ಪತ್ನಿಯ ಅನುಮಾನಾಸ್ಪದ ಸಾವು: ಬೇಗೂರು ಪಿಎಸ್‌ಐಗೆ ಜಾಮೀನು ನಿರಾಕರಿಸಿದ ಕರ್ನಾಟಕ ಹೈಕೋರ್ಟ್

ಪತ್ನಿಯ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಐಪಿಸಿ, ವರದಕ್ಷಿಣೆ ನಿಷೇಧ ಕಾಯ್ದೆ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ಚಾರ್ಜ್ ಶೀಟ್ ದಾಖಲಿಸಿರುವ ಬೇಗೂರು ಪೊಲೀಸ್ ಠಾಣೆ ಸಬ್ ಇನ್ಸ್‌ಪೆಕ್ಟರ್ ರಮೇಶ್ ಎಸ್‌ವಿ ಅವರಿಗೆ ಜಾಮೀನು ನೀಡಲು ಕರ್ನಾಟಕ ಹೈಕೋರ್ಟ್ ಗುರುವಾರ ನಿರಾಕರಿಸಿದೆ.
ಕರ್ನಾಟಕ ಹೈಕೋರ್ಟ್
ಕರ್ನಾಟಕ ಹೈಕೋರ್ಟ್

ಬೆಂಗಳೂರು: ಪತ್ನಿಯ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಐಪಿಸಿ, ವರದಕ್ಷಿಣೆ ನಿಷೇಧ ಕಾಯ್ದೆ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ಚಾರ್ಜ್ ಶೀಟ್ ದಾಖಲಿಸಿರುವ ಬೇಗೂರು ಪೊಲೀಸ್ ಠಾಣೆ ಸಬ್ ಇನ್ಸ್‌ಪೆಕ್ಟರ್ ರಮೇಶ್ ಎಸ್‌ವಿ ಅವರಿಗೆ ಜಾಮೀನು ನೀಡಲು ಕರ್ನಾಟಕ ಹೈಕೋರ್ಟ್ ಗುರುವಾರ ನಿರಾಕರಿಸಿದೆ.

ಅಕ್ಟೋಬರ್ 6 ರಂದು ಜಾಮೀನು ತಿರಸ್ಕರಿಸಿದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಆರು ತಿಂಗಳಿನಿಂದ ನ್ಯಾಯಾಂಗ ಬಂಧನದಲ್ಲಿರುವ ಆರೋಪಿ ರಮೇಶ್ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿದ ನ್ಯಾಯಮೂರ್ತಿ ಮೊಹಮ್ಮದ್ ನವಾಜ್ ಈ ಆದೇಶ ನೀಡಿದರು. ಆರೋಪಿಯ ಪತ್ನಿ ಶಿಲ್ಪಾ ವಿ ಜೂನ್‌ನಲ್ಲಿ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದರು.

ದೂರುದಾರರಾದ ಸಂತ್ರಸ್ತೆಯ ತಂದೆ ವೆಂಕಟರಾಯಪ್ಪ ಪರ ವಾದ ಮಂಡಿಸಿದ ವಕೀಲ ಕೆಬಿಕೆ ಸ್ವಾಮಿ, ಆರೋಪಿಯು ಸಮೀಪದ ಪೊಲೀಸ್ ಠಾಣೆಯಲ್ಲಿ ಪಿಎಸ್‌ಐ ಆಗಿ ಕಾರ್ಯನಿರ್ವಹಿಸುತ್ತಿದ್ದರೂ, ಪತ್ನಿಯ ಸಾವಿನ ಕುರಿತು ವರದಿಯಾಗಿಲ್ಲ. ಆರೋಪಿಯು 14 ಗಂಟೆಗಳಿಗೂ ಹೆಚ್ಚು ಕಾಲ ನಾಪತ್ತೆಯಾಗಿದ್ದರು ಮತ್ತು ಅವರ ವಿರುದ್ಧದ ಸಾಕ್ಷ್ಯಗಳನ್ನು ನಾಶಪಡಿಸಲಾಗಿದೆ ಎಂದರು.

ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಉಲ್ಲೇಖಿಸಲಾದ ಬಾಹ್ಯ ಮತ್ತು ಆಂತರಿಕ ಗಾಯಗಳು ಮತ್ತು ಘಟನಾ ಸ್ಥಳದಲ್ಲಿ ಕಂಡ ರಕ್ತದ ಕಲೆಗಳು ಹಾಗೂ ಸಂತ್ರಸ್ತೆ ಬರೆದಿರುವ ಡೆತ್ ನೋಟ್ ಆರೋಪಿ ವಿರುದ್ಧವೇ ಬೆರಳು ಮಾಡಿ ತೋರಿಸುತ್ತವೆ. ಜಾಮೀನಿನ ಮೇಲೆ ಬಿಡುಗಡೆಯಾದರೆ, ಅವರು ತಮ್ಮ ಪ್ರಭಾವವನ್ನು ಬಳಸಿಕೊಂಡು ಪ್ರಾಸಿಕ್ಯೂಷನ್ ಸಾಕ್ಷಿಗಳನ್ನು ತಿರುಚಬಹುದು ಮತ್ತು ಆ ಮೂಲಕ ಪ್ರಾಸಿಕ್ಯೂಷನ್ ಪ್ರಕರಣಕ್ಕೆ ಅಡ್ಡಿಯಾಗಬಹುದು ಎಂದು ಅವರು ವಾದಿಸಿದರು.

ಆರೋಪಿಯು ತನ್ನ ಮಗಳ ಆತ್ಮಹತ್ಯೆ ಬಗ್ಗೆ ದೂರುದಾರರಿಗೆ (ತಂದೆಗೆ) ತಿಳಿಸಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ ಎಂದು ನ್ಯಾಯಾಲಯವು ಗಮನಿಸಿದೆ. 

ಮರಣೋತ್ತರ ಪರೀಕ್ಷೆಯ ವರದಿ ಪ್ರಕಾರ, ದೇಹದ ಮೇಲೆ ಕೆಲವು ಬಾಹ್ಯ ಗಾಯಗಳು ಮತ್ತು ಆಂತರಿಕವಾಗಿಯೂ ಗಾಯಗಳಾಗಿದ್ದು, ರಕ್ತಸ್ರಾವವಾಗಿರುವುದನ್ನು ತಿಳಿಸಿದೆ. 'ಜಾಮೀನನ್ನು ತಿರಸ್ಕರಿಸಿ ವಿಚಾರಣಾ ನ್ಯಾಯಾಲಯವು ನೀಡಿದ ಆದೇಶವನ್ನು ತಳ್ಳಿಹಾಕಲು ಯಾವುದೇ ಆಧಾರಗಳಿಲ್ಲ' ಎಂದು ಉಚ್ಚ ನ್ಯಾಯಾಲಯವು ಮೇಲ್ಮನವಿಯನ್ನು ವಜಾಗೊಳಿಸಿತು.

ಆರೋಪಿ ತನ್ನ ವಿರುದ್ಧದ ಸಂಪೂರ್ಣ ಆರೋಪಗಳು ಸುಳ್ಳು ಮತ್ತು ದೂರುದಾರರ ಮಗಳು ಬರೆದಿರುವ ಡೆತ್ ನೋಟ್‌ನಲ್ಲಿ ತನ್ನ ಸಾವಿಗೆ ನನ್ನನ್ನು ಹೊಣೆಗಾರನನ್ನಾಗಿ ಮಾಡಿಲ್ಲ ಮತ್ತು ತಮ್ಮ ವಿರುದ್ಧ ಯಾವುದೇ ಆರೋಪ ಮಾಡಿಲ್ಲ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com