ಕೊಡಗಿಗೆ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳ: ದುರಂತಕ್ಕೆ ದಾರಿ ಎಂದ ತಜ್ಞರು!

ಕರ್ನಾಟಕದ ಕಾಶ್ಮೀರ ಖ್ಯಾತಿಯ ಕೊಡಗಿಗೆ ಪ್ರವಾಸಿಗರ ದಂಡೇ ಹರಿದುಬರುತ್ತಿದೆ. ಅದರಲ್ಲೂ ಆಗಸ್ಟ್ 11 ರ ಸುದೀರ್ಘ ವಾರಾಂತ್ಯದಲ್ಲಿ ಪ್ರಸಿದ್ಧ ಪ್ರವಾಸಿ ತಾಣ ರಾಜಾ ಸೀಟ್‌ಗೆ 30,000 ಕ್ಕೂ ಹೆಚ್ಚು ಪ್ರವಾಸಿಗರು ಭೇಟಿ ನೀಡಿದ್ದಾರೆ.
ರಾಜಾ ಸೀಟ್ ಹೊರಗಡೆ ನಿಂತ ವಾಹನಗಳು
ರಾಜಾ ಸೀಟ್ ಹೊರಗಡೆ ನಿಂತ ವಾಹನಗಳು

ಮಡಿಕೇರಿ: ಕರ್ನಾಟಕದ ಕಾಶ್ಮೀರ ಖ್ಯಾತಿಯ ಕೊಡಗಿಗೆ ಪ್ರವಾಸಿಗರ ದಂಡೆೇ ಹರಿದುಬರುತ್ತಿದೆ. ಅದರಲ್ಲೂ ಆಗಸ್ಟ್ 11 ರ ಸುದೀರ್ಘ ವಾರಾಂತ್ಯದಲ್ಲಿ ಪ್ರಸಿದ್ಧ ಪ್ರವಾಸಿ ತಾಣ ರಾಜಾ ಸೀಟ್‌ಗೆ 30,000 ಕ್ಕೂ ಹೆಚ್ಚು ಪ್ರವಾಸಿಗರು ಭೇಟಿ ನೀಡಿದ್ದಾರೆ. ಆಗಸ್ಟ್ 12 ರಿಂದ ಆಗಸ್ಟ್ 15 ರ ನಡುವೆ ಪ್ರತಿದಿನ ಸರಾಸರಿ 5, 000 ಪ್ರವಾಸಿಗರು ಮಡಿಕೇರಿಯ ಮಾಂದಲಪಟ್ಟಿ ಗುಡ್ಡಕ್ಕೆ ಭೇಟಿ ನೀಡಿದ್ದಾರೆ. ಆಗಸ್ಟ್ 11 ರಿಂದ ಆಗಸ್ಟ್ 15 ರವರೆಗೆ ನಗರ ಪ್ರದೇಶಗಳಲ್ಲಿ ಸಂಚಾರ ನಿಯಂತ್ರಣ ತಪ್ಪಿದ್ದರೂ ಜಿಲ್ಲೆಯಲ್ಲಿ ಪ್ರವಾಸಿಗರ ಸಂಖ್ಯೆಯಲ್ಲಿ ದಾಖಲೆ ಪ್ರಮಾಣದಲ್ಲಿ ಹೆಚ್ಚಿದೆ.

ಪ್ರವಾಸೋದ್ಯಮ ಜಿಲ್ಲೆಯ ಆರ್ಥಿಕತೆಯನ್ನು ಬೆಂಬಲಿಸುತ್ತದೆಯಾದರೂ ಹಲವಾರು ನಿವಾಸಿಗಳು ಪ್ರವಾಸಿಗರ ಹೆಚ್ಚಳವನ್ನು ವಿರೋಧಿಸುತ್ತಾರೆ. ಅನಿಯಂತ್ರಿತ ಪ್ರವಾಸೋದ್ಯಮ ಈಗಾಗಲೇ ದುರ್ಬಲವಾಗಿರುವ ಕೊಡಗಿನ ಪರಿಸರ ವ್ಯವಸ್ಥೆಯಲ್ಲಿ ದುರಂತದ ಹಾದಿಯನ್ನು ಸುಗಮಗೊಳಿಸುತ್ತಿದೆ ಎಂದು ಹೇಳುತ್ತಾರೆ. 

“ಪರಿಸರ ಸ್ನೇಹಿ ಎಂದು ಹೇಳಿಕೊಳ್ಳುವ ಹಲವಾರು ರೆಸಾರ್ಟ್‌ಗಳಿವೆ. ಆದರೆ, ಅವರು ತಮ್ಮ ಅಗತ್ಯಗಳನ್ನು ಪೂರೈಸಲು ಟನ್‌ಗಟ್ಟಲೆ ನೀರನ್ನು ಬಳಸುತ್ತಾರೆ ಮತ್ತು ಪ್ರತಿದಿನ 50 ರಿಂದ 60 ಚೀಲಗಳ ಕಸವನ್ನು ಎಸೆಯುತ್ತಾರೆ ಎಂದು ಪರಿಸರ ಮತ್ತು ಹೆಲ್ತ್ ಫೌಂಡೇಶನ್ (ಭಾರತ) ಸಂಸ್ಥಾಪಕ ನಿವೃತ್ತ ಡಾ. ಕರ್ನಲ್ ಮುತ್ತಣ್ಣ ಹೇಳುತ್ತಾರೆ. ಪರಿಸರ ಸಂರಕ್ಷಣೆಗಾಗಿ ಜಿಲ್ಲೆಗೆ ಆಗಮಿಸುವ ಪ್ರವಾಸಿಗರ ಸಂಖ್ಯೆಯನ್ನು ನಿಯಂತ್ರಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

"ದೇಶದಾದ್ಯಂತ ಹಲವಾರು ಪರಿಸರ-ಸೂಕ್ಷ್ಮ ಸ್ಥಳಗಳಿದ್ದು, ದಿನಕ್ಕೆ ಇಂತಿಷ್ಟು ಜನರು ಭೇಟಿ ನೀಡಬೇಕೆಂದು ಸ್ಥಿರ ಪಾಸ್‌ಗಳನ್ನು ನೀಡಲಾಗುತ್ತದೆ. ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಲ್ಲೂ ಇದೇ ಕ್ರಮ ಜಾರಿಯಾಗಬೇಕು. ದುರ್ಬಲವಾದ ಪರಿಸರ ವ್ಯವಸ್ಥೆಗೆ ಹೆಚ್ಚಿನ ಹಾನಿಯಾಗುವುದನ್ನು ತಡೆಗಟ್ಟಲು ಹೋಟೆಲ್‌ಗಳು, ರೆಸಾರ್ಟ್‌ಗಳಿಗೆ ಪರವಾನಗಿಗಳು ಮತ್ತು ಅಸ್ತಿತ್ವದಲ್ಲಿರುವ ವಾಣಿಜ್ಯ ಘಟಕಗಳ ವಿಸ್ತರಣೆಯನ್ನು ನಿಲ್ಲಿಸಬೇಕು. ಪ್ರತಿ ತಾಲ್ಲೂಕಿನಲ್ಲಿಯೂ ಹೋಂಸ್ಟೇಗಳ ಸಂಖ್ಯೆಯನ್ನು ನಿರ್ಬಂಧಿಸುವ ಅಗತ್ಯವಿದೆ ಎಂದು ಸಲಹೆ ನೀಡಿದರು. ಈ ಮಧ್ಯೆ ಮಕ್ಕಂದೂರು ಪ್ರದೇಶದಲ್ಲಿ ಭೂಕುಸಿತ ಪೀಡಿತ ಪ್ರದೇಶಗಳಿಗೆ ಬಂದಿರುವ ಹೊಸ ಖಾಸಗಿ ರೆಸಾರ್ಟ್ ವಿರುದ್ಧ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಗೆ ದೂರು ನೀಡುವುದಾಗಿ ಅವರು ಖಚಿತಪಡಿಸಿದ್ದಾರೆ.

<strong>ಕೆಲವು ಸ್ಥಳೀಯರು ಪ್ರವಾಸಿಗರ ಕುರಿತು ಬೋರ್ಡ್ ಹಾಕಿರುವುದು</strong>
ಕೆಲವು ಸ್ಥಳೀಯರು ಪ್ರವಾಸಿಗರ ಕುರಿತು ಬೋರ್ಡ್ ಹಾಕಿರುವುದು

ಜಿಲ್ಲೆಯಲ್ಲಿ ಕೇವಲ 1,600 ಹೋಂಸ್ಟೇಗಳು  ಜಿಲ್ಲಾ ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಣಿಯಾಗಿವೆ. ಆದರೆ, ಜಿಲ್ಲೆಯಾದ್ಯಂತ 7,000 ಕ್ಕೂ ಹೆಚ್ಚು ಹೋಂಸ್ಟೇಗಳಿದ್ದು, ಅವುಗಳಲ್ಲಿ ಹೆಚ್ಚಿನವು ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಣಿಯಾಗಿಲ್ಲ. ಹಲವು ಹೋಂಸ್ಟೇಗಳಿರುವುದರಿಂದ ಎಷ್ಟು ಪ್ರವಾಸಿಗರಿಗೂ ಬೇಕಾದರೂ ಸ್ಥಳಾವಕಾಶ ಕಲ್ಪಿಸಬಹುದು. ಪ್ರವಾಸಿಗರ ಸಂಖ್ಯೆಯನ್ನು ಕಡಿಮೆಗೊಳಿಸುವ, ಅಕ್ರಮ ತಂಗುವಿಕೆಯನ್ನು ನಿಯಂತ್ರಿಸುವ ಅವಶ್ಯಕತೆಯಿದೆ ಎಂದು ವಿರಾಜಪೇಟೆಯ ಉದ್ಯಮಿ ಚೇತನ್ ಎಂ ಅಭಿಪ್ರಾಯಪಟ್ಟರು.

ಅಕ್ರಮ ಹೋಂಸ್ಟೇಗಳ ಕುರಿತು ಮಾತನಾಡಿದ ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ಪ್ರಭಾರಿ ಡಿಡಿ ಯತೀಶ್ ಉಳ್ಳಾಲ್, ಕರ್ನಾಟಕ ಪ್ರವಾಸೋದ್ಯಮ ನೀತಿಯ ಪ್ರಕಾರ, ಅಕ್ರಮ ಹೋಂಸ್ಟೇಗಳ ವಿರುದ್ಧ ಕ್ರಮ ಕೈಗೊಳ್ಳಲು ಇಲಾಖೆಯು ಯಾವುದೇ ಷರತ್ತು ಅಥವಾ ದಂಡಸಂಹಿತೆ ಹೊಂದಿಲ್ಲ. ನಾವು ಕೇವಲ ಅಭಿವೃದ್ಧಿ ಸಂಸ್ಥೆ ಹೊರತು ನಿಯಂತ್ರಕ ಸಂಸ್ಥೆಯಲ್ಲ. ನಾವು ಹೋಮ್‌ಸ್ಟೇಗಳಿಗೆ ಪರವಾನಗಿಗಳನ್ನು ಸುಗಮಗೊಳಿಸುತ್ತೇವೆ ಮತ್ತು ಅವುಗಳನ್ನು ನೋಂದಾಯಿಸಲು ಪ್ರೋತ್ಸಾಹಿಸುತ್ತೇವೆ, ನಾವು ಯಾವುದೇ ಕಾನೂನು ಕ್ರಮವನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ಗ್ರಾಮ ಪಂಚಾಯಿತಿಗಳು ಸೇರಿದಂತೆ ಸ್ಥಳೀಯ ಸಂಸ್ಥೆಗಳು ತಮ್ಮ ಪ್ರದೇಶಗಳಲ್ಲಿನ ಹೋಂಸ್ಟೇಗಳ ಸಂಖ್ಯೆಯನ್ನು ನಿಯಂತ್ರಿಸುವುದು ಮುಖ್ಯವಾಗಿದೆ. ಜಿಲ್ಲೆಯಲ್ಲಿ ಪರಿಸರ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಬಜೆಟ್‌ನಲ್ಲಿ ಒತ್ತು ನೀಡಿದ್ದರೂ, ಇಲಾಖೆಯು ಅದಕ್ಕೆ ಸಂಬಂಧಿಸಿದ ಯಾವುದೇ ಮಾರ್ಗಸೂಚಿಗಳನ್ನು ಸ್ವೀಕರಿಸಿಲ್ಲ ಎಂದು ಅವರು ತಿಳಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com