ಕಾಶ್ಮೀರದಲ್ಲಿ ನಡೆಯುವ ರಾಷ್ಟ್ರ ಮಟ್ಟದ ವಿಚಾರ ಸಂಕಿರಣಕ್ಕೆ ಕೊಡಗಿನ ಪೊನ್ನಂಪೇಟೆ ಗ್ರಾಮ ಪಂಚಾಯಿತಿ ಆಯ್ಕೆ
ಮಡಿಕೇರಿ: ಕೊಡಗಿನ ಪೊನ್ನಂಪೇಟೆ ಗ್ರಾಮ ಪಂಚಾಯಿತಿ ಉತ್ತಮ ಆಡಳಿತ ನೀಡುವಲ್ಲಿ ಇತರ ಸ್ಥಳೀಯ ಸಂಸ್ಥೆಗಳಿಗೆ ಮಾದರಿಯಾಗಿದೆ. ಪಂಚಾಯತ್ ರಾಜ್ನಿಂದ ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ನಡೆಯುವ ರಾಷ್ಟ್ರ ಮಟ್ಟದ ವಿಚಾರ ಸಂಕಿರಣದಲ್ಲಿ ಭಾಗವಹಿಸಲು ಪೊನ್ನಂಪೇಟೆ ಗ್ರಾಮ ಪಂಚಾಯಿತಿಯನ್ನು ಆಯ್ಕೆ ಮಾಡಲಾಗಿದೆ.
ಆಗಸ್ಟ್ 21 ರಿಂದ ಆಗಸ್ಟ್ 23 ರವರೆಗೆ ನಡೆಯಲಿರುವ ಉತ್ತಮ ಆಡಳಿತದೊಂದಿಗೆ ಪಂಚಾಯತ್ ಎಂಬ ವಿಚಾರ ಸಂಕಿರಣದಲ್ಲಿ ಪೊನ್ನಂಪೇಟೆ ಗ್ರಾಮ ಪಂಚಾಯಿತಿ ಸೇರಿದಂತೆ ರಾಜ್ಯದ ಮೂರು ಪಂಚಾಯಿತಿಗಳು ಭಾಗವಹಿಸಲಿವೆ.
ಗ್ರಾಮ ಪಂಚಾಯಿತಿಗಳು ಉತ್ತಮ ಆಡಳಿತದ ಆಧಾರ ಸ್ತಂಭಗಳಾಗಿದ್ದು, ಉತ್ತಮ ಆಡಳಿತ ನೀಡುವಲ್ಲಿ ಪೊನ್ನಂಪೇಟೆ ಪಂಚಾಯಿತಿ ಮಹತ್ವಾಕಾಂಕ್ಷೆಯ ಹಾದಿಯಲ್ಲಿದೆ. ವೈಜ್ಞಾನಿಕ ತ್ಯಾಜ್ಯ ವಿಂಗಡಣೆ, ಸಾರ್ವಜನಿಕ ಸ್ಥಳಗಳ ಸುಧಾರಣೆ, ಕುಂದುಕೊರತೆಗಳಿಗೆ ತಕ್ಷಣವೇ ಪರಿಹಾರ ಮತ್ತು ವಿವಿಧ ಸರ್ಕಾರಿ ಯೋಜನೆಗಳ ಯಶಸ್ವಿ ಅನುಷ್ಠಾನದಲ್ಲಿ ಪೊನ್ನಂಪೇಟೆ ಗ್ರಾಮ ಪಂಚಾಯಿತಿ ಮುಂಚೂಣಿಯಲ್ಲಿದೆ.
ಈ ಪಂಚಾಯಿತಿ ಸಾಮಾಜಿಕ ಮಾಧ್ಯಮ ಬಳಕೆಯಲ್ಲೂ ಮುಂದಿದ್ದು, 'ಗ್ರಾಮ ವಾಣಿ' ಎಂಬ ವಾಟ್ಸಾಪ್ ಗುಂಪನ್ನು ಹೊಂದಿದೆ. ಅಲ್ಲಿ ನಿವಾಸಿಗಳು ಪಂಚಾಯತ್ ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳೊಂದಿಗೆ ಸಂವಾದಿಸಬಹುದು ಮತ್ತು ತಮ್ಮ ಕುಂದುಕೊರತೆಗಳನ್ನು ಹೇಳಿಕೊಳ್ಳಬಹುದು.
ಪೊನ್ನಂಪೇಟೆ ಪಂಚಾಯಿತಿ ಪಿಡಿಒ ಪುಟ್ಟರಾಜು ಅವರೊಂದಿಗೆ ಪಂಚಾಯಿತಿ ಅಧ್ಯಕ್ಷೆ ಗಿರಿಜಾ ವೆಂಕಟೇಶ್ ಅವರು ಈ ತಿಂಗಳಾಂತ್ಯದಲ್ಲಿ ಪಂಚಾಯಿತಿಯಲ್ಲಿ ಉತ್ತಮ ಆಡಳಿತ ಕುರಿತು ಪ್ರಬಂಧ ಮಂಡಿಸಲು ಶ್ರೀನಗರಕ್ಕೆ ತೆರಳಲಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ