ಗಂಟುಬೇನೆಯಿಂದ ಮೃತಪಟ್ಟ ಎತ್ತುಗಳಿಗೆ ತಲಾ 30 ಸಾವಿರ ರೂ. ಪರಿಹಾರ: ಸಿಎಂ ಬೊಮ್ಮಾಯಿ
ಗಂಟು ಬೇನೆಯಿಂದ ಮೃತಪಟ್ಟ ಎತ್ತುಗಳಿಗೆ ತಲಾ 30 ಸಾವಿರ ರೂ. ಹಾಗೂ ಹಸುವಿಗೆ ತಲಾ 20 ಸಾವಿರ ರೂ. ಪರಿಹಾರ ನೀಡಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಂದು ತಿಳಿಸಿದರು.
Published: 30th September 2022 12:10 AM | Last Updated: 30th September 2022 02:12 PM | A+A A-

ಸಂಗ್ರಹ ಚಿತ್ರ
ಹಾವೇರಿ: ಗಂಟು ಬೇನೆಯಿಂದ ಮೃತಪಟ್ಟ ಎತ್ತುಗಳಿಗೆ ತಲಾ 30 ಸಾವಿರ ರೂ. ಹಾಗೂ ಹಸುವಿಗೆ ತಲಾ 20 ಸಾವಿರ ರೂ. ಪರಿಹಾರ ನೀಡಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಂದು ತಿಳಿಸಿದರು.
ಅವರು ಇಂದು ಕೆ.ಎಂ.ಎಫ್ ಹಾಗೂ ಹಾವೇರಿ ಜಿಲ್ಲಾ ಸಹಕಾರ ಹಾಲು ಒಕ್ಕೂಟದ ವತಿಯಿಂದ ಆಯೋಜಿಸಿರುವ ಅರಬಗೊಂಡ ಗ್ರಾಮದಲ್ಲಿ ಹಾವೇರಿ ಜಿಲ್ಲಾ ಸಹಕಾರ ಹಾಲು ಒಕ್ಕೂಟದ 'ಮೆಗಾ ಡೈರಿ' ನಿರ್ಮಾಣಕ್ಕೆ ಭೂಮಿ ಪೂಜಾ ಕಾರ್ಯವನ್ನು ನೆರವೇರಿಸಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.
ಕ್ಷೀರ ಸಮೃದ್ಧಿ ಬ್ಯಾಂಕ್ ಸ್ಥಾಪನೆ:
ಹಾಲು ಉತ್ಪಾದನೆ ಹೆಚ್ಚಾಗಲು ಹಣ ಹೂಡಿಕೆ ಹೆಚ್ಚಾಗಬೇಕು. ಈ ನಿಟ್ಟಿನಲ್ಲಿ ದೇಶದಲ್ಲಿಯೇ ಪ್ರಥಮ ಬಾರಿಗೆ ಕರ್ನಾಟಕದಲ್ಲಿ ಹಾಲು ಉತ್ಪಾದಕರಿಂದ ಹಾಲು ಉತ್ಪಾದಕರಿಗೋಸ್ಕರ ಕ್ಷೀರ ಸಮೃದ್ಧಿ ಬ್ಯಾಂಕ್ ನ್ನು ಶೀಘ್ರದಲ್ಲಿ ಪ್ರಾರಂಭಿಸಲಾಗುವುದು ಎಂದರು
ರೈತರ ಸಂಕಷ್ಟಕ್ಕೆ ಸ್ಪಂದನೆ:
ರೈತರ ಮಕ್ಕಳ ಶಿಕ್ಷಣಕ್ಕೆ ಪೂರಕವಾಗುವಂತೆ ರೈತ ವಿದ್ಯಾನಿಧಿ ಯೋಜನೆಯನ್ನು ಜಾರಿಗೆ ತರಲಾಗಿದೆ.14 ಲಕ್ಷ ಮಕ್ಕಳು ಈ ಯೋಜನೆಯ ಲಾಭ ಪಡೆದಿದ್ದು, ಹಾವೇರಿ ಜಿಲ್ಲೆಯೊಂದರಲ್ಲೇ 28,000 ಮಕ್ಕಳು ವಿದ್ಯಾನಿಧಿ ಪಡೆದಿದ್ದಾರೆ.
ಪ್ರವಾಹದಿಂದಾಗುವ ಹಾನಿಗೆ ಕೇಂದ್ರ ಸರ್ಕಾರದ ಪರಿಹಾರದ ಜೊತೆಗೆ ರಾಜ್ಯ ಸರ್ಕಾರ ಪರಿಹಾರವನ್ನು ಸೇರಿಸಿ ದುಪ್ಪಟ್ಟು ಪರಿಹಾರ ನೀಡಲಾಗುತ್ತಿದೆ. ಒಣಬೇಸಾಯಕ್ಕೆ 13,600 ರೂ., ನೀರಾವರಿ 26000, ತೋಟಗಾರಿಕೆ ಬೆಳೆಗೆ 28,000 ರೂ. ಪರಿಹಾರ ನೀಡುವ ಮೂಲಕ ರೈತರ ಸಂಕಷ್ಟಕ್ಕೆ ಸ್ಪಂದಿಸಲಾಗಿದೆ. ಲಕ್ಷಾಂತರ ರೈತರಿಗೆ ರೈತಶಕ್ತಿ ಯೋಜನೆಯಡಿ 600 ಕೋಟಿ ರೂ.ಗಳಷ್ಟು ಡೀಸೆಲ್ ಸಬ್ಸಿಡಿ ನೀಡಲಾಗಿದೆ. ರೈತರಿಗೆ ಆರೋಗ್ಯ ರಕ್ಷಣೆ ನೀಡಲು 300 ಕೋಟಿ ರೂ. ವೆಚ್ಚದಲ್ಲಿ ಯಶಸ್ವಿನಿ ಯೋಜನೆ , 28 ಲಕ್ಷ ರೈತರಿಗೆ ಸಹಕಾರಿ ರಂಗದಲ್ಲಿ ಸಾಲ ನೀಡುವ ಯೋಜನೆ ಜಾರಿ ಮಾಡಲಾಗಿದೆ ಎಂದು ತಿಳಿಸಿದರು.