ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

3 ತಿಂಗಳಾಯ್ತು, 2 ಲಕ್ಷ ಸರ್ಕಾರಿ ಹುದ್ದೆಗಳ ನೇಮಕಾತಿ ಭರವಸೆ ಮರೆತ ಸರ್ಕಾರ!

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಗಿ ಮೂರು ತಿಂಗಳು ಕಳೆದರೂ ಸರ್ಕಾರಿ ಉದ್ಯೋಗ ಸಂಬಂಧ ನೀಡಿದ್ದ ಭರವಸೆಯನ್ನು ಮರೆತಂತೆ ಕಾಣುತ್ತಿದೆ.  

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಗಿ ಮೂರು ತಿಂಗಳು ಕಳೆದರೂ ಸರ್ಕಾರಿ ಉದ್ಯೋಗ ಸಂಬಂಧ ನೀಡಿದ್ದ ಭರವಸೆಯನ್ನು ಮರೆತಂತೆ ಕಾಣುತ್ತಿದೆ. ಹಲವು ವರ್ಷಗಳಿಂದ ಖಾಲಿ ಬಿದ್ದಿರುವ 2 ಲಕ್ಷಕ್ಕೂ ಹೆಚ್ಚು ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಲಾಗಿತ್ತು. ಆದರೆ ಶೀಘ್ರದಲ್ಲೇ 100 ದಿನ ಪೂರೈಸಲಿರುವ ರಾಜ್ಯ ಸರ್ಕಾರ ಇನ್ನೂ ನೇಮಕಾತಿ ಪ್ರಕ್ರಿಯೆ ಆರಂಭಿಸಿಲ್ಲ.

ಪ್ರಸ್ತುತ, ಕೃಷಿ, ಗೃಹ, ನಗರಾಭಿವೃದ್ಧಿ, ಆರೋಗ್ಯ, ಪ್ರವಾಸೋದ್ಯಮ, ಶಿಕ್ಷಣ, ಆಹಾರ ಮತ್ತು ನಾಗರಿಕ ಸರಬರಾಜು, ವಿದ್ಯುತ್, ಜಲಸಂಪನ್ಮೂಲ, ಅಬಕಾರಿ, ವೈದ್ಯಕೀಯ ಶಿಕ್ಷಣ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸೇರಿದಂತೆ 72 ಇಲಾಖೆಗಳಲ್ಲಿ 5.2 ಲಕ್ಷ ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. 2.60 ಲಕ್ಷ ಹುದ್ದೆಗಳು ಖಾಲಿ ಇದ್ದು, ಕೆಲವನ್ನು ಗುತ್ತಿಗೆ ನೌಕರರು ನಿರ್ವಹಿಸುತ್ತಿದ್ದಾರೆ.

ಕೆಲವು ಇಲಾಖೆಗಳಲ್ಲಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ, ಆದರೆ ಈ ಅರ್ಜಿಗಳನ್ನು ಹಲವು ತಿಂಗಳ ಹಿಂದೆ ಕರೆಯಲಾಗಿತ್ತು. ಹೊಸ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹೊಸದಾಗಿ ಅರ್ಜಿಗಳನ್ನು ಕರೆಯಲಾಗಿಲ್ಲ. ಈಗಿರುವ ಸಿಬ್ಬಂದಿಯೇ ಹೆಚ್ಚುವರಿ ಕೆಲಸ ನಿರ್ವಹಿಸುತ್ತಿದ್ದು, ಪೊಲೀಸ್, ಶಿಕ್ಷಣ, ಕೃಷಿ ಸೇರಿದಂತೆ ಪ್ರಮುಖ ಇಲಾಖೆಗಳು ತೀವ್ರ ಸಿಬ್ಬಂದಿ ಕೊರತೆಯಿಂದ ನಿರ್ವಹಣೆ ಮಾಡುತ್ತಿವೆ. ಮಂಜೂರಾದ ಎಲ್ಲಾ ಖಾಲಿ ಹುದ್ದೆಗಳನ್ನು ಒಂದು ವರ್ಷದೊಳಗೆ ಭರ್ತಿ ಮಾಡುವುದಾಗಿ ಕಾಂಗ್ರೆಸ್ ಘೋಷಿಸಿತ್ತು. ವಾಸ್ತವವಾಗಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ತಮ್ಮ ಪ್ರಚಾರ ಭಾಷಣವೊಂದರಲ್ಲಿ 2.5 ಲಕ್ಷ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಹೇಳಿದ್ದರು.

“ಸರ್ಕಾರಿ ವಲಯದಲ್ಲಿ  ಇಂದು ಘೋಷಿಸಿ ಮತ್ತು ನಾಳೆ ನೇಮಕಾತಿ ಮಾಡಲು ಸಾಧ್ಯವಿಲ್ಲ. ಒಂದು ಕಾರ್ಯವಿಧಾನವಿದೆ. ಇದಕ್ಕಾಗಿ ಸರ್ಕಾರ ವಿವಿಧ ಇಲಾಖೆಗಳೊಂದಿಗೆ ಸಭೆ ನಡೆಸಿ ಅವರ ಸಿಬ್ಬಂದಿ ಸ್ಥಿತಿಗತಿ ತಿಳಿದುಕೊಳ್ಳಬೇಕು, ಕೆಪಿಎಸ್‌ಸಿ ಪರೀಕ್ಷೆ ಬರೆಯಲು ಅರ್ಜಿ ಕರೆಯಲಿದೆ. ಮೂರು ತಿಂಗಳು ಕಳೆದರೂ ಯಾವುದನ್ನೂ ಆರಂಭಿಸಿಲ್ಲ ಎಂದು ಸರ್ಕಾರದ ಮೂಲಗಳು ತಿಳಿಸಿವೆ. "ಕಾನೂನು ಸಮಸ್ಯೆಗಳಿಂದಾಗಿ ನೇಮಕಾತಿ ಸ್ಥಗಿತಗೊಳ್ಳುವ ಸಾಧ್ಯತೆಗಳೂ ಇವೆ. ಈ ಹಿಂದೆ ಭರ್ತಿ ಮಾಡಬೇಕಿದ್ದ ಕನಿಷ್ಠ 45,000 ಹುದ್ದೆಗಳು ನ್ಯಾಯಾಲಯದ ಮುಂದೆ ಇವೆ ಎಂದು ಮೂಲಗಳು ವಿವರಿಸಿವೆ.

ಈ ಮಧ್ಯೆ ಏಳನೇ ವೇತನ ಆಯೋಗದ ವರದಿಗಾಗಿ ಸರ್ಕಾರ ಕಾಯುತ್ತಿದೆ. ಇದು ಕೆಲವೇ ವಾರಗಳಲ್ಲಿ ಸಲ್ಲಿಕೆಯಾಗುವ ನಿರೀಕ್ಷೆಯಿದೆ. ಜಾರಿಯಾದರೆ ಈಗಿರುವ ಸಿಬ್ಬಂದಿಗೆ 20,000 ಕೋಟಿ ರೂ.ಗೂ ಅಧಿಕ ಹೊರೆಯನ್ನು ಸರಕಾರ ಹೊರಬೇಕಾಗುತ್ತದೆ. ಸರ್ಕಾರ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿದರೆ ಹೆಚ್ಚುವರಿ ಹೊರೆಯಾಗುತ್ತದೆ. ಹೀಗಿರುವಾಗ, ಖಾತರಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಸರ್ಕಾರವು ಆದಾಯವನ್ನು ಕ್ರೋಢೀಕರಿಸಲು ಹೆಣಗಾಡುತ್ತಿದೆ ಎಂದು ಹೆಸರು ಹೇಳಲಿಚ್ಛಿಸದ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾಗ ಒಂದು ವರ್ಷದೊಳಗೆ ಒಂದು ಲಕ್ಷ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಭರವಸೆ ನೀಡಿದ್ದರು. ಅವರ ಸರ್ಕಾರವು 15,000 ಶಿಕ್ಷಕರ ಹುದ್ದೆಗಳನ್ನು ಒಳಗೊಂಡಂತೆ ಅರ್ಜಿಗಳನ್ನು ಕರೆದಿದೆ, ಆದರೆ ಕಾನೂನಿನ ಅಡಚಣೆಯಿಂದಾಗಿ ಅವು ಸ್ಥಗಿತಗೊಂಡಿವೆ.

Related Stories

No stories found.

Advertisement

X
Kannada Prabha
www.kannadaprabha.com