ಈಶ್ವರಪ್ಪಗೆ ಮತ್ತೆ ಸಂಕಷ್ಟ?: ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ ತನಿಖೆ ಸಿಐಡಿಗೆ ವಹಿಸಲು ಕುಟುಂಬಸ್ಥರ ಮನವಿ

ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಅವರನ್ನು ಮೃತ ಸಂತೋಷ್ ಪಾಟೀಲ್ ಕುಟುಂಬಸ್ಥರು ಶುಕ್ರವಾರ ಭೇಟಿಯಾಗಿದ್ದಾರೆ. ಈ ವೇಳೆ ಸಿಐಡಿ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.
ಸಿಎಂ ಭೇಟಿಯಾದ ಸಂತೋಷ್ ಪಾಟೀಲ್ ಕುಟುಂಬ
ಸಿಎಂ ಭೇಟಿಯಾದ ಸಂತೋಷ್ ಪಾಟೀಲ್ ಕುಟುಂಬ

ಬೆಳಗಾವಿ: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಅವರನ್ನು ಮೃತ ಸಂತೋಷ್ ಪಾಟೀಲ್ ಕುಟುಂಬಸ್ಥರು ಶುಕ್ರವಾರ ಭೇಟಿಯಾಗಿದ್ದಾರೆ. ಈ ವೇಳೆ ಸಿಐಡಿ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.

ತಾಲೂಕಿನ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾದ ಸಂತೋಷ್ ಪಾಟೀಲ್ ಪತ್ನಿ ಜಯಶ್ರೀ, ಪುತ್ರ, ತಾಯಿ ಪಾರ್ವತಿ, ಸಹೋದರ ಪ್ರಶಾಂತ್ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ ಬಿ ರಿಪೋರ್ಟ್ ಸಲ್ಲಿಕೆಯಿಂದ ನಮಗೆ ಅನ್ಯಾಯ ಆಗಿದೆ. ಪ್ರಕರಣವನ್ನು ಸಿಬಿಐ ಇಲ್ಲವೇ ಸಿಐಡಿಗೆ ವಹಿಸಬೇಕೆಂದು ಸಿಎಂಗೆ ಮನವಿ ಮಾಡಿದರು.

ನನ್ನ ಪತಿಯನ್ನು ಕಳೆದುಕೊಂಡೆ, ಅವರು ನಿರ್ವಹಿಸಿದ ಕಾಮಗಾರಿಗಳ ಬಾಕಿ ಬಿಲ್‌ಗಳು ನಮಗೆ ಬಂದಿಲ್ಲ, ಕೆಲಸ ಕೊಡಿಸುವುದಾಗಿ ಭರವಸೆ ನೀಡಿದ್ದರೂ ಈಡೇರಿಲ್ಲ, ಇಂತಹ ಪರಿಸ್ಥಿತಿಯಲ್ಲಿ ಚಿಕ್ಕ ಮಗುವಿನೊಂದಿಗೆ ನಾನು ಹೇಗೆ ಬದುಕುವುದು? ಎಂದು ಸಂತೋಷ್ ಪಾಟೀಲ್ ಪತ್ನಿ ಜಯಶ್ರೀ ಕಣ್ಣೀರು ಹಾಕುತ್ತಾ ಮುಖ್ಯಮಂತ್ರಿಗಳ ಬಳಿ ಸಮಸ್ಯೆ ತೋಡಿಕೊಂಡರು.

ಬಾಕಿ ಇರುವ ಬಿಲ್‌ಗಳನ್ನು ತೆರವುಗೊಳಿಸಲು ಒಂದೇ ಒಂದು ಸಹಿ ಹಾಕಿದರೆ ನನ್ನ ಮಗನನ್ನು ಉಳಿಸಬಹುದಿತ್ತು, ಹಾಗೆ ಮಾಡಿದ್ದರೇ ಇಂದು ಬದುಕುತ್ತಿದ್ದನು ಎಂದು ಸಂತೋಷ್ ಪಾಟೀಲ್ ತಾಯಿ ಪಾರ್ವತಿ ಹೇಳಿದರು.

ಕೆ.ಎಸ್.ಈಶ್ವರಪ್ಪ ಅವರು ನನ್ನ ಮಗನನ್ನು ಉಳಿಸಿದ್ದರೆ ಅವರು ಪುಣ್ಯ ಸಂಪಾದಿಸುತ್ತಿದ್ದರು. ಆದರೆ ಅವರು ನನ್ನ ಮಗನ ಸಾವನ್ನು ಸಂಭ್ರಮಿಸಿದರು. ಪೊಲೀಸ್ ಇಲಾಖೆಯು ಪ್ರಕರಣದಲ್ಲಿ ಅವರ ಹೆಸರನ್ನು ತೆರವುಗೊಳಿಸಿ 'ಬಿ ರಿಪೋರ್ಟ್' ನೀಡಿದೆ. ಅವರ ಕುಟುಂಬದಲ್ಲಿ ಯಾರಾದರೂ ಸಾವನ್ನಪ್ಪಿದ್ದರೆ ಅವರು ಸಿಹಿತಿಂಡಿ ತಿಂದು ಸಂತೋಷ ಪಡುತ್ತಿದ್ದರೇ ಎಂದು ಪ್ರಶ್ನಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com