ಗಡಿ ವಿವಾದ: ಕರ್ನಾಟಕದೊಂದಿಗೆ ವಿಲೀನಕ್ಕೆ ಮಹಾರಾಷ್ಟ್ರದ 40 ಗ್ರಾಮಗಳ ಒತ್ತಾಸೆ
ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಮತ್ತು ಮಹಾರಾಷ್ಟ್ರದ ನಾಯಕರ ನಡುವಣ ವಾಕ್ಸಮರ ಮುಂದುವರೆದಿರುವಂತೆಯೇ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ ತಾಲೂಕಿನ 40 ಗ್ರಾಮಗಳ ನಿವಾಸಿಗರು ಕರ್ನಾಟಕದೊಂದಿಗೆ ತಮ್ಮ ಪ್ರದೇಶವನ್ನು ವಿಲೀನಕ್ಕೆ ತಮ್ಮ ಇಚ್ಚೆ ವ್ಯಕ್ತಪಡಿಸಿದ್ದಾರೆ.
Published: 29th November 2022 08:22 AM | Last Updated: 29th November 2022 05:25 PM | A+A A-

ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ
ಬೆಳಗಾವಿ: ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಮತ್ತು ಮಹಾರಾಷ್ಟ್ರದ ನಾಯಕರ ನಡುವಣ ವಾಕ್ಸಮರ ಮುಂದುವರೆದಿರುವಂತೆಯೇ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ ತಾಲೂಕಿನ 40 ಗ್ರಾಮಗಳ ನಿವಾಸಿಗರು ಕರ್ನಾಟಕದೊಂದಿಗೆ ತಮ್ಮ ಪ್ರದೇಶವನ್ನು ವಿಲೀನಕ್ಕೆ ತಮ್ಮ ಇಚ್ಚೆ ವ್ಯಕ್ತಪಡಿಸಿದ್ದಾರೆ.
ದಶಕಗಳಿಂದಲೂ ಮಹಾರಾಷ್ಟ್ರ ತಮ್ಮ ಗ್ರಾಮಗಳನ್ನು ನಿರ್ಲಕ್ಷಿಸುತ್ತಿದ್ದು, ರಸ್ತೆ, ನೀರಾವರಿ ಸೌಲಭ್ಯ ಮತ್ತಿತರ ಮೂಲಸೌಕರ್ಯಗಳಿಂದ ವಂಚಿತರನ್ನಾಗಿ ಮಾಡಲಾಗಿದೆ ಎಂದು ಆರೋಪಿಸಿದ್ದು, ಒಂದು ವೇಳೆ ಮಹಾರಾಷ್ಟ್ರ ಸರ್ಕಾರ ನಿರ್ಲಕ್ಷ್ಯವನ್ನು ಮುಂದುವರೆಸಿದ್ದರೆ ಕರ್ನಾಟಕಕ್ಕೆ ಸೇರುವುದಾಗಿ ಹೇಳಿದ್ದಾರೆ.
ಜತ್ ತಾಲೂಕಿನ ನಮ್ಮ ಹಳ್ಳಿಗಳಿಗೆ ಕಳೆದ ದಶಕದಿಂದಲೂ ಮೂಲಭೂತ ಸೌಕರ್ಯಗಳಿಗಾಗಿ ಒತ್ತಾಯಿಸುತ್ತಾ ಬಂದಿದ್ದೇವೆ. ಆದರೆ, ಎಲ್ಲವೂ ವ್ಯರ್ಥವಾಗಿದೆ. ನಮ್ಮ ಬೇಡಿಕೆಗಳನ್ನು ಈಡೇರಿಸಿಲ್ಲ. ಕರ್ನಾಟಕದೊಂದಿಗೆ ನಮ್ಮ ಹಳ್ಳಿಗಳ ವಿಲೀನಕ್ಕೆ ಇದು ಸೂಕ್ತ ಸಂದರ್ಭವಾಗಿದೆ ಎಂದು ಉಮಾದಿ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಸುನಿಲ್ ಪೊತ್ ದಾರ್ ತಿಳಿಸಿದರು. ಸೊಲ್ಲಾಪುರ, ಅಕ್ಕಲಕೋಟೆ ಸೇರಿದಂತೆ ಮತ್ತಿತರ ಪ್ರದೇಶಗಳು ಕರ್ನಾಟಕಕ್ಕೆ ಸೇರಬೇಕು ಎಂದು ಇತ್ತೀಚಿಗೆ ಸಿಎಂ ಬಸವರಾಜ ಬೊಮ್ಮಾಯಿ ನೀಡಿರುವ ಹೇಳಿಕೆಯನ್ನು ಅವರು ಸ್ವಾಗತಿಸಿದರು.
ದಾನಮ್ಮ ದೇವಾಲಯ ಟ್ರಸ್ಟ್ ಅಧ್ಯಕ್ಷರಾಗಿರುವ ಸ್ಥಳೀಯ ಮುಖಂಡ ಶಂಭು ಮಮದಾಪುರ ಮಾತನಾಡಿ, ಹಲವು ವರ್ಷಗಳಿಂದ ರಸ್ತೆಗಳ ಅಭಿವೃದ್ಧಿಗೆ ಬೇಡಿಕೆ ಸಲ್ಲಿಸುತ್ತಾ ಬಂದಿದ್ದರೂ ಮಹಾರಾಷ್ಟ್ರ ಸರ್ಕಾರ ಏನನ್ನು ಮಾಡಿಲ್ಲ, ಕನ್ನಡ ಶಾಲೆಗಳ ನಿರ್ಲಕ್ಷ್ಯದಿಂದ 40 ಗ್ರಾಮಗಳ ಜನರು ಬೇಸತ್ತಿದ್ದಾರೆ. ಕರ್ನಾಟಕ ಸರ್ಕಾರದಿಂದ ಗಡಿ ಪ್ರದೇಶಗಳ ಶಾಲೆಗಳ ಅಭಿವೃದ್ಧಿಗೆ 15 ಕೋಟಿ ರೂ. ಬಿಡುಗಡೆ ಮಾಡಿದೆ. ಅಲ್ಲದೇ, ಇತ್ತೀಚಿನ ವರ್ಷಗಳಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಅನುದಾನ ನೀಡಲಾಗುತ್ತಿದೆ. ಪ್ರತಿ ವರ್ಷ ಸುಮಾರು 10,000 ಜನರು ಭೇಟಿ ನೀಡುವ ಪ್ರಸಿದ್ಧ ದಾನಮ್ಮ ದೇವಾಲಯದ ರಸ್ತೆಗಳು ಗುಂಡಿಗಳಿಂದ ತುಂಬಿವೆ ಎಂದು ಅವರು ತಿಳಿಸಿದರು.
ಕಾರ್ತಿಕ ಅಮವ್ಯಾಸೆ ಸಂದರ್ಭದಲ್ಲಿ ಶೇ. 95 ರಷ್ಟು ಕನ್ನಡಿಗರು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಆದರೆ, ಭಕ್ತರಿಗಾಗಿ ಮಹಾರಾಷ್ಟ್ರ ಸರ್ಕಾರದಿಂದ ನಯಾಪೈಸೆ ಬಿಡುಗಡೆಯಾಗಿಲ್ಲ. ಆದಾಗ್ಯೂ, ಕಳೆದ 8 ವರ್ಷಗಳಲ್ಲಿ ಕರ್ನಾಟಕ ಸರ್ಕಾರದಿಂದ 12 ಕೋಟಿ ರೂ. ಬಿಡುಗಡೆಯಾಗಿದೆ ಎಂದು ಗ್ರಾಮಸ್ಥರು ಹೇಳಿದರು. ಅಥಣಿ ತಾಲೂಕಿನ ಸುತ್ತಮುತ್ತಲಿನ 40 ಗ್ರಾಮಗಳಲ್ಲಿ ಕನ್ನಡಿಗರೇ ಪ್ರಬಲರಾಗಿದ್ದು, ತಮ್ಮನ್ನು ಕರ್ನಾಟಕಕ್ಕೆ ಸೇರಿಸುವಂತೆ ಒತ್ತಾಯಿಸುತ್ತಾ ಬಂದಿದ್ದಾರೆ.