಳೆಯೊಬ್ಬರ ನೆರವಿಗೆ ಧಾವಿಸಿದ ರಾಜ್ಯ ಹೈಕೋರ್ಟ್ ರೂ.6.40ಲಕ್ಷ ಹಣವನ್ನು ಮಹಿಳೆಯ ಖಾತೆಗೆ ಮರು ಜಮಾ ಮಾಡುವಂತೆ ಕೆನರಾ ಬ್ಯಾಂಕ್'ಗೆ ಸೂಚನೆ ನೀಡಿದೆ.
    
ಪತಿಯ ಹೆಸರಿನಲ್ಲಿ ಸುಮಾರು 6.4 ಲಕ್ಷ ರೂ.ಗಳನ್ನು ಹೆಚ್ಚುವರಿಯಾಗಿ ಪಿಂಚಣಿ ಸ್ವೀಕರಿಸಿದ್ದ ವಿಮಲಾ ರಾಮನಾಥ ಪವಾರ್​ ಎಂಬುವರಿಗೆ ಬ್ಯಾಂಕ್​​ನಿಂದ ರಿಕವರಿಗೆ ನೋಟಿಸ್​ ಜಾರಿ ಮಾಡಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಮೇಲಿನಂತೆ ಸೂಚನೆ ನೀಡಿದೆ.

ಹೆಚ್ಚುವರಿಯಾಗಿ ಪಡೆದುಕೊಂಡಿರುವ ಮೊತ್ತವನ್ನು ವಸೂಲಿ ಮಾಡಬೇಕು ಎಂದು ಬ್ಯಾಂಕ್​ಗಳ ಸುತ್ತೋಲೆಯಿದೆ. ಅರ್ಜಿದಾರರು 73 ವರ್ಷದವರಾಗಿದ್ದು, ಕುಟುಂಬ ನಿರ್ವಹಣೆ ಮತ್ತು ಆರೋಗ್ಯ ಕಾಪಾಡಿಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಏಕಾಏಕಿ 6.4 ಲಕ್ಷ ರೂ.ಗಳನ್ನು ಕಡಿತ ಮಾಡಿದಲ್ಲಿ ಸಮಸ್ಯೆಗೆ ಒಳಗಾಗಬೇಕಾಗುತ್ತದೆ. ಆದ್ದರಿಂದ ಪ್ರತಿ ತಿಂಗಳು ಕೇವಲ 4 ಸಾವಿರ ರೂ.ಗಳಂತೆ ಕಡಿತ ಮಾಡಿಕೊಳ್ಳಬೇಕು ಎಂದು ಸೂಚನೆ ನೀಡಿದೆ.

ಅರ್ಜಿದಾರರ ಪತಿ ಸರ್ಕಾರದ ಇಲಾಖೆಯೊಂದರಲ್ಲಿ ಸಹಾಯಕ ತಾಂತ್ರಿಕ ಕಾರ್ಯನಿರ್ವಾಹಕ ಎಂಜಿನಿಯರ್​ ಆಗಿ ಕೆಲಸ ಮಾಡಿ 2002ರಲ್ಲಿ ನಿವೃತ್ತರಾಗಿದ್ದರು. ಅವರು ಕಸ್ತೂರಿ ನಗರದ ಕೆನರಾ ಬ್ಯಾಂಕ್​​ನಿಂದ ಮಾಸಿಕ 38,604 ರೂ.ಗಳನ್ನು ಮಾಸಿಕ ಪಿಂಚಣಿ ಪಡೆಯುತ್ತಿದ್ದರು. 2019ರಲ್ಲಿ ಮೃತಪಟ್ಟಿದ್ದರೂ, 2019ರ ಮಾರ್ಚ್ ಮತ್ತು 2021ರ ಪೆಬ್ರವರಿಯವರೆಗೆ ತಿಂಗಳಿಗೆ 38,604 ರೂ.ಗಳ ಬದಲಿಗೆ 96,998 ರೂ.ಗಳನ್ನು ಬ್ಯಾಂಕ್​ ಅಧಿಕಾರಿಗಳು ಅರ್ಜಿದಾರರ ಖಾತೆಗೆ ಜಮೆ ಮಾಡಿದ್ದರು. ಇದರಿಂದ ಒಟ್ಟು 13,40,261 ರೂ.ಗಳು ಜಮೆ ಆಗಿತ್ತು. ಆದರಲ್ಲಿ 6,40,000 ಮೊತ್ತವನ್ನು ರಿಕವರಿ ಮಾಡುವುದಕ್ಕೆ ಕೋರಿ ಅರ್ಜಿದಾರರಿಗೆ ನೀಡಿದ್ದ ನೋಟಿಸ್​ ಪ್ರಶ್ನಿಸಿ ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದರು.

ಬ್ಯಾಂಕ್​ ಸಿಬ್ಬಂದಿಯ ಬೇಜವಾಬ್ದಾರಿಯಿಂದ ಈ ರೀತಿಯಲ್ಲಿ ಹೆಚ್ಚುವರಿ ಹಣ ಸಂದಾಯವಾಗಿದೆ. ಅರ್ಜಿದಾರರ ಖಾತೆಗೆ ಜಮೆಯಾಗಿರುವ ಹಣ ಸಾರ್ವಜನಿಕರ ಸ್ವತ್ತಾಗಿದ್ದು, ತಪ್ಪಿತಸ್ಥ ಬ್ಯಾಂಕ್​ನ ಅಧಿಕಾರಿ ಅಥವಾ ಅರ್ಜಿದಾರರಿಗೆ ಸೇರಿದ್ದಲ್ಲ. ಹೀಗಾಗಿ ಈ ಹಣವನ್ನು ಮಾಸಿಕವಾಗಿ 4 ಸಾವಿರ ರೂ.ಗಳಂತೆ ವಸೂಲಿ ಮಾಡಬೇಕು ಎಂದು ನ್ಯಾಯಪೀಠ ಸೂಚನೆ ನೀಡಿದೆ. ಜೊತೆಗೆ, ಅರ್ಜಿದಾರರ ಖಾತೆಗೆ ಹೆಚ್ಚುವರಿ ಮೊತ್ತವನ್ನು ಪಿಂಚಣಿ ರೂಪದಲ್ಲಿ ವರ್ಗಾವಣೆ ಮಾಡಿರುವ ಸಿಬ್ಬಂದಿಯನ್ನು ಇದಕ್ಕೆ ಜವಾಬ್ದಾರರನ್ನಾಗಿ ಮಾಡಬೇಕು. ಜೊತೆಗೆ, ಕಾನೂನಿನ ಪ್ರಕಾರ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಬ್ಯಾಂಕ್​ನ ಹಿರಿಯ ಅಧಿಕಾರಿಗಳಿಗೆ ನ್ಯಾಯಪೀಠ ಸೂಚನೆ ನೀಡಿದೆ.

ಸಂಪೂರ್ಣ ತಪ್ಪು ನಡೆದಿರುವುದು ಬ್ಯಾಂಕ್​ ಕಡೆಯಿಂದಾದರೂ, ಪಿಂಚಣಿ ಎಂಬುವುದು ವರದಾನವಲ್ಲ. ಅಥವಾ ಪಿಂಚಣಿದಾರರ ಪತ್ನಿಗೆ ಉಚಿತವಾಗಿ ನೀಡುವ ಉಡುಗೊರೆಯೂ ಅಲ್ಲ. ಹೀಗಾಗಿ ಪಿಂಚಣಿ ಮಂಜೂರು ಮಾಡುವ ವಿಚಾರವನ್ನು ಮನಸೋ ಇಚ್ಛೆ ನಡೆದುಕೊಳ್ಳುವುದಕ್ಕೆ ಅವಕಾಶವಿರುವುದಿಲ್ಲ ಎಂದು ನ್ಯಾಯಪೀಠ ಸೂಚನೆ ನೀಡಿ ಅರ್ಜಿಯನ್ನು ಇತ್ಯರ್ಥ ಪಡಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com