ಮಡಿಕೇರಿ: ಕೆಎಸ್ ಆರ್ ಟಿಸಿ ಬಸ್ ಡಿಕ್ಕಿ; ನೆಲಕ್ಕುರುಳಿದ ಜನರಲ್ ತಿಮ್ಮಯ್ಯ ಪ್ರತಿಮೆ

ಕೆಎಸ್ ಆರ್ ಟಿ ಸಿ ಬಸ್ ವೊಂದು ಸೋಮವಾರ ಬೆಳಿಗ್ಗೆ ಡಿಕ್ಕಿ ಹೊಡೆದು ನಗರದ ಟೋಲ್ ಗೇಟ್ ನಲ್ಲಿರುವ ಜನರಲ್ ತಿಮ್ಮಯ್ಯ ಪ್ರತಿಮೆ ನೆಲಕ್ಕುರುಳಿದೆ.
ಉರುಳಿ ಬಿದ್ದ ಪ್ರತಿಮೆ
ಉರುಳಿ ಬಿದ್ದ ಪ್ರತಿಮೆ

ಮಡಿಕೇರಿ: ಸೋಮವಾರ ನಸುಕಿನ ವೇಳೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ದಿವಂಗತ ಜನರಲ್ ಕೆ.ಎಸ್.ತಿಮ್ಮಯ್ಯ ಅವರ ಪ್ರತಿಮೆಗೆ ಧಕ್ಕೆಯಾಗಿದೆ. ಹಿಂದಿನ ವರ್ಷಗಳಲ್ಲಿ ಸಾಕಷ್ಟು ಹೋರಾಟದ ನಂತರ ಸ್ಥಾಪಿಸಲಾದ ಈ ಪ್ರತಿಮೆ ಸುಮಾರು 50 ವರ್ಷ ಹಳೆಯದು. ವೇಗವಾಗಿ ಬಂದ ಕೆಎಸ್‌ಆರ್‌ಟಿಸಿ ಬಸ್‌ ಪ್ರತಿಮೆ ಇದ್ದ ವೃತ್ತಕ್ಕೆ ಡಿಕ್ಕಿ ಹೊಡೆದ ಪರಿಣಾಮ ಅದು ಕೆಳಗೆ ಬಿದ್ದಿದೆ.

ಬೆಳಗ್ಗೆ 5.45ರ ಸುಮಾರಿಗೆ ಮಡಿಕೇರಿಯಿಂದ ಮಂಗಳೂರಿಗೆ ತೆರಳಬೇಕಿದ್ದ ಕೆಎಸ್‌ಆರ್‌ಟಿಸಿ ಬಸ್, ಮಡಿಕೇರಿ ಕೆಎಸ್‌ಆರ್‌ಟಿಸಿ ಬಸ್ ಡಿಪೋದಿಂದ ಬಸ್ ನಿಲ್ದಾಣದ ಕಡೆಗೆ ಹೊರಟಿತು. ಜನರಲ್ ತಿಮ್ಮಯ್ಯ ವೃತ್ತದ ಅಡ್ಡರಸ್ತೆಯಲ್ಲಿ ಪಿಕಪ್ ವಾಹನವೊಂದು ಹಠಾತ್ತನೆ ತಿರುಗಿದ್ದು, ವೇಗವಾಗಿ ಬಂದ ಕೆಎಸ್‌ಆರ್‌ಟಿಸಿ ಬಸ್ ಪಿಕಪ್ ವಾಹನಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಯತ್ನಿಸಿ ಪ್ರತಿಮೆಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕೆಎಸ್‌ಆರ್‌ಟಿಸಿ ಬಸ್‌ನ ಗಾಜು ಒಡೆದಿದ್ದು, ಕಂಡಕ್ಟರ್ ವಾಹನದಿಂದ ಹೊರಕ್ಕೆ ಬಿದ್ದಿದ್ದಾರೆ. ಅದೃಷ್ಟವಶಾತ್ ಬಸ್‌ನಲ್ಲಿ ಪ್ರಯಾಣಿಕರಿಲ್ಲದ್ದರಿಂದ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಬೆಳಗಿನ ವಾಕಿಂಗ್‌ನಲ್ಲಿ ನಿರತರಾಗಿದ್ದ ಬೆರಳೆಣಿಕೆಯಷ್ಟು ಜನರು ಸ್ಥಳಕ್ಕೆ ಧಾವಿಸಿ, ಗಾಯಗೊಂಡ ಕಂಡಕ್ಟರ್ ಪುಟ್ಟಸ್ವಾಮಿ ಅವರನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಸ್ಥಳಕ್ಕೆ ಮಡಿಕೇರಿ ಡಿವೈಎಸ್ಪಿ ಸುಂದರ್ ರಾಜ್, ಸಿಐ ಅನೂಪ್ ಮಾದಪ್ಪ ಸೇರಿದಂತೆ ಮಡಿಕೇರಿ ಪೊಲೀಸ್ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಬಸ್ ಚಾಲಕ ಕೊಟ್ರೇಗೌಡ (36)ನನ್ನು ವಶಕ್ಕೆ ಪಡೆದಿದ್ದಾರೆ. ನಿರ್ಲಕ್ಷ್ಯದ ಚಾಲನೆ ಮತ್ತು ಸಾರ್ವಜನಿಕ ಆಸ್ತಿ ಹಾನಿಗಾಗಿ ಚಾಲಕನ ವಿರುದ್ಧ ಸೆಕ್ಷನ್ 279 ಮತ್ತು 427 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ನಗರದಲ್ಲಿ ಸ್ಥಾಪಿಸಲಾದ ಮೊದಲ ಪ್ರತಿಮೆಗಳಲ್ಲಿ ಒಂದಾದ ಈ ಪ್ರತಿಮೆಯು ನಗರದ ನಿವಾಸಿಗಳಲ್ಲಿ ಭಾವನಾತ್ಮಕ ಸಂಬಧ ಹೊಂದಿದೆ. ಮಾರ್ಚ್ 20, 1973 ರಂದು ದಿವಂಗತ ಜನರಲ್ ಕೆಎಸ್ ತಿಮ್ಮಯ್ಯ ಅವರ ಕಂಚಿನ ಪ್ರತಿಮೆಯನ್ನು ಸ್ಥಾಪಿಸಲಾಯಿತು. ಜನವರಿ 1973 ರಲ್ಲಿ ಸೇನೆಯಿಂದ ನಿವೃತ್ತರಾದ ಫೀಲ್ಡ್ ಮಾರ್ಷಲ್ ಸ್ಯಾಮ್ ಮಾನೆಕ್ಷಾ ಅವರು ಪ್ರತಿಮೆಯನ್ನು ಅನಾವರಣಗೊಳಿಸಿದರು. “ಪ್ರತಿಮೆಯನ್ನು ಸ್ಥಾಪಿಸಲು ನಾವು ನಡೆಸಿದ ಹೋರಾಟವು ಇನ್ನೂ ನನ್ನ ನೆನಪಿನಲ್ಲಿ ಹಸಿರಾಗಿದೆ. ಇದಕ್ಕಾಗಿ ರಾಜ್ಯಕ್ಕೆ ಹಣ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದರೂ ನಮಗೆ ಕೇವಲ 1500 ರೂ.ಗಳನ್ನು ಮಂಜೂರು ಮಾಡಲಾಗಿತ್ತು. ಆದರೆ, ಈ ಅವಧಿಯಲ್ಲಿ ರಾಜ್ಯಪಾಲರ ಆಳ್ವಿಕೆಯನ್ನು ಘೋಷಿಸಲಾಯಿತು ಮತ್ತು ನಾವು ಆಗಿನ ರಾಜ್ಯಪಾಲ ಧರ್ಮವೀರ ಅವರನ್ನು ಸಂಪರ್ಕಿಸಿದಾಗ ಅವರು 30,000 ರೂ. ಮಂಜೂರು ಮಾಡಿದ್ದರು. ಮುಂಬೈ ಮೂಲದ ಖ್ಯಾತ ಕಲಾವಿದ ವಾಗ್ ಅವರು ಈ ಪ್ರತಿಮೆಯನ್ನು ತಯಾರಿಸಿದ್ದಾರೆ’ ಎಂದು ಮಡಿಕೇರಿ ಸಿಎಂಸಿಯ ಅಂದಿನ ಅಧ್ಯಕ್ಷ ಹಾಗೂ ಪ್ರತಿಮೆ ಸ್ಥಾಪನೆಗೆ ಶ್ರಮಿಸಿದ ಪ್ರಮುಖ ವ್ಯಕ್ತಿ ಎಂ.ಸಿ.ನಾಣಯ್ಯ ಸ್ಮರಿಸಿದರು. ಅನಾವರಣ ಸಮಾರಂಭದಲ್ಲಿ ಅಂದಿನ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಎಸ್.ಎಂ.ಕೃಷ್ಣ ಕೂಡ ಭಾಗವಹಿಸಿದ್ದರು.

ಪ್ರತಿಮೆಯ ಹಿಂಭಾಗಕ್ಕೆ ಮತ್ತು ಕೈ ಭಾಗಕ್ಕೆ ಹಾನಿಯಾಗಿದೆ. ಈ ಪ್ರತಿಮೆಯನ್ನು ಜನರಲ್ ತಿಮಯ್ಯ ಮ್ಯೂಸಿಯಂಗೆ ಸ್ಥಳಾಂತರಿಸಲಾಗಿದೆ. ಪ್ರತಿಮೆ ಪುನರ್ ಪ್ರತಿಷ್ಠಾಪನೆ ಕುರಿತು ಡಿಸಿ ಹಾಗೂ ಜನರಲ್ ತಿಮ್ಮಯ್ಯ ಹಾಗೂ ಎಫ್‌ಎಂಕೆಎಂ ಕರಿಯಪ್ಪ ಫೋರಂ ಜತೆ ಚರ್ಚೆ ನಡೆಸಲಾಗುವುದು ಎಂದು ಸಿಎಂಸಿ ಅಧ್ಯಕ್ಷೆ ಅನಿತಾ ಪೂವಯ್ಯ ತಿಳಿಸಿದರು. "ಅಂದಾಜು ವೆಚ್ಚ ಸಿದ್ಧಪಡಿಸಲಾಗುತ್ತಿದೆ ಮತ್ತು ಪ್ರತಿಮೆಯನ್ನು ಮರುಸ್ಥಾಪಿಸಲು ಎಲ್ಲಾ ಇಲಾಖೆಗಳು ಒಟ್ಟಾಗಿ ಕೆಲಸ ಮಾಡುತ್ತವೆ" ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com