ಡಾ. ಶ್ರೀನಿವಾಸ್
ಡಾ. ಶ್ರೀನಿವಾಸ್

ಯಾದಗಿರಿಯ ಸರ್ಕಾರಿ ಶಾಲೆಯಲ್ಲಿ ಓದಿದ ಡಾ. ಶ್ರೀನಿವಾಸ್ ಈಗ ಪ್ರತಿಷ್ಠಿತ ದೆಹಲಿಯ ಏಮ್ಸ್ ಮುಖ್ಯಸ್ಥ!

ಅತ್ಯಂತ ಹಿಂದೂಳಿದ ಕಲ್ಯಾಣ ಕರ್ನಾಟಕ ಭಾಗದ ಯಾದಗಿರಿಯಲ್ಲಿ ಅದರಲ್ಲೂ ಸರ್ಕಾರಿ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲೇ ಓದಿದ ಯಾದಗಿರಿ ಮೂಲದ ಕನ್ನಡಿಗ ವೈದ್ಯ, ಮಕ್ಕಳ ತಜ್ಞ ಡಾ. ಶ್ರೀನಿವಾಸ್ ಅವರನ್ನು ಕೇಂದ್ರ ಸರ್ಕಾರ ದೇಶದ...
Published on

ಬೆಂಗಳೂರು: ಅತ್ಯಂತ ಹಿಂದೂಳಿದ ಕಲ್ಯಾಣ ಕರ್ನಾಟಕ ಭಾಗದ ಯಾದಗಿರಿಯಲ್ಲಿ ಅದರಲ್ಲೂ ಸರ್ಕಾರಿ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲೇ ಓದಿದ ಯಾದಗಿರಿ ಮೂಲದ ಕನ್ನಡಿಗ ವೈದ್ಯ, ಮಕ್ಕಳ ತಜ್ಞ ಡಾ. ಎಂ. ಶ್ರೀನಿವಾಸ್ ಅವರನ್ನು ಕೇಂದ್ರ ಸರ್ಕಾರ ದೇಶದ ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆ ದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್(ಏಮ್ಸ್)ನ ನೂತನ ಮುಖ್ಯಸ್ಥರನ್ನಾಗಿ ನೇಮಕ ಮಾಡಿದೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಂಪುಟ ನೇಮಕಾತಿ ಸಮಿತಿ((ಎಸಿಸಿ))ಯು ಪ್ರಸ್ತುತ ಹೈದರಾಬಾದ್‌ನ ಇಎಸ್‌ಐಸಿ ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜಿನ ಡೀನ್ ಆಗಿರುವ ಶ್ರೀನಿವಾಸ್ ಅವರನ್ನು ದೆಹಲಿಯ ಏಮ್ಸ್ ನೂತನ ನಿರ್ದೇಶಕರಾಗಿ ಐದು ವರ್ಷದ ಅವಧಿಗೆ ನೇಮಿಸಿದೆ.

ಈ ಮುಂಚೆ ಡಾ. ಶ್ರೀನಿವಾಸ್ ಅವರು ಏಮ್ಸ್ ನಲ್ಲಿ ಮಕ್ಕಳ ಶಸ್ತ್ರಚಿಕಿತ್ಸಾ ವಿಭಾಗದ ಪ್ರೊಫೆಸರ್ ಆಗಿದ್ದರು. ಆದರೆ 2016ರಲ್ಲಿ ಅವರನ್ನು ಹೈದರಾಬಾದ್‌ನ ಇಎಸ್‌ಐಸಿ ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜಿನ ಡೀನ್ ಆಗಿ ನಿಯೋಜಿಸಲಾಗಿತ್ತು. ಈಗ ಆರು ವರ್ಷಗಳ ನಂತರ ತಮ್ಮ ಹಳೆಯ ಸಂಸ್ಥೆಯ ಮುಖ್ಯಸ್ಥರಾಗಿ ಹೊಸ ಜವಾಬ್ದಾರಿಯೊಂದಿಗೆ ಹಿಂತಿರುಗಲಿದ್ದಾರೆ.

ಏಮ್ಸ್ ಮುಖ್ಯಸ್ಥರಾಗಿದ್ದ ಡಾ.ರಂದೀಪ್ ಗುಲೇರಿಯಾ ಅವರ ಅವಧಿ ಸೆಪ್ಟೆಂಬರ್ 23ರಂದು ಮುಗಿದಿದ್ದು, ಅವರ ನಂತರ ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆಯ 16ನೇ ನಿರ್ದೇಶಕರಾಗಿ ಕನ್ನಡಿಗ ಡಾ. ಶ್ರೀನಿವಾಸ್ ಅವರು ನೇಮಕಗೊಂಡಿದ್ದಾರೆ.

ಮೂಲತಃ ಯಾದಗಿರಿ ನಿವಾಸಿಯಾಗಿರುವ ಡಾ. ಶ್ರೀನಿವಾಸ್ ಅವರು, ನಿವೃತ್ತ ತಹಸೀಲ್ದಾರ ಆಶಪ್ಪ ಅವರ ಹಿರಿಯ ಪುತ್ರರಾಗಿದ್ದು, ಸ್ಟೇಷನ್ ಬಜಾರ್ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಹಾಗೂ ನ್ಯೂ ಕನ್ನಡ ಪ್ರೌಢಶಾಲೆಯಲ್ಲಿ ಪ್ರೌಢ ಶಿಕ್ಷಣ, ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿ ಓದಿದ್ದಾರೆ.

ಡಾ. ಶ್ರೀನಿವಾಸ್, ಬಳ್ಳಾರಿ ವಿಮ್ಸ್‌ನಲ್ಲಿ ಎಂ.ಬಿ.ಬಿ.ಎಸ್. ಹಾಗೂ ದಾವಣಗೆರೆಯಲ್ಲಿ ಎಂ.ಎಸ್. ಮುಗಿಸಿದ ನಂತರ ದೆಹಲಿ ಏಮ್ಸ್‌ನಲ್ಲಿ ಎಂ.ಸಿ.ಎಚ್. ಮಾಡಿದ್ದು, ಈಗ ಅದೇ ಸಂಸ್ಥೆಯ ಮುಖ್ಯಸ್ಥರಾಗಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com