ಕೆಪಿಎಸ್ ಸಿ ಕಾರ್ಯದರ್ಶಿಯಿಂದ ಅಧಿಕಾರ ದುರ್ಬಳಕೆ, ಏಕಪಕ್ಷೀಯ ಟೆಂಡರ್: ಆಯೋಗದ ಅಧ್ಯಕ್ಷರ ಆರೋಪ

ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್​ಸಿ) ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳ ನಡುವಿನ ಜಟಾಪಟಿ ಇದೀಗ ಬೀದಿರಂಪವಾಗಿದೆ. ಕಾರ್ಯದರ್ಶಿ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆಂದು ಆರೋಪಿಸಿ ಕೆಪಿಎಸ್ಸಿ ಅಧ್ಯಕ್ಷ ಶಿವಶಂಕರಪ್ಪ  ಆರೋಪಿಸಿದ್ದಾರೆ.
ಉದ್ಯೋಗ ಸೌಧ
ಉದ್ಯೋಗ ಸೌಧ
Updated on

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್​ಸಿ) ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳ ನಡುವಿನ ಜಟಾಪಟಿ ಇದೀಗ ಬೀದಿರಂಪವಾಗಿದೆ. ಕಾರ್ಯದರ್ಶಿ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆಂದು ಆರೋಪಿಸಿ ಕೆಪಿಎಸ್ಸಿ ಅಧ್ಯಕ್ಷ ಶಿವಶಂಕರಪ್ಪ ಎಸ್. ಸಾಹುಕಾರ್ ದಾಖಲೆ ಸಮೇತ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.

ಟೆಂಡರ್ ಪ್ರಕರಣ ಸಂಬಂಧ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಪರೀಕ್ಷಾ ವ್ಯವಸ್ಥೆಯನ್ನು ಮತ್ತಷ್ಟು ಪಾರದರ್ಶಕವಾಗಿ ನಡೆಸುವ ಉದ್ದೇಶ ದಿಂದ ವಿವಿಧ ಸುಧಾರಣಾ ಕ್ರಮಗಳ ಅನುಷ್ಠಾನಕ್ಕೆ ಮಂಗಳವಾರ ನಡೆದ (ಆ.29) ಆಯೋಗದ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಅದಕ್ಕಾಗಿ 45 ಕೋಟಿ ರೂ.ಗಳ ಟೆಂಡರ್ ನೀಡಲಾಗಿದೆ ಎಂದು ಮಾಧ್ಯಮಗಳಿಗೆ ಕಾರ್ಯದರ್ಶಿ ಮಾಹಿತಿ ನೀಡಿದ್ದಾರೆ. ಆದರೆ, ಅಸಲಿಗೆ ಆಯೋಗದ ಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿಲ್ಲ. ಆಯೋಗದ ಗಮನಕ್ಕೂ ಬಂದಿಲ್ಲ ಎಂದು ಅಧ್ಯಕ್ಷರು ತಿಳಿಸಿದ್ದಾರೆ.

ನೋಯ್ಡಾ ಮೂಲದ ಎಕ್ಷೆರ್ಜಿ ಸಲ್ಯೂಷನ್ಸ್ ಸಂಸ್ಥೆಯು ಆ.23ರಂದು ಟೆಂಡರ್ ಬಗ್ಗೆ ಕೆಲವು ಆಕ್ಷೇಪಣೆಗಳನ್ನು ಸಲ್ಲಿಸಿದ ಮೇಲಷ್ಟೇ ಟೆಂಡರ್ ಆಹ್ವಾನಿಸಿರುವ ವಿಷಯ ತಿಳಿದುಬಂದಿದೆ. ಇದು ಕಾರ್ಯದರ್ಶಿಯ ಏಕಪಕ್ಷೀಯ ನಿರ್ಧಾರವಾಗಿದೆ.

ಸಭೆಯನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ. ಈ ಹಿಂದೆಯೂ 2 ಬಾರಿ ಟೆಂಡರ್ ಆಹ್ವಾನಿಸಿರುವುದು ಆ. 28ರ ಟಿಪ್ಪಣಿಯಿಂದ ತಿಳಿದು ಬಂದಿದೆ. ಈ ವಿಷಯಗಳನ್ನು ಆಯೋಗದ ಗಮನಕ್ಕೆ ತಾರದೇ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ. ಹೀಗಾಗಿ ಮುಂದಿನ ಸೂಚನೆವರೆಗೂ ಟೆಂಡರ್ ತಡೆಹಿಡಿಯಲು ಸೂಚಿಸಲಾಗಿದೆ ಎಂದು ಶಿವಶಂಕರಪ್ಪ ತಿಳಿಸಿದ್ದಾರೆ.

ಲೋಕೋಪಯೋಗಿ ಇಲಾಖೆ ಕಿರಿಯ ಅಭಿಯಂತರ (ಸಿವಿಲ್) ಹುದ್ದೆಗಳ ತಾತ್ಕಾಲಿಕ ಆಯ್ಕೆಪಟ್ಟಿಯನ್ನು ಆಯೋಗದ ವೆಬ್​ಸೈಟ್​ನಲ್ಲಿ ಪ್ರಕಟಿಸಿದ್ದಾರೆ, ಆಯೋಗ ಅನುಮೋದನೆ ನೀಡುವ ಮೊದಲೇ ಗಣಕ ಕೇಂದ್ರಕ್ಕೆ ಸರ್ಕಾರದಿಂದ ಮಂಜೂರಾಗಿದ್ದ ಗುತ್ತಿಗೆ ಆಧಾರದ ಹುದ್ದೆಗಳಿಗೆ ನೇಮಕಕ್ಕೆ ಅಧಿಸೂಚನೆ ಹೊರಡಿಸಿದ್ದರು. ಅನುಮೋದನೆ ಇಲ್ಲದೆ ಹೆಚ್ಚುವರಿ ಪಟ್ಟಿಗಳನ್ನು ವೆಬ್​ಸೈಟ್​ನಲ್ಲಿ ಪ್ರಕಟಿಸಿದ್ದು, ಅಧ್ಯಕ್ಷರೊಡನೆ ಸಮಾಲೋಚಿಸದೆ ವಿಶೇಷ ಸಭೆಗಳನ್ನು ನಿಗದಿ ಮಾಡಿರುವುದು.

 ಎಸಿಎಫ್ ಹುದ್ದೆಗಳ ಸಂದರ್ಶನ ಸಮಿತಿ ರಚಿಸಿ ಆಯೋಗದ ನಿರ್ಣಯಕ್ಕೆ ವಿರುದ್ಧವಾಗಿ ಅರಣ್ಯ ಇಲಾಖೆಗೆ ಪತ್ರ ಬರೆದಿದ್ದರು. ಕೀ ಉತ್ತರಗಳನ್ನು ಪ್ರಕಟಿಸುವ ಮುನ್ನ ಆಯೋಗದ ಗಮನಕ್ಕೆ ತರಬೇಕೆಂದು ಆಯೋಗದ ಸಭೆಯ ನಿರ್ಣಯವಿದ್ದರೂ ಸಹ ಗಮನಕ್ಕೆ ತರದೇ ಕೀ ಉತ್ತರಗಳನ್ನು ಪ್ರಕಟಿಸುತ್ತಿದ್ದಾರೆ.

ನಿರ್ಧಾರಗಳನ್ನು ಸರಿಪಡಿಸಿ ಕೊಳ್ಳುವಂತೆ ಸೂಚಿಸಿ ಏ. 28ರಂದು ಕಾರ್ಯ ದರ್ಶಿಗೆ ನೋಟಿಸ್ ಜಾರಿ ಮಾಡಲಾಗಿತ್ತು. ಆದರೂ ಅವರು ನಡವಳಿಕೆಯನ್ನು ಸರಿಪಡಿಸಿಕೊಳ್ಳದ ಕಾರಣಕ್ಕೆ ಸೂಕ್ತ ತಿಳಿವಳಿಕೆ ನೀಡುವಂತೆ ಮೇ 17ರಂದು ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು, ಖುದ್ದಾಗಿ ಭೇಟಿ ಮಾಡಿ ಮನವಿ ಸಲ್ಲಿಸಲಾಗಿತ್ತು. ಜೂ.3ರಂದು ಮುಖ್ಯಮಂತ್ರಿಗಳನ್ನೂ ಭೇಟಿ ಮಾಡಲಾಗಿದೆ. ಇಷ್ಟೆಲ್ಲಾ ಬೆಳವಣಿಗೆಯಾದರೂ ಆಯೋಗದ ಕಾರ್ಯದರ್ಶಿ ತಮ್ಮ ನಡವಳಿಕೆಯಲ್ಲಿ ಯಾವುದೇ ಬದಲಾವಣೆ ಮಾಡಿಕೊಂಡಿಲ್ಲ ಎಂದು ಶಿವಶಂಕರಪ್ಪ ಆರೋಪಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com