ಮೈಸೂರು ಪೇಂಟ್ಸ್ ಆಧುನೀಕರಣಕ್ಕೆ ಅಗತ್ಯ ನೆರವು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಮೈಸೂರು ಪೇಂಟ್ಸ್ ಆಧುನೀಕರಣ, ವಿಸ್ತರಣೆ ಹಾಗೂ ಸಾಮರ್ಥ್ಯ ಆಭಿವೃದ್ಧಿಗೆ ಸರ್ಕಾರ ಅಗತ್ಯ ನೆರವು ನೀಡಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಸಿಎಂ ಬೊಮ್ಮಾಯಿ
ಸಿಎಂ ಬೊಮ್ಮಾಯಿ

ಮೈಸೂರು: ಮೈಸೂರು ಪೇಂಟ್ಸ್ ಆಧುನೀಕರಣ, ವಿಸ್ತರಣೆ ಹಾಗೂ ಸಾಮರ್ಥ್ಯ ಆಭಿವೃದ್ಧಿಗೆ ಸರ್ಕಾರ ಅಗತ್ಯ ನೆರವು ನೀಡಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಮೈಸೂರು ಪೇಂಟ್ಸ್ ಮತ್ತು ವಾರ್ನಿಶ್ ಸಂಸ್ಥೆಯ ಅಮೃತ ಮಹೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಇದು ನಮ್ಮ ಹೆಮ್ಮೆಯ ಸಂಸ್ಥೆಯಾದ ಇದು ಪೈಪೋಟಿಯನ್ನು ಎದುರಿಸುತ್ತಿದೆ. ಖಾಸಗಿ ವಲಯದಲ್ಲಿ ಬಹಳಷ್ಟು ಪೈಪೋಟಿ ಇದೆ. ಸರ್ಕಾರಿ ವಲಯದಲ್ಲಿ ಸಾಕಷ್ಟು ಬೆಂಬಲವಿರುವುದರಿಂದ ಲಾಭ ಮಾಡುತ್ತಿದ್ದರೂ, ನಿರೀಕ್ಷಿತ ಪ್ರಮಾಣದಲ್ಲಿ ವಿಸ್ತರಣೆಯಾಗಲು ಆಧುನೀಕರಣ, ತಂತ್ರಜ್ಞಾನ, ಮಾರುಕಟ್ಟೆ ತಂತ್ರಗಾರಿಕೆಯ ಅವಶ್ಯಕತೆ ಇದೆ ಎಂದರು.

ಗುಣಮಟ್ಟವನ್ನು ಕಾಪಾಡಿಕೊಂಡಿದ್ದರಿಂದ ಪೈಪೋಟಿ ಎದುರಿಸಲು ಸಾಧ್ಯವಾಗಿದೆ ಮಹಾರಾಜರ ಕಾಲದಲ್ಲಿ ಮನುಷ್ಯನಿಗೆ ಅಗತ್ಯವಿರುವ ಎಲ್ಲವನ್ನೂ ತಯಾರು ಮಾಡುವ ಕೆಲಸವಾಗಿತ್ತು.  ಉಕ್ಕು ಮತ್ತು ಕಬ್ಬಿಣ ಕಾರ್ಖಾನೆ, ಪೇಪರ್ ಸೋಪ್ ಅಂಡ್ ಡಿಟರ್ಜೆಂಟ್ ವರೆಗೂ ಎಲ್ಲವೂ ತಯಾರಾಗುತ್ತಿತ್ತು. ಕೆಲವು ಸಂಸ್ಥೆಗಳು ಜಾಗತೀಕರಣವಾದ ಸಂದರ್ಭದಲ್ಲಿಯೂ ಕೂಡ ನಮ್ಮ ಗುಣಮಟ್ಟವನ್ನು ಕಾಪಾಡಿಕೊಂಡಿದ್ದರಿಂದ ಪೈಪೋಟಿಯನ್ನು ಎದುರಿಸಿ ನಿಲ್ಲಲು ಸಾಧ್ಯವಾಗಿದೆ. ಹೊಸ ತಂತ್ರಜ್ಞಾನ ಬಳಕೆ ಮಾಡುವ ಅನಿವಾರ್ಯತೆ ಹಾಗೂ ಅವಶ್ಯಕತೆ ಇದೆ ಎಂದರು.  

ವಾಣಿವಿಲಾಸ ಸಾಗರದಲ್ಲಿ ಮಹಾರಾಜರ ಪ್ರತಿಮೆ ಸ್ಥಾಪನೆ 88 ವರ್ಷಗಳ ನಂತರ ವಾಣಿವಿಲಾಸ ಸಾಗರ ಅಣೆಕಟ್ಟು ತುಂಬಿದೆ.  ಅಂದು ಪಶ್ಚಿಮ ಘಟ್ಟದಿಂದ ಬರು ನೀರನ್ನು ಹಿಡಿದಿಟ್ಟ ಕಾರಣದಿಂದ ವಾಣಿ ವಿಲಾಸ ಸಾಗರ ತುಂಬಿರಲಿಲ್ಲ. ಭದ್ರಾ ಮೇಲ್ದಂಡೆ ಯೋಜನೆಯಿಂದ ವಾಣಿವಿಲಾಸಸಾಗರ 130 ಅಡಿಗಿಂತ ಹೆಚ್ಚು ತುಂಬಿದೆ. ಆ ಸಂದರ್ಭದಲ್ಲಿಯೂ ನಾವು ಮಹಾರಾಜರನ್ನು ಸ್ಮರಿಸಿದೆವು. ಅವರ ಪ್ರತಿಮೆಗಳನ್ನು ಅಲ್ಲಿ ಸ್ಥಾಪಿಸಲಾಗುತ್ತಿದೆ. ಆ ಸಂದರ್ಭದಲ್ಲಿ ಮಹಾರಾಜರನ್ನು ಆಹ್ವಾನಿಸುವ ತೀರ್ಮಾನ ಮಾಡಲಾಗಿದೆ. ಕೆಆರ್‍ಎಸ್  ರೀತಿಯಲ್ಲಿಯೇ ಇಡೀ ಮಧ್ಯ ಕರ್ನಾಟಕಕ್ಕೆ ನೀರು ಒದಗಿಸುವ ಗ್ರಿಡ್ ಇದಾಗಿದೆ. ಈ ಎರಡೂ ಚಿರಸ್ಥಾಯಿಯಾಗಿ ರೈತರಿಗೆ ವರದಾನವಾಗಿರುವ ಅಣೆಕಟ್ಟುಗಳನ್ನು ಉಳಿಸಿಕೊಳ್ಳಬೇಕಿದೆ ಎಂದರು.

ಕೆ.ಆರ್.ಎಸ್ ಅದ್ಭುತ ಕಟ್ಟಡ

75 ವರ್ಷಗಳ ಆಚರಣೆಯ ಸಂದರ್ಭದಲ್ಲಿ ಕೆ.ಆರ್.ಎಸ್ ಗೇಟುಗಳಿಗೆ ಹೊಸ ಸ್ಲೂಯಿಸ್ ಗೇಟುಗಳನ್ನು ಅಳವಡಿಸುವ ಅವಕಾಶ ನನಗೆ ದೊರೆಯಿತು. 300 ಕ್ಯೂಸೆಕ್ಸ್ ನೀರು ಹರಿದುಹೋಗುತ್ತಿತ್ತು. ಮಹಾರಾಜರು ಕಟ್ಟಿರುವುದನ್ನು ಉಳಿಸಲು  ಸರ್ಕಾರಿ ವಲಯದಲ್ಲಿ ಆಗದೇ ಇರುವುದನ್ನು ಖಾಸಗಿ ವಲಯದ ಪರಿಣಿತರಿಂದ ಗೇಟ್‍ಗಳನ್ನು ಅಳವಡಿಸಲಾಗಿದೆ.

ಈಗ ಒಂದು ಹನಿಯೂ ಸೋರಿಕೆಯಾಗುತ್ತಿಲ್ಲ. ನೂರಕ್ಕೂ ಹೆಚ್ಚು ಗೇಟುಗಳನ್ನು ಅಳವಡಿಸಲಾಗುತ್ತಿದೆ. ಇದು ಕನಿಷ್ಠ 50 ವರ್ಷಗಳ ಕಾಲ ಬಾಳಿಕೆ ಬರಲಿದೆ.  ಕಟ್ಟಡ ಮಾತ್ರ ಒಂದು ಸಾವಿರ ವರ್ಷವಾದರೂ ಉಳಿಯುವ ಅದ್ಭುತ ಕಟ್ಟಡ. ಸಿಮೆಂಟ್ ಬಳಕೆಯಿಲ್ಲದೇ ಗಾರೆ ಬಳಸಿ ಕಟ್ಟಲಾಗಿದೆ.  ಮೈಸೂರು ಪೇಯಿಂಟ್ ಮತ್ತು ವಾರ್ನಿಶ್ ಉಳಿಯುವ ಕೆಲಸ ಮಾಡುತ್ತೇವೆ ಎಂದರು.

ಮೈಸೂರು ರಾಜ ವಂಶಸ್ಥರಾದ ಮನೆತನದ ಪ್ರಮೋದಾ ದೇವಿ, ಸಚಿವ ಗೊವಿಂದ ಕಾರಜೋಳ, ಶಾಸಕ ನಾಗೇಂದ್ರ, ಸಂಸ್ಥೆಯ ಅಧ್ಯಕ್ಷ ರಘು ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com