ಬೆಳಗಾವಿ: ಚಿಕ್ಕೋಡಿ ತಾಲ್ಲೂಕಿನ ಹಿರೇಕೋಡಿಯ ಜೈನ ಮುನಿ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಸಿಐಡಿ ಡಿಜಿಪಿ ಎಂ.ಎ.ಸಲೀಮ್ ಅವರು, ಹಿರೇಕೋಡಿಯ ನಂದಿಪರ್ವತ ಆಶ್ರಮ, ರಾಯಬಾಗ ತಾಲ್ಲೂಕಿನ ಖಟಕಬಾವಿ ಮತ್ತು ಮಾವಿನಹೊಂಡಕ್ಕೆ ಶನಿವಾರ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಕಾಮಕುಮಾರ ನಂದಿ ಮಹಾರಾಜರು ತಂಗಿದ್ದ ಆಶ್ರಮದ ಕೊಠಡಿಗೂ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಸ್ಥಳೀಯರು ಹಾಗೂ ತನಿಖಾಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.
ಜುಲೈ 5 ರಂದು ಜೈನ ಮುನಿಗಳನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಹತ್ಯೆ ಬಳಿಕ ದೇಹವನ್ನು ತುಂಡು ತುಂಡಾಗಿ ಕತ್ತರಿಸಲಾಗಿದ್ದು, ಈ ಭಾಗಗಳು ಬೋರ್ವೆಲ್ನಲ್ಲಿ ಪತ್ತೆಯಾಗಿತ್ತು.
ಈ ಬಗ್ಗೆ ಕ್ಷಿಪ್ರ ತನಿಖೆ ನಡೆಸಿದ ಬೆಳಗಾವಿ ಜಿಲ್ಲಾ ಪೊಲೀಸರು, ಪ್ರಕರಣ ದಾಖಲಾದ ಕೆಲವೇ ಗಂಟೆಗಳಲ್ಲಿ ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು.
ರಾಜ್ಯಾದ್ಯಂತ ಹಲವು ಸಂಘಟನೆಗಳು ಮತ್ತು ರಾಜಕೀಯ ಮುಖಂಡರು ಪ್ರಕರಣದ ಕುರಿತು ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸಿದ್ದರಿಂದ, ಈ ಪ್ರಕರಣದ ಹೆಚ್ಚಿನ ತನಿಖೆಗಾಗಿ ಸರ್ಕಾರವು ಸಿಐಡಿ ತನಿಖೆಗೆ ಹಸ್ತಾಂತರಿಸಿತ್ತು.
ಕಳೆದ ಕೆಲವು ವಾರಗಳಿಂದ ತನಿಖೆಯ ಭಾಗವಾಗಿ ಸಿಐಡಿ ತಂಡಗಳು ಹಿರೇಕುಡಿಯ ಆಶ್ರಮ ಮತ್ತು ಅಪರಾಧ ನಡೆದ ಸ್ಥಳಗಳಿಗೆ ಪದೇ ಪದೇ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿವೆ. ಇದರಂತೆ ಶನಿವಾರ (ಆ.5) ಸಿಐಡಿ ಡಿಜಿಪಿ ಡಾ.ಸಲೀಂ ಮತ್ತು ಅವರ ತಂಡ ಭೇಟಿ ನೀಡಿ, ಪರಿಶೀಲನೆ ನಡೆಸಿತು.
ಈ ಸಂದರ್ಭದಲ್ಲಿ ಸಿಐಡಿ ಐಜಿ ಮಧುಕರ ಪವಾರ್, ಸಿಐಡಿ ಎಸ್ಪಿ ವೆಂಕಟೇಶ್ ಕುಮಾರ್, ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ್ ಪಾಟೀಲ್, ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.
Advertisement