ಪುಲಕೇಶಿನಗರದಿಂದ ಎಐಎಡಿಎಂಕೆ ಅಭ್ಯರ್ಥಿ ಕಣಕ್ಕೆ: ಡಿ.ಅನ್ಬರಸನ್‌ ಇಂದು ನಾಮಪತ್ರ ಸಲ್ಲಿಕೆ

ಮೇ 10 ರಂದು ನಡೆಯುವ ವಿಧಾನಸಭಾ ಚುನಾವಣೆಗೆ ತಮಿಳುನಾಡು ಬಿಜೆಪಿ ಮೈತ್ರಿಕೂಟದ ಪಾಲುದಾರ ಎಐಎಡಿಎಂಕೆ ಬೆಂಗಳೂರಿನ ಪುಲಕೇಶಿನಗರ ವಿಧಾನಸಭಾ ಕ್ಷೇತ್ರದಿಂದ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತಿದೆ.
ಎಐಎಡಿಎಂಕೆ ನಾಯಕ ಪಳನಿಸ್ವಾಮಿ
ಎಐಎಡಿಎಂಕೆ ನಾಯಕ ಪಳನಿಸ್ವಾಮಿ

ಬೆಂಗಳೂರು:  ಮೇ 10 ರಂದು ನಡೆಯುವ ವಿಧಾನಸಭಾ ಚುನಾವಣೆಗೆ ತಮಿಳುನಾಡು ಬಿಜೆಪಿ ಮೈತ್ರಿಕೂಟದ ಪಾಲುದಾರ ಎಐಎಡಿಎಂಕೆ ಬೆಂಗಳೂರಿನ ಪುಲಕೇಶಿನಗರ ವಿಧಾನಸಭಾ ಕ್ಷೇತ್ರದಿಂದ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತಿದೆ.

ಡಿ ಅನ್ಬರಸನ್ ಪುಲಕೇಶಿನಗರದಿಂದ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂದು ಎಐಎಡಿಎಂಕೆ  ಬುಧವಾರ ಪ್ರಕಟಿಸಿದೆ. ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಗುರುವಾರ ಅವರು ನಾಮಪತ್ರ ಸಲ್ಲಿಸಲಿದ್ದಾರೆ.

ಪುಲಿಕೇಶಿನಗರದಲ್ಲಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಎಐಎಡಿಎಂಕೆ ನಿರ್ಧರಿಸಿದ್ದು , ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಮತ್ತು ಸ್ವತಂತ್ರರ ವಿರುದ್ಧ ತಮ್ಮ ಅಭ್ಯರ್ಥಿ  ಸ್ಪರ್ಧಿಸಲಿದ್ದಾರೆ ಎಂದಿದೆ.

ತಮಿಳುನಾಡು ರಾಜ್ಯ ಬಿಜೆಪಿ ಮುಖ್ಯಸ್ಥ ಕೆ ಅಣ್ಣಾಮಲೈ ಅವರು ರಾಜ್ಯ ಚುನಾವಣೆಯ ಬಿಜೆಪಿಯ ಸಹ ಉಸ್ತುವಾರಿ ಕೂಡ ಆಗಿದ್ದಾರೆ. ಎಐಎಡಿಎಂಕೆ ಯಾವುದೇ ಸ್ಥಾನವನ್ನು ಕೇಳಿಲ್ಲ ಅಥವಾ ಬಿಜೆಪಿಯಲ್ಲಿ ಚರ್ಚಿಸಿಲ್ಲ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

‘ಬಿಜೆಪಿ-ಎಐಎಡಿಎಂಕೆ ಮೈತ್ರಿ ಇರುವುದು ತಮಿಳುನಾಡಿನಲ್ಲಿ ಮಾತ್ರ, ಕರ್ನಾಟಕದಲ್ಲಿ ಅಂತಹ ಮೈತ್ರಿ ಇಲ್ಲ’ ಎಂದು ಮೂಲಗಳು ತಿಳಿಸಿವೆ. ಪುಲಕೇಶಿನಗರ ಕ್ಷೇತ್ರದಲ್ಲಿ ಬಿಜೆಪಿ ತನ್ನ ಅಭ್ಯರ್ಥಿಯಾಗಿ ಮುರಳಿ ಅವರನ್ನು ಕಣಕ್ಕಿಳಿಸಿದೆ.

ಏಪ್ರಿಲ್ 11 ರಂದು ಬಿಡುಗಡೆಯಾದ ಪಕ್ಷದ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಅವರ ಹೆಸರನ್ನು ಘೋಷಿಸಲಾಗಿದೆ.  ಪುಲಕೇಶಿ ನಗರ ವಿಧಾನಸಭೆ  ಕ್ಷೇತ್ರದಲ್ಲಿ ಸಾಕಷ್ಟು ತಮಿಳು ಮಾತನಾಡುವ ಜನರಿದ್ದಾರೆ, ಹೀಗಾಗಿ ಅವರು ಗೆಲ್ಲಲಿದ್ದಾರೆ ಎಂದು ಎಐಎಡಿಎಂಕೆ ಕರ್ನಾಟಕ ರಾಜ್ಯ ಕಾರ್ಯದರ್ಶಿ ಎಸ್‌ಡಿ ಕುಮಾರ್ ತಿಳಿಸಿದ್ದಾರೆ.

ಅನ್ಬರಸನ್ ಅವರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾವಣೆಯಲ್ಲಿ ಸ್ಪರ್ಧಿಸಿದ್ದರು ಮತ್ತು ತಮ್ಮ ವಾರ್ಡ್‌ನಲ್ಲಿ 2400 ಕ್ಕೂ ಹೆಚ್ಚು ಮತಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದರು. 2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಅಖಂಡ ಶ್ರೀನಿವಾಸ್ ಮೂರ್ತಿ ಭಾರಿ ಅಂತರದಿಂದ ಗೆಲುವು ಸಾಧಿಸಿದ್ದರು. ಇದೀಗ ಕಾಂಗ್ರೆಸ್ ಪಕ್ಷವು ಎ.ಸಿ.ಶ್ರೀನಿವಾಸ ಅವರನ್ನು ಕ್ಷೇತ್ರದಿಂದ ತನ್ನ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದರಿಂದ ಅದೇ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com