ನಾವೆಲ್ಲ ಆತ್ಮನಿರ್ಭರ ಭಾರತಕ್ಕೆ ಸಂಕಲ್ಪ ಮಾಡೋಣ: ಹುಬ್ಬಳ್ಳಿಯಲ್ಲಿ ದ್ರೌಪದಿ ಮುರ್ಮು
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಈ ಸಂದರ್ಭದಲ್ಲಿ ಆತ್ಮನಿರ್ಭರ ಭಾರತಕ್ಕೆ ನಾವೆಲ್ಲ ಸಂಕಲ್ಪ ಮಾಡೋಣ, ಒಡಿಶಾದ ಸಾಮಾನ್ಯ ಕುಟುಂಬದಿಂದ ಬಂದಿರುವ ಮಹಿಳೆಯನ್ನು ಗೌರವಿಸುವ ಮೂಲಕ ಹುಬ್ಬಳ್ಳಿ ಧಾರವಾಡದ ಜನತೆ ದೇಶದ...
Published: 26th September 2022 07:05 PM | Last Updated: 26th September 2022 07:05 PM | A+A A-

ಹುಬ್ಬಳ್ಳಿಯಲ್ಲಿ ದ್ರೌಪದಿ ಮುರ್ಮು
ಹುಬ್ಬಳ್ಳಿ: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಈ ಸಂದರ್ಭದಲ್ಲಿ ಆತ್ಮನಿರ್ಭರ ಭಾರತಕ್ಕೆ ನಾವೆಲ್ಲ ಸಂಕಲ್ಪ ಮಾಡೋಣ, ಒಡಿಶಾದ ಸಾಮಾನ್ಯ ಕುಟುಂಬದಿಂದ ಬಂದಿರುವ ಮಹಿಳೆಯನ್ನು ಗೌರವಿಸುವ ಮೂಲಕ ಹುಬ್ಬಳ್ಳಿ ಧಾರವಾಡದ ಜನತೆ ದೇಶದ ಸಮಸ್ತ ಮಹಿಳೆಯರನ್ನು ಗೌರವಿಸಿದ್ದಾರೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸೋಮವಾರ ಹೇಳಿದ್ದಾರೆ.
ಇಂದು ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆಯು ಇಲ್ಲಿನ ಕರ್ನಾಟಕ ಜಿಮ್ಖಾನಾ ಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿಗಳು ಪೌರಸನ್ಮಾನ ಸ್ವೀಕರಿಸಿ ಮಾತನಾಡಿದರು.
ಹುಬ್ಬಳ್ಳಿ ಧಾರವಾಡ ಅವಳಿನಗರಗಳು ಕರ್ನಾಟಕ ಮಾತ್ರವಲ್ಲ, ಸಮಗ್ರ ಭಾರತದ ಸಾಂಸ್ಕೃತಿಕ, ಐತಿಹಾಸಿಕ ನಗರಗಳಾಗಿವೆ. ಉತ್ತರ ಕರ್ನಾಟಕದ ಈ ನಗರಗಳಲ್ಲಿ ಕನ್ನಡ, ಮರಾಠಿ ಭಾಷೆಗಳ ಅದ್ಭುತ ಸಂಗಮವಿದೆ. ಆಧ್ಯಾತ್ಮ, ಸಾಂಸ್ಕೃತಿಕ, ಶೈಕ್ಷಣಿಕ ಮಾತ್ರವಲ್ಲ, ಆಧುನಿಕವಾಗಿಯೂ ಈ ನಗರಗಳು ಅಭಿವೃದ್ಧಿ ಪಥದಲ್ಲಿ ಸಾಗುತ್ತಿವೆ. ಉತ್ತರ ಕರ್ನಾಟಕವು ಸಾಂಸ್ಕೃತಿಕ, ಅಧ್ಯಾತ್ಮಿಕತೆ ಹಾಗೂ ಶೈಕ್ಷಣಿಕ ಸಾಧನೆ ಹಾಗೂ ಆಧುನಿಕ ಸೌಲಭ್ಯಗಳಿಂದ ದೇಶದಲ್ಲಿ ಹೆಸರುವಾಸಿಯಾಗಿದೆ. ಪ್ರಾಚೀನ ಸಾಧನೆಯ ಜೊತೆಗೆ ಅಧುನಿಕತೆಯ ಅಭಿವೃದ್ದಿಗೆ ತೆರೆದುಕೊಂಡಿದೆ.
ಇಡೀ ಮಹಿಳಾ ವರ್ಗಕ್ಕೆ ಸಂದ ಸನ್ಮಾನ
ಹುಬ್ಬಳ್ಳಿ-ಧಾರವಾಡ ಜನರ ಪ್ರೀತಿಯು ನನ್ನನ್ನು ಪುಳಕಿತಗೊಳಿಸಿದೆ. ಇದು ಭಾರತದ ರಾಷ್ಟ್ರಪತಿಗೆ ಸಂದ ಸನ್ಮಾನ ಮಾತ್ರವಲ್ಲ; ಇದು ಇಡೀ ದೇಶದ ಮಹಿಳೆಯರಿಗೆ ಸಂದ ಸನ್ಮಾನವಾಗಿದೆ ಎಂದು ರಾಷ್ಟ್ರಪತಿ ಮುರ್ಮು ಅವರು ಅಭಿಮಾನ ವ್ಯಕ್ತಪಡಿಸಿದರು. ಇಡೀ ಭಾರತದ ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಧನೆ ಉಲ್ಲೇಖನೀಯವಾಗಿದೆ. ಪ್ರಾಚೀನತೆ ಮತ್ತು ಆಧುನಿಕತೆಯ ಸಂಗಮವಾಗಿರುವ ಹುಬ್ಬಳ್ಳಿ-ಧಾರವಾಡ ಶಿಕ್ಷಣ ಸಂಸ್ಥೆಗಳ ಮೂಲಕ ವಿದ್ಯಾದಾನ ಮಾಡುವ ಮೂಲಕ ವಿದ್ಯಾಕಾಶಿಯಾಗಿ ಹೊರಹೊಮ್ಮಿದೆ.
ಸಾಹಿತ್ಯ ಕ್ಷೇತ್ರದಲ್ಲಿ ದ.ರಾ.ಬೇಂದ್ರೆ, ವಿ.ಕೃ.ಗೋಕಾಕ ಅವರ ಕೊಡುಗೆಯನ್ನು ಸ್ಮರಿಸಿದ ಅವರು, ಸಂಗೀತ ಕ್ಷೇತ್ರದಲ್ಲಿ ಭೀಮಸೇನ್ ಜೋಶಿ, ಪಂಡಿತ ಬಸವರಾಜ ರಾಜಗುರು ಮತ್ತಿತರರ ಸಾಧನೆಯನ್ನು ಉಲ್ಲೇಖಿಸಿದರು. ಸಂತ ಬಸವೇಶ್ವರ, ಸಿದ್ಧಾರೂಢ ಮಹಾರಾಜರ ಆಧ್ಯಾತ್ಮಿಕ ಮಾರ್ಗದಿಂದ ಈ ಕ್ಷೇತ್ರವು ಧನ್ಯವಾಗಿದೆ ಎಂದರು.
ಇದನ್ನು ಓದಿ: ಮೈಸೂರಲ್ಲೇ ತಯಾರಾದ ಸಿಲ್ಕ್ ಸೀರೆ ಉಟ್ಟು, ದಸರಾಗೆ ವಿಶೇಷ ಮೆರುಗು ತಂದ ರಾಷ್ಟ್ರಪತಿ ದ್ರೌಪದಿ ಮುರ್ಮು
ಕಿತ್ತೂರು ಚೆನ್ನಮ್ಮ, ನರಗುಂದ ಬಾಬಾಸಾಹೇಬ್ ಸ್ವಾತಂತ್ರ್ಯ ಹೋರಾಟ, ತ್ಯಾಗ ಬಲಿದಾನವನ್ನು ಸ್ಮರಿಸಿದ ಗೌರವಾನ್ವಿತ ರಾಷ್ಟ್ರಪತಿಯವರು, ಈ ಭಾಗದಲ್ಲಿ ಶಿಕ್ಷಣ ಹಾಗೂ ಲೋಕಕಲ್ಯಾಣದ ಕಾರ್ಯ ಹೀಗೆ ಮುಂದುವರಿಯಲಿ ಎಂದು ಆಶಯ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ ಅವರು ಕೂಡ ಇಲ್ಲಿಯೇ ಹುಬ್ಬಳ್ಳಿ-ಧಾರವಾಡದಲ್ಲಿ ಆಡಿ ಬೆಳೆದವರು ಅವರ ನೇತೃತ್ವದಲ್ಲಿ ರಾಜ್ಯ ಅಭಿವೃದ್ಧಿಯಡೆಗೆ ಸಾಗಲಿ ಎಂದು ಹೇಳಿದರು.
ಸರಳ ನಡೆ, ನುಡಿಗೆ ಹೆಸರಾದ ರಾಷ್ಟ್ರಪತಿ: ಪ್ರಲ್ಹಾದ್ ಜೋಶಿ
ಕೇಂದ್ರ ಸಂಸದೀಯ ವ್ಯವಹಾರಗಳು, ಗಣಿ ಮತ್ತು ಕಲ್ಲಿದ್ದಲು ಸಚಿವರಾದ ಪ್ರಲ್ಹಾದ ಜೋಷಿ ಮಾತನಾಡಿ, ಬಹಳ ವರ್ಷಗಳ ನಂತರ ಹುಬ್ಬಳ್ಳಿ ಧಾರವಾಡ ಅವಳಿ ನಗರಕ್ಕೆ ದೇಶದ ರಾಷ್ಟ್ರಪತಿಯವರು ಆಗಮಿಸಿರುವುದು ಸಂತಸ ತಂದಿದೆ. ಧಾರವಾಡ ಜಿಲ್ಲೆಯ ಇತಿಹಾಸ ಐದನೇ ಶತಮಾನದಿಂದ ಪ್ರಾರಂಭವಾಗುತ್ತದೆ, ಚಾಲುಕ್ಯರು, ರಾಷ್ಟ್ರಕೂಟರು, ವಿಜಯನಗರ ಅರಸರ ಆಳ್ವಿಕೆಗೆ ಈ ಪ್ರದೇಶ ಒಳಪಟ್ಟಿತ್ತು, ಸ್ವಾತಂತ್ರ್ಯ ಚಳುವಳಿಗೂ ಈ ಜಿಲ್ಲೆ ಗಮನಾರ್ಹ ಕೊಡುಗೆ ನೀಡಿದೆ ಎಂದರು.
ಸಂಗೀತ, ಸಾಹಿತ್ಯಕ್ಕೆ ಈ ಭಾಗದ ಕೊಡುಗೆ ಮಹತ್ವದ್ದು, ಭಾರತರತ್ನ ಪಂಡಿತ ಭೀಮಸೇನ ಜೋಷಿ, ಮಲ್ಲಿಕಾರ್ಜುನ ಮನಸೂರ ಮತ್ತಿತರ ಮೇಧಾವಿ ಸಂಗೀತಗಾರರು ಇಲ್ಲಿಂದ ಹೊರಹೊಮ್ಮಿದ್ದಾರೆ. ಕನ್ನಡಕ್ಕೆ ಬಂದಿರುವ ಎಂಟು ಜ್ಞಾನಪೀಠಗ ಪ್ರಶಸ್ತಿಗಳಲ್ಲಿ ಜಿಲ್ಲೆ ಬಹುಪಾಲು ಹೊಂದಿದೆ. ಸಾಮಾನ್ಯ ಕುಟುಂಬದ ಹಿನ್ನೆಲೆಯಿಂದ ಬಂದಿರುವ ದ್ರೌಪದಿ ಮುರ್ಮು ಅವರು, ಗ್ರಾಮ ಪಂಚಾಯತಿ ಸದಸ್ಯರಾಗಿ, ಉತ್ತಮ ಶಾಸಕರಾಗಿ, ಸಚಿವರಾಗಿ, ರಾಜ್ಯಪಾಲರಾಗಿ ಇದೀಗ ರಾಷ್ಟ್ರಪತಿಯಾಗಿ ಉನ್ನತ ಹುದ್ದೆಗೆ ಏರಿದ್ದರೂ ಕೂಡ ಸರಳ ನಡೆ, ನುಡಿಗೆ ಹೆಸರಾಗಿದ್ದಾರೆ. ಶೈಕ್ಷಣಿಕ ಕೇಂದ್ರವಾಗಿರುವ ಧಾರವಾಡ ಜಿಲ್ಲೆಗೆ ಐಐಐಟಿ ಉದ್ಘಾಟಿಸಲು ಆಗಮಿಸಿರುವುದು ಹೆಮ್ಮೆಯ ಸಂಗತಿ ಎಂದರು.
ಪೌರಸನ್ಮಾನ
ದೇಶದ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಅವರಿಗೆ ಶ್ರೀಸಿದ್ಧಾರೂಢರ ಬೆಳ್ಳಿ ಪ್ರತಿಮೆ, ಬಿನ್ನವತ್ತಳೆ, ಯಾಲಕ್ಕಿ ಹಾರ, ಶ್ರೀಸಿದ್ಧಾರೂಢರ ಮಹಾತ್ಮೆ ಕುರಿತ ಗ್ರಂಥಗಳು, ಧಾರವಾಡ ಪೇಡೆಯನ್ನು ಮಹಾನಗರಪಾಲಿಕೆ ನೀಡಿ ಗೌರವಿಸಿತು.
ರಾಜ್ಯಪಾಲರಾದ ಥಾವರಚಂದ್ ಗೆಹ್ಲೋಟ್,ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗಣಿ, ಭೂವಿಜ್ಞಾನ ,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಹಾಲಪ್ಪ ಆಚಾರ್, ಕೈಮಗ್ಗ, ಜವಳಿ, ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ಸಚಿವರಾದ ಶಂಕರ ಪಾಟೀಲ ಮುನೇನಕೊಪ್ಪ, ಮಾಜಿ ಮುಖ್ಯಮಂತ್ರಿ, ಶಾಸಕ ಜಗದೀಶ ಶೆಟ್ಟರ್, ಶಾಸಕರಾದ ಪ್ರಸಾದ ಅಬ್ಬಯ್ಯ, ಅರವಿಂದ ಬೆಲ್ಲದ, ಅಮೃತ ದೇಸಾಯಿ ಮತ್ತಿತರರು ವೇದಿಕೆಯಲ್ಲಿದ್ದರು.