ಉಗ್ರರು ಮಂಗಳೂರು, ಕೊಯಮತ್ತೂರಿನಲ್ಲಿ ಓಡಾಡಿರುವ ಶಂಕೆ ಇದ್ದು, ಇದೊಂದು ವ್ಯವಸ್ಥಿತ ಜಾಲವಾಗಿದೆ: ಸಿಎಂ ಬೊಮ್ಮಾಯಿ
ಬಳ್ಳಾರಿ: ಮಂಗಳೂರು ಆಟೋ ರಿಕ್ಷಾ ಸ್ಫೋಟ ಪ್ರಕರಣದ ಪ್ರಾಥಮಿಕ ತನಿಖೆಯಲ್ಲಿ ಇದೊಂದು ಉಗ್ರರ ಕೃತ್ಯ ಎಂದು ತಿಳಿದುಬಂದಿದೆ. ಇದೊಂದು ವ್ಯವಸ್ಥಿತ ಜಾಲವಾಗಿದ್ದು, ಆ ಜಾಲವನ್ನು ಪತ್ತೆ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಭಾನುವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣ ಸಂಬಂಧ ಎಲ್ಲಾ ಆಯಾಮಗಳಲ್ಲಿಯೂ ತನಿಖೆ ನಡೆಯುತ್ತಿದೆ. ಇದೊಂದು ಉಗ್ರರ ಕೃತ್ಯ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ನಕಲಿ ಗುರುತಿನ ಚೀಟಿ, ನಕಲಿ ವಿಳಾಸ ಬಳಸಿ ಈ ಕೃತ್ಯ ನಡೆಸಲಾಗಿದೆ. ನಕಲಿ ವಿಳಾಸ ಹುಬ್ಬಳ್ಳಿದೆಂದು ಗೊತ್ತಾಗಿದೆ. ಎನ್ಐಎ, ಐಬಿ ಸ್ಥಳದಲ್ಲೇ ಬೀಡು ಬಿಟ್ಟಿದೆ, ಅವರ ಜಾಡನ್ನು ಹಿಡಿಯಲು ಎನ್ಐಎ, ತನಿಖೆ ಮುಂದುವರೆಸಿದೆ ಎಂದು ಹೇಳಿದ್ದಾರೆ.
ಉಗ್ರರು ಮಂಗಳೂರು, ಕೊಯಮತ್ತೂರಿನಲ್ಲಿ ಓಡಾಡಿರುವ ಶಂಕೆ ಇದೆ. ಇದೊಂದು ವ್ಯವಸ್ಥಿತ ಜಾಲ, ಆ ಜಾಲವನ್ನು ಪತ್ತೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಸಿಎಂ ಬಸವರಾಜ ಬೊಮ್ಮಾಯಿ ಮಂಗಳೂರಿನಲ್ಲಿರುವಾಗಲೇ ಬಸ್ ನಿಲ್ದಾಣದಲ್ಲಿ ಬಾಂಬ್ ಸ್ಫೋಟಿಸಲು ಉಗ್ರರು ಸಂಚು ರೂಪಿಸಿದ್ದರು ಎನ್ನಲಾಗುತ್ತಿದ್ದು, ಈ ವಿಚಾರ ಇನ್ನಷ್ಟು ಆತಂಕಕ್ಕೆ ಕಾರಣವಾಗಿದೆ. ಸದ್ಯ ಈ ಸ್ಫೋಟವನ್ನು ರಾಜ್ಯ ಗೃಹ ಇಲಾಖೆ ಗಂಭೀರವಾಗಿ ಪರಿಗಣಿಸಿ ತನಿಖೆ ಆರಂಭಿಸಿದೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ