ಮಾಹಿತಿ ಬಹಿರಂಗ ನೆಪದಲ್ಲಿ ಆರ್ ಟಿಐ ಕಾರ್ಯಕರ್ತರಿಂದ ಅಧಿಕಾರಿಗಳ ಸುಲಿಗೆ, ಬೆದರಿಕೆ!

ಆರ್‌ಟಿಐ ಕಾರ್ಯಕರ್ತರು ಎಂದು ಹೇಳಿಕೊಂಡು ಬಂದು ಸುಲಿಗೆ ಮತ್ತು ಬ್ಲ್ಯಾಕ್‌ಮೇಲ್ ನಡೆಯುತ್ತಿರುವುದು ಪ್ರಬಲ ಅಧಿಕಾರಿಶಾಹಿ ವರ್ಗದಲ್ಲಿ ಆತಂಕಕ್ಕೆ ಕಾರಣವಾಗಿದೆ.ಸರ್ಕಾರ ಯಾವುದೇ ದೊಡ್ಡ ಯೋಜನೆಗೆ ಹೆಚ್ಚಿನ ಅನುದಾನ ನೀಡಿದಾಗ, ನಿರ್ಲಜ್ಜ ಕಾರ್ಯಕರ್ತರು ಲೆಕ್ಕವಿಲ್ಲದಷ್ಟು ಆರ್‌ಟಿಐ ಪ್ರಶ್ನೆಗಳನ್ನು ಸಲ್ಲಿಸುತ್ತಾರೆ.
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ

ಬೆಂಗಳೂರು: ಆರ್‌ಟಿಐ ಕಾರ್ಯಕರ್ತರು ಎಂದು ಹೇಳಿಕೊಂಡು ಬಂದು ಸುಲಿಗೆ ಮತ್ತು ಬ್ಲ್ಯಾಕ್‌ಮೇಲ್ ನಡೆಯುತ್ತಿರುವುದು ಪ್ರಬಲ ಅಧಿಕಾರಿಶಾಹಿ ವರ್ಗದಲ್ಲಿ ಆತಂಕಕ್ಕೆ ಕಾರಣವಾಗಿದೆ.ಸರ್ಕಾರ ಯಾವುದೇ ದೊಡ್ಡ ಯೋಜನೆಗೆ ಹೆಚ್ಚಿನ ಅನುದಾನ ನೀಡಿದಾಗ, ನಿರ್ಲಜ್ಜ ಕಾರ್ಯಕರ್ತರು ಲೆಕ್ಕವಿಲ್ಲದಷ್ಟು ಆರ್‌ಟಿಐ ಪ್ರಶ್ನೆಗಳನ್ನು ಸಲ್ಲಿಸುತ್ತಾರೆ.

ಲೋಪದೋಷಗಳನ್ನು ಕಂಡುಹಿಡಿಯಲು ಯೋಜನೆಯನ್ನು ಅಧ್ಯಯನ ಮಾಡುವ ನೆಪದಲ್ಲಿ ಹಣಕ್ಕಾಗಿ ಬೇಡಿಕೆಯಿಡುವ ಮೂಲಕ ಅಧಿಕಾರಿಗಳ ಜೀವನವನ್ನು ಶೋಚನೀಯಗೊಳಿಸುತ್ತಾರೆ, ನಂತರ ಮಾಹಿತಿ ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕುತ್ತಾರೆ ಎಂಬುದು ಆರೋಪವಾಗಿದೆ.

ಆರ್ ಟಿಐ ಕಾರ್ಯಕರ್ತರ ಬೆದರಿಕೆಗೆ ಪಿಡಬ್ಲ್ಯುಡಿ, ಬಿಬಿಎಂಪಿ, ಆರ್ ಡಿಪಿಆರ್, ಬಿಡಿಎ, ಜಲ ಸಂಪನ್ಮೂಲ, ಸಣ್ಣ ನೀರಾವರಿ, ವಸತಿ ನಿಗಮ, ಸಮಾಜ ಕಲ್ಯಾಣ ಇತ್ಯಾದಿ ಇಲಾಖೆಗಳು ಒಳಗಾಗುತ್ತಿವೆ.ಹಿರಿಯ ನಿವೃತ್ತ ಅಧಿಕಾರಿಯೊಬ್ಬರು ಟಿಎನ್‌ಐಇ ಜೊತೆ ಮಾತನಾಡುತ್ತಾ, ಇವರಲ್ಲಿ ಅನೇಕರು ಪತ್ರಕರ್ತರಂತೆ ಪೋಸ್ ನೀಡಿ ಬೆದರಿಕೆ ಹಾಕುತ್ತಾರೆ. ಆರ್‌ಟಿಐ ಮೂಲಕ ವಿವರಗಳನ್ನು ಸಂಗ್ರಹಿಸಿದ ನಂತರ ಅದನ್ನು ವಾಟ್ಸಾಪ್‌ನಲ್ಲಿ ಪೋಸ್ಟ್ ಮಾಡಿ ಹಣ ಕೀಳಲು ಮತ್ತು ಅಧಿಕಾರಿಗಳನ್ನು ಬ್ಲ್ಯಾಕ್‌ಮೇಲ್ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದರು.

ಈ ಕುರಿತು ಇತ್ತೀಚೆಗೆ ವಿಧಾನಪರಿಷತ್‌ನಲ್ಲಿ ಪ್ರಸ್ತಾಪವಾದಾಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಅಗತ್ಯವಿದ್ದಲ್ಲಿ ನೊಂದವರಿಂದ ಪೊಲೀಸ್ ಮೊಕದ್ದಮೆ ದಾಖಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ವೆಂಕಟರಾವ್ ನಾಡಗೌಡ ಅವರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಆರ್‌ಟಿಐ ಕಾರ್ಯಕರ್ತರಿಂದ ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಕಿರುಕುಳ ನೀಡುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಬೊಮ್ಮಾಯಿ ಪ್ರತಿಕ್ರಿಯಿಸಿದ್ದರು.

ಹಲವಾರು ಸಂತ್ರಸ್ತರು ಆರ್‌ಟಿಐ ಕಾರ್ಯಕರ್ತರು ತಮಗೆ ಕರೆ ಮಾಡಿ ದೊಡ್ಡ ಮೊತ್ತದ ಹಣಕ್ಕೆ ಬೇಡಿಕೆಯಿಟ್ಟದ್ದನ್ನು ವಿವರಿಸಿದ್ದಾರೆ. ಆರ್‌ಟಿಐ ಕಾರ್ಯಕರ್ತರೊಬ್ಬರು ಆರ್‌ಟಿಐ ಮೂಲಕ ಕೆಲವು ಮಾಹಿತಿಯನ್ನು ಪಡೆದುಕೊಂಡ ನಂತರ ಮತ್ತು ಅಧಿಕೃತ ನ್ಯೂನತೆಯಿದೆ ಎಂದು ಅರಿತುಕೊಂಡ ನಂತರ, ನಿರ್ದಿಷ್ಟ ಸಮಸ್ಯೆಯನ್ನು ಇತ್ಯರ್ಥ ಮಾಡಬೇಕೆಂದರೆ ಕಾರು ಕೊಡಿಸಬೇಕು ಎಂದು ಬೇಡಿಕೆಯಿಟ್ಟಿದ್ದು ಉದ್ಯಮಿ ಕುಟುಂಬಕ್ಕೆ ತೀವ್ರ ಸಿಟ್ಟು ತರಿಸಿತ್ತು ಎಂದಿದ್ದಾರೆ.

ಆರ್ ಟಿಐ ಕಾರ್ಯಕರ್ತರೆಂದು ಹೇಳುವ ಕೆಲವರು ಕ್ರಿಮಿನಲ್ ಗಳು. ಹಣದ ಮೂಲಕ ವಿವಾದ ಇತ್ಯರ್ಥಪಡಿಸಲು ನೋಡಿದರೆ ಇತರರು ಜಿಗಣೆಗಳಂತೆ ಚಿವುಟುತ್ತಾ ಜೀನವನ್ನು ಇನ್ನಷ್ಟು ಶೋಚನೀಯಗೊಳಿಸುತ್ತಾರೆ ಎಂದು ನಿವೃತ್ತ ಅಧಿಕಾರಿಯೊಬ್ಬರು ಹೇಳುತ್ತಾರೆ. 

ಒಬ್ಬ ವ್ಯಕ್ತಿಯು ನಿರ್ದಿಷ್ಟ ಸಂಖ್ಯೆಯ ಆರ್‌ಟಿಐ ಅರ್ಜಿಗಳನ್ನು ಸಲ್ಲಿಸಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದರೆ, ಕೆಲವರು ನೂರಾರು ಅರ್ಜಿಗಳನ್ನು ಸಲ್ಲಿಸುತ್ತಾರೆ, ಆಗಾಗ್ಗೆ ಬೇನಾಮಿ ಹೆಸರುಗಳಲ್ಲಿ ವಿಳಾಸ ಒಂದೇ ಇರುವ ಅರ್ಜಿಗಳು ಬರುತ್ತವೆ ಎಂದರು. 

ಕಳೆದ ಎರಡು ವರ್ಷಗಳಲ್ಲಿ ಲೋಕಾಯುಕ್ತದಲ್ಲಿ ಸುಮಾರು 300 ಪ್ರಕರಣಗಳು ದಾಖಲಾಗಿವೆ ಎಂದು ಮೂಲಗಳು ತಿಳಿಸಿವೆ. ಪ್ರಕರಣಗಳು 5-6 ವರ್ಷಗಳವರೆಗೆ ಎಳೆಯುತ್ತವೆ ಎಂಬುದು ರಹಸ್ಯವಲ್ಲ. ಆರ್‌ಟಿಐ ಒಂದು ಸಾಧನವಾಗಿ ಕಾರ್ಯಕರ್ತರಿಗೆ ಲಭ್ಯವಾದಾಗಿನಿಂದ ನೂರಾರು ಪ್ರಕರಣಗಳು ದಾಖಲಾಗಿವೆ ಎಂದು ಲೋಕಾಯುಕ್ತ ದಾಖಲೆಗಳು ಬಹಿರಂಗಪಡಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com